ಬೇರೆ ಜಿಲ್ಲೆಗಳಲ್ಲೂ ಕೈಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಿ: ಸಿಎಂ ಸಲಹೆ
ಬೆಂಗಳೂರು, ಆಗಸ್ಟ್ 03: ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ನಿರ್ಮಾಣದ ಜತೆಗೆ ಉದ್ಯೋಗ ಸೃಷ್ಟಿಸಲು ಅಗತ್ಯವಾದ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಲ್ಲಿ ಸ್ಥಾಪಿಸುವಂತೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೈಗಾರಿಕೆ ವಿಷಯಗಳ ಕುರಿತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ ಅಧ್ಯಕ್ಷ ಸಂಜೀವ್ ಬಜಾಜ್ ಹಾಗೂ ಮಹಾ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅವರು ಚರ್ಚಿಸಿದರು.
ಈ ವೇಳೆ ಬಜಾಜ್ ಮತ್ತು ಬ್ಯಾನರ್ಜಿ ಅವರಿಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಬೆಂಗಳೂರು ಹೊರತುಪಡಿಸಿ ರಾಜ್ಯ ಇತರ ನಗರಗಳಾದ ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರಿನಲ್ಲೂ ಕೈಗಾರಿಕೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ. ಈ ಕುರಿತು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಈ ಮೂಲಕ ಮುಖ್ಯಮಂತ್ರಿಗಳು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲೂ ಕೈಗಾರಿಕಾ ವಲಯ ವಿಸ್ತರಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.
ಸಿಐಐ ಸರ್ಕಾರದೊಂದಿಗೆ ಕೈ ಜೋಡಿಸಲಿದೆ
ಸಿಐಐ ಅಧ್ಯಕ್ಷ ಸಂಜೀವ್ ಬಜಾಜ್ ಮಾತನಾಡಿ, ಬೆಂಗಳೂರಿನಾಚೆಗೂ ಇರುವ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸ್ಟಾರ್ಟ್ಅಪ್ಗಳು, ರಕ್ಷಣಾ ಉಪಕರಣ ಮತ್ತು ಏರೋಸ್ಪೇಸ್ ವಲಯಕ್ಕೆ ಉತ್ತೇಜನ ನೀಡಲಾಗುತ್ತಿದೆ, ಸಿಐಐ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸಲು ಹಾಗೂ ಈ ಕುರಿತು ಸರ್ಕಾರದೊಂದಿಗೆ ಕೈಜೋಡಿಸಲು ಇಚ್ಛಿಸಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೈಗಾರಿಕೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಹಾಗೂ ಉದ್ಯೋಗ ಸೃಜನೆಯಲ್ಲಿ ಸಿಐಐ ಕೈಜೋಡಿಸಲು ಸಿಐಐ ಉತ್ಸುಕವಾಗಿದೆ. ಬೆಂಗಳೂರಿನಾಚೆಗೆ ಕೈಗಾರಿಕಾ ಕೇಂದ್ರಗಳಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ಬಜಾಜ್ ತಿಳಿಸಿದರು.
