ಮೋದಿಯ ಅನುಸರಿಸಲಿದ್ದಾರೆ ಯಡಿಯೂರಪ್ಪ: ಸಿಎಂ ಕಚೇರಿಯಲ್ಲಿ ಬದಲಾವಣೆ
ಬೆಂಗಳೂರು, ಅಕ್ಟೋಬರ್ 19: ಪ್ರಧಾನಿ ಮೋದಿಯ ಕಾರ್ಯವೈಖರಿಯನ್ನೇ ಅನುಸರಿಸುವ ಯತ್ನವನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಕಚೇರಿಯ ಮಾದರಿಯ ವ್ಯವಸ್ಥೆಯನ್ನು ಯಡಿಯೂರಪ್ಪ ತಮ್ಮ ಕಚೇರಿಯಲ್ಲೂ ತರಲು ಬಯಸಿದ್ದು, ಡಿಜಿಟಲ್ ಟಚ್ ಜೊತೆಗೆ ಇನ್ನೂ ಕೆಲವು ಬದಲಾವಣೆಗಳು ಸಿಎಂ ಕಚೇರಿಯಲ್ಲಿ ಆಗಲಿವೆ.
ಮುಖ್ಯಮಂತ್ರಿ ಕಚೇರಿಗೆ ಬರುವ ಪತ್ರಗಳು, ದೂರುಗಳು ಬೇಗನೆ ವಿಲೇವಾರಿ ಆಗುವುದಿಲ್ಲವೆಂಬ ದೂರು ಬಂದ ಕಾರಣ ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಆದೇಶವನ್ನು ಅಧಿಕಾರಿಗಳಿಗೆ ನೀಡಿದ್ದು, ಡಿಜಿಟಲ್ ವ್ಯವಸ್ಥೆಯ ಜೊತೆಗೆ ಇನ್ನೂ ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ.

ಯಾವುದೇ ಪತ್ರಗಳು, ಮನವಿಗಳು, ದೂರುಗಳು ಬಂದರೂ ಎರಡೇ ದಿನದಲ್ಲಿ ಪರಿಶೀಲನೆ ಮುಗಿದು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಆದೇಶಿಸಿದ್ದಾರೆ.
ಸಿಎಂ ಅವರ ಹೆಚ್ಚುವರಿ ಕಾರ್ಯದರ್ಶಿ ಪಿ.ರವಿಕುಮಾರ್ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದು, ಒಂದು ವಾರದ ಒಳಗಾಗಿ ಹೊಸ ವ್ಯವಸ್ಥೆ ಜಾರಿ ಆಗಬೇಕು ಎಂದು ಸೂಚಿಸಿದ್ದಾರೆ. ಬದಲಾವಣೆ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿವೆ.
ಸಿಎಂ ಕಚೇರಿಗೆ ಬಂದ ಕಡತವನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿ, ಸಿಎಂ ಅವರಿಗೆ ಮಾಹಿತಿ ನೀಡಿ, ಅಭಿಪ್ರಾಯ ಪಡೆದು ಕಡತವನ್ನು ವಿಲೇವಾರಿ ಮಾಡಲಾಗುವುದು. ಸಿಎಂ ಸಹಿ ಆದ ನಂತರ ಯಾವುದೇ ಅಡೆ-ತಡೆ ಇಲ್ಲದೆ ಕಡತ ಸರಾಗವಾಗಿ ಮುಂದುವರೆಯಲು ಸಹ ವ್ಯವಸ್ಥೆ ಮಾಡಲಾಗುವುದು.
ಕಾಗದ ರಹಿತ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದರ ಜೊತೆಗೆ ಪತ್ರ ನಿಗಾ ವ್ಯವಸ್ಥೆ (ಲೆಟರ್ ಮಾನಿಟರಿಂಗ್ ಸಿಸ್ಟಂ) ಅನ್ನು ಜಾರಿಗೆ ತರಲಾಗುವುದು. ಈ ಬದಲಾವಣೆಗಳನ್ನು ಮಾಡಲು ನ್ಯಾಷನಲ್ ಇನ್ಫರ್ಮೇಟಿಕ್ ಸೆಂಟರ್ ನ ನೆರವು ಪಡೆಯಲಾಗುವುದು.
ಮುಖ್ಯಮಂತ್ರಿ ಕಾರ್ಯಾಲಯ ಮತ್ತು ಸಿಎಂ ಕಚೇರಿ ಸಂಬಂಧಿತ ಅಧಿಕಾರಿಗಳ ಜವಾಬ್ದಾರಿ ಮರುಹಂಚಿಕೆ ಮಾಡಲಾಗಿದ್ದು, ಅಧಿಕಾರಿಗಳಿಗೆ ಅವರ ಸಾಮರ್ಥ್ಯ, ನೈಪುಣ್ಯದ ಆಧಾರದಲ್ಲಿ ಜವಾಬ್ದಾರಿ ಮರುಹಂಚಿಕೆ ಮಾಡಲಾಗಿದೆ.












Click it and Unblock the Notifications