ಡಾ.ಬಿ.ಆರ್ ಅಂಬೇಡ್ಕರ್ ಗೆ ಅಪಮಾನ: ಸರ್ಕಾರ ಜೀವಂತ ಇದ್ದರೆ ಜೈನ್ ವಿವಿ ವಿರುದ್ಧ ಕ್ರಮಕ್ಕೆ ಆಗ್ರಹ: ಹೆಚ್.ವಿಶ್ವನಾಥ್
ದೇಶ ಪ್ರೇಮವನ್ನು ಇವರಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಸೂಲಿಬೆಲೆ, ರೋಹಿತ್ ಚಕ್ರವರ್ತಿ, ಮುತಾಲಿಕ್ ವಿರುದ್ಧ ಹೆಚ್.ವಿಶ್ವನಾಥ್ ಕಿಡಿಕಾರಿದರು.
ಮೈಸೂರು,ಫೆಬ್ರವರಿ13: ಜೈನ್ ಕಾಲೇಜಿನಲ್ಲಿ ನಡೆದ ಕಿರು ನಾಟಕದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಎಂದು ಸಂಭೋದಿಸಿದ್ದಾರೆ. ಜಾತಿ, ಸಮಾಜದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ ನಾಟಕ ಪ್ರದರ್ಶನ ಮಾಡಿದ್ದಾರೆ. ಆ ನಾಟಕ ಜಾತಿ ವ್ಯವಸ್ಥೆಯ ಪರವಾಗಿ ಇರುವುದು ಎದ್ದು ಕಾಣುತ್ತದೆ ಎಂದು ಹೆಚ್. ವಿಶ್ವನಾಥ್ ಹೇಳಿದರು.
ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಸಂವಿಧಾನ ವಿರೋಧಿ ನಡೆ ತೋರಿದ್ದು, ಒಂದು ಕಡೆ ಭಾರತ ಮಾತೆಯ ದೇವಸ್ಥಾನ ಕಟ್ಟಿದ್ದಾರೆ. ಇನ್ನೊಂದು ಕಡೆ ಸಂವಿಧಾನ, ಡಾ.ಅಂಬೇಡ್ಕರ್ ಅವರನ್ನ ಅವಮಾನಿಸುತ್ತಾರೆ. ಭಾರತ ಮಾತೆ ಜನರ ಮನದಲ್ಲಿ ರಾರಾಜಿಸುತ್ತಿದ್ದು, ಇವರಿಂದ ದೇಶ ಪ್ರೇಮವನ್ನು ಕಲಿಯುವ ಅವಶ್ಯಕತೆ ಇಲ್ಲ ಎಂದು ಸೂಲಿಬೆಲೆ, ರೋಹಿತ್ ಚಕ್ರವರ್ತಿ, ಮುತಾಲಿಕ್ ವಿರುದ್ಧ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ಪ್ರಮೋದ್ ಮುತಾಲಿಕ್ ಅವರು ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರ ಇದ್ದಿದ್ದರೆ ಜೈನ್ ಕಾಲೇಜು ವ್ಯವಸ್ಥಾಪಕ ಮಂಡಳಿ ಜೈಲಿನಲ್ಲಿ ಇರಬೇಕಿತ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ ಪ್ರಗತಿಪರ ಚಿಂತಕರು, ಅಂಬೇಡ್ಕರ್ ವಾದಿಗಳು ಬಾಯಿ ಬಿಡುತ್ತಿಲ್ಲ.

ವಿಶ್ವ ಮಟ್ಟದಲ್ಲಿ ಭಾರತಕ್ಕೆ ಗೌರವ ಬಂದಿದ್ದರೆ ಅಂಬೇಡ್ಕರ್ ಸಂವಿಧಾನದಿಂದ. ರಾಮಾಯಣ, ಖುರಾನ್, ಬೈಬಲ್ ಗಿಂತಲೂ ಸಂವಿಧಾನ ಪವಿತ್ರವಾದದ್ದು. ಇದರ ಬಗ್ಗೆ ನಾಡಿನ ಸಂಸದರು, ಶಾಸಕರು ಹಾಗೂ ವಿಪಕ್ಷಗಳು ದನಿ ಎತ್ತುತ್ತಿಲ್ಲ. ನಿಜಕ್ಕೂ ಇದು ತಲೆ ತಗ್ಗಿಸುವ ಸಂಗತಿ ಎಂದು ಹೆಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.












Click it and Unblock the Notifications