3000 ಕೋಟಿ ರೂ. ಹವಾಲ ದಂಧೆ ಪ್ರಕರಣದ ಸ್ಫೋಟಕ ಸತ್ಯಗಳು!
ಬೆಂಗಳೂರು ಡಿ. 24: ಕೇವಲ ನಾಲ್ಕು ಜನರು ಮೂರು ತಿಂಗಳಲ್ಲಿ ನಡಸಿದ್ದು ಬರೋಬ್ಬರಿ 3 ಸಾವಿರ ಕೋಟಿ ಹವಾಲ ದಂಧೆ. ಅದೂ ಬೆಂಗಳೂರಿನ ಕ್ಯಾಷ್ ಡೆಪಾಸಿಟ್ ಮಿಷಿನ್ಗಳಲ್ಲಿ..! ಇದೇ ರೀತಿ ರಾಜ್ಯದಲ್ಲಿ ಬರೋಬ್ಬರಿ 150 ಮಂದಿ ಇದೇ ರೀತಿಯ ಹವಾಲ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ನೆರೆ ರಾಜ್ಯಗಳಿಗೂ ಹಬ್ಬಿದೆ. ಈ ಪ್ರಕರಣ ದೇಶದ 25 ಬ್ಯಾಂಕ್ಗಳಿಗೂ ತಲೆನೋವು ತಂದಿಡಲಿದೆ.
ಪುಟ್ಟೇನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಮತ್ತು ತಂಡ ಒಂದು ಪೋನ್ ಕರೆ ಆಧರಿಸಿ ಬಯಲಿಗೆ ಎಳೆದ ಹವಾಲ ದಂಧೆಯ ಪ್ರಕರಣದ ಸ್ಫೋಟಕ ಸತ್ಯವಿದು. ವಿಪರ್ಯಾಸವೆಂದರೆ ಇಂತಹ ಬಹುದೊಡ್ಡ ಪ್ರಕರಣ ಬೆಳಕಿಗೆ ಬಂದರೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ನಿದ್ದೆ ಮಾಡುತ್ತಿದ್ದಾರೆ. ಇಡೀ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡ ಮೇಲು ಮಾಡುವ ಪ್ರಕರಣದ ತನಿಖೆಗೆ ಒಂದು ವಿಶೇಷ ತನಿಖಾ ತಂಡ ರಚಿಸಿ ಅದರ ಆಳ ಅಂತರ ಹೊರ ತೆಗೆಯುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಅದೇ ಕ್ಷುಲ್ಲಕ ಪ್ರಕರಣಗಳಲ್ಲಿ ದೊಡ್ಡ ದೊಡ್ಡ ತನಿಖಾ ತಂಡ ರಚಿಸಿ ಸರ್ಕಾರದ ಹಣ ಪೋಲು ಮಾಡುತ್ತಾರೆ.
ಕೇವಲ 4 ಆರೋಪಿಗಳಿಂದ ಮೂರು ಸಾವಿರ ಕೋಟಿ ವಹಿವಾಟು ನಡೆದಿದೆ. ಇಂತಹ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ಪರಿಗಣಿಸದೇ ಒಬ್ಬ ಇನ್ಸ್ಪೆಕ್ಟರ್ ಮೇಲೆ ಕೈ ಬಿಟ್ಟು ಸುಮ್ಮನಾಗಿದ್ದಾರೆ. ಸದ್ಯ ಇಡಿ ಅವರಿಗೆ ಪತ್ರ ಬರೆದಿದ್ದೂ, ಈ ಹಣ ಯಾವ ಚಟುವಟಿಕೆಗೆ ಬಳಕೆಯಾಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರ ತನಿಖೆ ನಡೆಸಬೇಕಿದೆ. ಹೀಗಾಗಿ ತುರ್ತು ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುವ ಅಗತ್ಯತೆ ಬಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇಡೀ ದೇಶದ ಅರ್ಥ ವ್ಯವಸ್ಥೆಯನ್ನೇ ಬುಡ ಮೇಲು ಮಾಡುವ ಚಟುವಟಿಕೆ ನಿರಂತರ ನಡೆಯುತ್ತಿರುವುದು ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದಿದೆ. ಕೇವಲ ನಾಲ್ಕು ವ್ಯಕ್ತಿಗಳು ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ರೂ. ಹವಾಲ ದಂಧೆ ನಡೆಸಿರುವ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.
ಸೆರೆ ಸಿಕ್ಕಿರುವ ನಾಲ್ವರ ಮಾಹಿತಿ ಜಾಡು ಹಿಡಿದು ತನಿಖೆ ನಡೆಸಿದಾಗ ಬರೋಬ್ಬರಿ 150 ಮಂದಿ ಇದೇ ರೀತಿಯ ಹವಾಲ ದಂಧೆ ದೇಶದಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಮೂವರು ಮೂರು ಸಾವಿರ ಕೋಟಿ ವಹಿವಾಟು ನಡೆಸಿದ್ದಾರೆ ಎಂದಾದರೆ, ಇನ್ನು 150 ಮಂದಿಯಿಂದ ಅದೆಷ್ಟು ಸಾವಿರ ಕೋಟಿ ವಹಿವಾಟು ನಡೆದಿದೆಯೋ ದೇವರೇ ಬಲ್ಲ. ಈ ಸತ್ಯವನ್ನು ಜಾರಿ ನಿರ್ದೇಶನಾಲಯ ಬಯಲಿಗೆ ತರಬೇಕಿದೆ. ಬೇನಾಮಿ ವಹಿವಾಟಿನ ಬಗ್ಗೆ ತನಿಖೆಯನ್ನು ಇಡಿ ನಡೆಸಿದರೂ, ಈ ಹಣ ಯಾವುದಕ್ಕೆ ಬಳಕೆ ಯಾಗಲು ವಹಿವಾಟು ನಡೆಯುತ್ತಿತ್ತು ಎಂಬುದನ್ನು ಪೊಲೀಸರೇ ತನಿಖೆ ನಡೆಸಬೇಕಿದೆ.
