ಮಾಧ್ಯಮ ಮಿತ್ರರು ಎಡಬಿಡಂಗಿಗಳು : ಅನಂತಕುಮಾರ್ ಹೆಗಡೆ
ಕಾರವಾರ, ಸೆಪ್ಟೆಂಬರ್ 12 : 'ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮ ಮಿತ್ರರನ್ನು ಹೊರತು ಪಡಿಸಿ ಹೊರಗಡೆ ಎಡಬಿಡಂಗಿಗಳೇ ತುಂಬಿಕೊಂಡಿದ್ದಾರೆ. ಅವರಿಗೆ ಹೇಗೆ ಮಾತನಾಡಬೇಕು ತಿಳಿದಿಲ್ಲ, ಪ್ರಶ್ನೆ ಕೇಳಲು ಬರುವುದಿಲ್ಲ. ಹೇಳಿದ್ದನ್ನು ಬರೆದುಕೊಳ್ಳುವ ಯೋಗ್ಯತೆಯೂ ಇಲ್ಲ' ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಪರಿಚಯ
ಕುಟುಟಾ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈ ಹೇಳಿಕೆ ನೀಡಿದ್ದಾರೆ. ಹೊನ್ನಾವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
'ಗೌರವದಿಂದ ಮಾತನಾಡಿದರೆ ಗೌರವದಿಂದ ಮಾತನಾಡುತ್ತೇವೆ. ಯಡವಟ್ಟಿನಿಂದ ಮಾತಾಡಿದರೆ ಅದಕ್ಕಿಂತ ಯಡವಟ್ಟು ನಾವು. ಅಪಪ್ರಚಾರಕ್ಕೆಲ್ಲ ಹೆದರುವುದಿಲ್ಲ. ಪ್ರಚಾರವೋ ಅಪಪ್ರಚಾರವೋ ಎಲ್ಲವನ್ನು ನುಂಗಿ ನೀರು ಕುಡಿಯುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ' ಎಂದು ಹೆಗಡೆ ಸವಾಲು ಹಾಕಿದರು.
"ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿವರೆಗೆ ಭಯೋತ್ಪಾದನೆ ಇರುತ್ತೆ"
'ತುಂಬಾ ನಿಷ್ಠುರವಾಗಿ ಹೇಳಬೇಕಾ? ಏನು ಹೇಳ್ತಿರೋ ಹೇಳಿಕೊಳ್ಳಿ, ಪ್ರಚಾರವೋ ಅಪಪ್ರಚಾರವೋ' ಎಂದು ಕೇಂದ್ರ ಸಚಿವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಅನಂತಕುಮಾರ್ ಹೆಗಡೆ, ಈ ಬಾರಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದಾರೆ. ಎಲ್ಲವನ್ನು ಹೇಳಿದ ಅವರು ಕೊನೆಯಲ್ಲಿ, 'ನನ್ನ ಮಾತು ತೀಕ್ಷ್ಣವಾಗಿದ್ದರೆ ಕ್ಷಮಿಸಿ ಬಿಡಿ' ಎಂದು ಮಾತು ಹೇಳಲು ಮಾತ್ರ ಮರೆಯಲಿಲ್ಲ.