ಬಡವರ ಇಂದಿರಾ ಕ್ಯಾಂಟೀನ್ಗೆ ಮರುಜೀವ: 50 ಹೊಸ ಕ್ಯಾಂಟೀನ್ ಓಪನ್?
ಬೆಂಗಳೂರು: ಬಡವರ ಹೊಟ್ಟೆ ತುಂಬಿಸಿದ್ದ ಇಂದಿರಾ ಕ್ಯಾಂಟೀನ್ಗೆ ಮರುಜೀವ ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರ ತಮ್ಮ ಹಿಂದಿನ ಯೋಜನೆಗೆ ಹುರುಪು ತುಂಬಲು ಮುಂದಾಗಿದೆ. ಈ ಕಾರಣಕ್ಕೆ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಮುಂದಾಗಿದೆ ಅನ್ನೋ ಮಾಹಿತಿ ಸಿಕ್ಕಿದ್ದು, ಜೊತೆಗೆ ಬಿಜೆಪಿ ವಿರುದ್ಧ ಹೊಸ ಅಸ್ತ್ರವೂ ಪ್ರಯೋಗವಾಗಿದೆ.
ಹೊಟ್ಟೆ ಹಸಿದವರು, ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಹಾಲಿ ಇಂದಿರಾ ಕ್ಯಾಂಟೀನ್ ಮೇಲ್ದರ್ಜೆಗೇರಿಸಲು ಕಾಂಗ್ರೆಸ್ ಸರ್ಕಾರ ಪ್ಲ್ಯಾನ್ ರೂಪಸಿದೆ. ಇದೇ ಕಾರಣಕ್ಕೆ ಈಗ ಹೊಸದೊಂದು ಪ್ಲ್ಯಾನ್ ಕೂಡ ಸಿದ್ಧವಾಗಿದೆ. ಅದೇನೆಂದರೆ ಹೊಸ 50 ಕ್ಯಾಂಟೀನ್ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಅನುದಾನವನ್ನ ಕೋರಿ ಬಿಬಿಎಂಪಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಜೊತೆಗೆ ಈಗಾಗಲೇ ನಿರ್ಮಾಣವಾಗಿ ಕಳೆದ ಕೆಲ ವರ್ಷದಿಂದ ಮೂಲೆ ಗುಂಪಾಗಿದ್ದ ರಾಜ್ಯದ ಇಂದಿರಾ ಕ್ಯಾಂಟೀನ್ಗಳನ್ನ ಮೇಲ್ದರ್ಜೆಗೇರಿಸಲು ಒಟ್ಟು 15 ಕೋಟಿ ರೂಪಾಯಿ ಕೇಳಿದೆ ಎನ್ನಲಾಗಿದೆ. ಈ ಮೂಲಕ ಬಡ ಜನರ 5 ಸ್ಟಾರ್ ಹೋಟೆಲ್ 'ಇಂದಿರಾ ಕ್ಯಾಂಟೀನ್'ಗೆ ಮತ್ತೆ ಜೀವ ಬಂದಂತಾಗಿದೆ.

ಲಕಲಕ ಹೊಳೆಯಲಿದೆ 'ಇಂದಿರಾ ಕ್ಯಾಂಟೀನ್'!
ಹೌದು, ಇದೀಗ 'ಇಂದಿರಾ ಕ್ಯಾಂಟೀನ್' ಸಂಪೂರ್ಣ ಹೊಸ ರೂಪ ಪಡೆಯೋದು ಪಕ್ಕಾ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ಗಳಿಗೆ ಮರುಜೀವ ಬಂದಿದೆ. ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ಗಳ ಸ್ಥಿತಿಗತಿಯ ಕುರಿತಾಗಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು. ಹಾಲಿ ಇರುವ ಇಂದಿರಾ ಕ್ಯಾಂಟೀನ್ಗಳನ್ನು ಮೇಲ್ದರ್ಜೆಗೇರಿಸಲು 15 ಕೋಟಿ ಸೇರಿದಂತೆ ಹೊಸ 50 ಕ್ಯಾಂಟೀನ್ ನಿರ್ಮಾಣಕ್ಕೆ 15 ಕೋಟಿ ರೂಪಾಯಿ ಅಗತ್ಯ ಎಂದು ವರದಿ ಸಲ್ಲಿಕೆಯಾಗಿದೆ. ಹೀಗೆ ಬೆಂಗಳೂರಿನ ಮೂಲೆ ಮೂಲೆಗೆ 'ಇಂದಿರಾ ಕ್ಯಾಂಟೀನ್' ವಿಸ್ತರಣೆಗೆ ಪ್ಲ್ಯಾನ್ ಮಾಡಲಾಗಿದೆ.