ದೇಶದ ಗಡಿಗಳಾಚೆ ದಂಧೆ:
ಈ ಹವಾಲ ದಂಧೆಗೂ ಅರಬ್ ರಾಷ್ಟ್ರಗಳ ನಡುವೆ ನೇರ ನಂಟು ಹೊಂದಿದೆ. ದುಬೈನಿಂದ ಹಣ ಭಾರತಕ್ಕೆ ಬರುತ್ತಿದ್ದು, ಜನ ಸಾಮಾನ್ಯರ ಖಾತೆಗಳಿಗೆ ಹಣ ತುಂಬಿ ಪಡೆಯುವ ಮೂಲಕ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತನೆ ಮಡಲಾಗುತ್ತಿದೆ. ಮೂಲತಃ ಕೇರಳದವರೇ ಹೆಚ್ಚು ಮಂದಿ ಈ ದಂಧೆಯಲ್ಲಿ ಶಾಮೀಲಾಗಿದ್ದು, ಈ ಹಣ ಮೂಲ ಯಾವುದು? ಹವಾಲ ಮೂಲಕ ಭಾರತಕ್ಕೆ ತಲುಪಿದ ಬಳಿಕ ಇಲ್ಲಿ ಅದು ಯಾವುದಕ್ಕೆ ಬಳಕೆಯಾಗುತ್ತಿದೆ. ದೇಶದ್ರೋಹಿ ಚಟುವಟಿಕೆಗಳ ಪೋಷಣೆಗಾಗಿ ಬಳಕೆಯಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಹವಾಲ ದಂಧೆ ಒಂದು ರಾಜ್ಯ ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಕೇಂದ್ರ ತನಿಖಾ ಸಂಸ್ಥೆಗಳು ಈ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕಿದೆ. ಸುಮಾರು ಮೂರು ಸಾವಿರ ಬ್ಯಾಂಕ್ ಖಾತೆಗಳನ್ನು ಪುಟ್ಟೇನಹಳ್ಳಿ ಪೊಲೀಸರು ಜಪ್ತಿ ಮಾಡಿದ್ದು, ಅವುಗಳಲ್ಲಿ ನಡೆದಿರುವ ವಹಿವಾಟಿನ ವಿವರ ಶೀಘ್ರದಲ್ಲಿಯೇ ಹೊರ ಬೀಳಲಿದೆ. ದೇಶದ ಗಡಿ ದಾಟಿರುವ ಈ ಅಕ್ರಮದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ಮಾಡುವ ಅಗತ್ಯವಿದ್ದು, ಜಾರಿ ನಿರ್ದೇಶನಾಲಯ ತನಿಖೆಗೆ ಕೋರಲಾಗಿದೆ. ಇಡಿ ಅಧಿಕಾರಿಗಳ ಪ್ರಕರಣ ತನಿಖೆ ಕೈಗತ್ತಿಕೊಂಡಿದ್ದು, ಮತ್ತಷ್ಟು ಸತ್ಯಾಂಶಗಳು ಹೊರ ಬೀಳಲಿವೆ.

ಇನ್ನು ಪುಟ್ಟೇನಹಳ್ಳಿ ಸಮೀಪ ಎಟಿಎಂ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ಮಚ್ಚು ಹಿಡಿದುಕೊಂಡು ಸಿಡಿಎಂ ಯಂತ್ರಕ್ಕೆ ಹಣ ತುಂಬುತ್ತಿದ್ದ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಆತನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಮೇರೆಗೆ ಬಾಡಿಗೆ ಮನೆಯಲ್ಲಿ ಮೂವರನ್ನು ಬಂಧಿಸಿದ್ದರು. ಬಂಧಿತರು 2886 ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಬರೋಬ್ಬರಿ 25 ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳ ಮೂಲಕ ವಹಿವಾಟು ನಡೆಸಲಾಗಿದೆ. ಸಾವಿರಾರು ಕೋಟಿ ವಹಿವಾಟು ನಡೆದರೂ ಬ್ಯಾಂಕ್ ನವರಿಗೆ ಗಮನಕ್ಕೆ ಬರಲಿಲ್ಲವೇ ? ಸಾಮಾನ್ಯ ವ್ಯಕ್ತಿಗಳ ಖಾತೆಗೆ ಕ್ಯಾಷ್ ಡೆಪಾಸಿಟ್ ಯಂತ್ರಗಳಿಂದ ಹಣ ಹೋಗುತ್ತಿರುವ ಸಂಶಯ ಬ್ಯಾಂಕ್ ನವರಿಗೆ ಮೂಡಲಿಲ್ಲವೇ? ಬ್ಯಾಂಕುಗಳೇ ಬೇನಾಮಿ ವಹಿವಾಟಿಗೆ ಕೆಂಪು ಹಾಸು ಹಾಕಿ ಕೂತಿವೆಯೇ? ಎಂಬ ಪ್ರಶ್ನೆಗಳು ಮೂಡಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸದ ಹೊರತು ಪ್ರಕರಣದ ಸತ್ಯಾಂಶ ಹೊರ ಬರುವುದು ತೀರಾ ಕಷ್ಟ.












Click it and Unblock the Notifications