ಸಿಐಐ ಕೈಗಾರಿಕೆ ಉದ್ದೇಶ ಬಗ್ಗೆ ಪ್ರಸ್ತಾವನೆ ಸಲ್ಲಿಸಿ:ಸಿಎಂ
ಬಜಾಜ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ಸೇರಿದಂತೆ ಸಿಐಐ ಉದ್ದೇಶ ಕುರಿತು ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ಇದಲ್ಲದೆ, ಕೈಗಾರಿಕೋದ್ಯಮ ವಲಯದ ಅಭಿವೃದ್ಧಿಗೆ ಅಗತ್ಯವಿರುವ ಅಂಶಗಳು, ಸರ್ಕಾರದಿಂದ ಇರುವ ನಿರೀಕ್ಷೆಗಳ ಕುರಿತು ಅರಿತುಕೊಳ್ಳಲು ಆಗಾಗ ಕೈಗಾರಿಕೋದ್ಯಮಿಗಳ ಜತೆ ಸಂವಾದ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕೈಗಾರಿಕೆ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಕೈ ಜೋಡಿಸಿ: ಸಿಎಂ
ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಳ್ಳಲು ಹಾಗೂ ರಾಜ್ಯವನ್ನು ಸಂಶೋಧನೆ ಮತ್ತು ಅಭಿವೃದ್ಧಿಯ ನೆಲೆಯಾಗಿ ರೂಪಿಸಬೇಕಿದೆ. ಅದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಜಾರಿಗೆ ತರಲಾಗುತ್ತಿದೆ. ಗ್ಯಾರೇಜಿನಿಂದ ಸಂಶೋಧನಾ ಸಂಸ್ಥೆಗಳ ವರೆಗೆ ವಿವಿಧ ಹಂತಗಳಲ್ಲಿ ನಡೆಯುವ ಸಂಶೋಧನೆಗಳಿಗೆ ಮಾನ್ಯತೆ ನೀಡುವುದು ಈ ನೀತಿಯ ಗುರಿಯಾಗಿದೆ. ಇದರ ಅನುಷ್ಠಾನದಲ್ಲಿ ಸಿಐಐ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಐಟಿಐ ಇನ್ನಿತರ ಕಾಲೇಜುಗಳ ಉನ್ನತೀಕರಣ
ಉದ್ಯೋಗ ಸೃಜನೆಗೆ ಒತ್ತು ನೀಡುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹಕ ನೀಡುವ ಉದ್ಯೋಗ ನೀತಿಯನ್ನು ಸರ್ಕಾರ ಜಾರಿಗೊಳಿಸಲಿದೆ. ಇದರಡಿ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡಿ 'ಇಂಡಸ್ಟ್ರಿ 4.0'ಗೆ ಅಗತ್ಯವಿರುವ ಕೌಶಲ್ಯವುಳ್ಳ ಮಾನವ ಸಂಪನ್ಮೂಲ ಒದಗಿಸಲು ರಾಜ್ಯದ ಐಟಿಐ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದು ವಿವರಿಸಿದರು.
ಜತೆಗೆ ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣದ ಕುರಿತು ಮಾಹಿತಿ ನೀಡಿದ ಬೊಮ್ಮಾಯಿ, ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳನ್ನು ಒಳಗೊಂಡಂತೆ ಸಂಪೂರ್ಣ ವ್ಯವಸ್ಥೆಯೇ ಒಂದಾಗಿ ಶ್ರಮಿಸುತ್ತಿದೆ. ಇದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆ, ಸ್ಟಾರ್ಟ್ಅಪ್ಗಳಲ್ಲಿ, ನಾವೀನ್ಯತೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.
ಕರ್ನಾಟಕದಲ್ಲಿ ಬಂಡವಾಳ ಹೂಡಲು ಹೆಚ್ಚು ಒಲವು
ರಾಜ್ಯದಲ್ಲಿ ಪ್ರಸ್ತುತ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೈಡ್ರೋಜನ್ ಎನರ್ಜಿ, ಅಮೋನಿಯಾ ಉತ್ಪಾದನೆ, ಸೆಮಿ-ಕಂಡಕ್ಟರ್ ತಯಾರಿಕೆ, ವಿದ್ಯುತ್ ವಾಹನಗಳ ತಯಾರಿಕೆ ಮೊದಲಾದ ಹೊಸ ಹೊಸ ವಲಯಗಳಲ್ಲಿ ಹೂಡಿಕೆ ಮಾಡುವವರು ಹೆಚ್ಚ ಮನಸ್ಸು ಮಾಡುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ದಾವೊಸ್ ವರ್ಲ್ಡ ಎಕನಾಮಿಕ್ ಫೋರಂ ಸರ್ಕಾರ 1.31 ಲಕ್ಷ ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಗಳ ಒಪ್ಪಂದಗಳಿಗೆ ಸಹಿ ಮಾಡಿದೆ.