ಬಡವರ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ವೈಭವದ ದಿನಗಳನ್ನು ಕಾಣಲಿದೆ.
— Karnataka Congress (@INCKarnataka) June 10, 2023
ಉತ್ತಮ ಗುಣಮಟ್ಟ, ಉತ್ತಮ ಆಹಾರದೊಂದಿಗೆ ಇಂದಿರಾ ಕ್ಯಾಂಟೀನ್ ಗಳನ್ನು ಜನರ ಸೇವೆಗೆ ಮತ್ತೊಮ್ಮೆ ಅಣಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ಬಸವಣ್ಣನ ದಾಸೋಹ ತತ್ವವನ್ನು ಕಾಂಗ್ರೆಸ್ ಸರ್ಕಾರ ಪಾಲಿಸಲಿದೆ.#ಜನಪರಕಾಂಗ್ರೆಸ್ pic.twitter.com/ZSbw9P5AbW
6 ವರ್ಷದ ನಂತರ ಮರುಜೀವ!
ಅಂದಹಾಗೆ ರಾಜ್ಯದಲ್ಲಿ ಬಡವರಿಗಾಗಿ ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿತ್ತು. ಹಿಂದೆ 2013ರಿಂದ 2018 ತನಕ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಇದೇ ರೀತಿ ಹಲವು ಯೋಜನೆ ಜಾರಿಗೆ ತಂದಿದ್ದರು. ತಮಿಳುನಾಡಿನ 'ಅಮ್ಮ ಕ್ಯಾಂಟೀನ್' ರೀತಿ 2017ರಲ್ಲೇ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ 175 ವಾರ್ಡ್ಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆದಿತ್ತು. ರಾಜ್ಯಾದ್ಯಂತ ಹಲವು ಜಿಲ್ಲಾ ಕೇಂದ್ರ & ಪಟ್ಟಣಗಳಲ್ಲೂ ಇಂದಿರಾ ಕ್ಯಾಂಟಿನ್ಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇಂದಿರಾ ಕ್ಯಾಂಟೀನ್ ಮುಚ್ಚಲು ಪ್ರಯತ್ನ ನಡೆಸಿತ್ತು ಅನ್ನೋ ಆರೋಪ ಕೇಳಿಬಂದಿತ್ತು. ಹಾದರೆ ಇದನ್ನ ಬಿಜೆಪಿ ಕೂಡ ತಿರಸ್ಕರಿಸಿತ್ತು. ಆದರೆ ಈಗ 6 ವರ್ಷದ ನಂತರ ಮರುಜೀವ ಪಡೆಯುತ್ತಿವೆ 'ಇಂದಿರಾ ಕ್ಯಾಂಟೀನ್'ಗಳು.

'ಇಂದಿರಾ ಕ್ಯಾಂಟೀನ್'ಗೆ ಹಣದ ಕೊರತೆ
2017-18 ಮತ್ತು 2018-19ರಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಗಳು ಕ್ಯಾಂಟೀನ್ಗೆ ಕ್ರಮವಾಗಿ 100 ಮತ್ತು 145 ಕೋಟಿ ರೂ. ನೀಡಿದ್ದವು. ಆದರೆ ಬಿಜೆಪಿ ಸರ್ಕಾರ ಗ್ರಾಹಕರ ಕೊರತೆ ಎಂದು ಹೇಳಿ 2 ವರ್ಷಗಳಿಂದ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಗಂಭೀರ ಆರೋಪ ಕಾಂಗ್ರೆಸ್ ಮಾಡಿತ್ತು. ಹೀಗಾಗಿ 2022-23ರ ಬಜೆಟ್ನಲ್ಲಿ ಬಿಬಿಎಂಪಿ 63 ಕೋಟಿ ರೂ. ನೀಡಿತ್ತು. ಪ್ರಾಸಂಗಿಕವಾಗಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಮುನ್ಸಿಪಲ್ ಕಾರ್ಪೊರೇಶನ್ನ ಪ್ರತಿ ವಾರ್ಡ್ಗಳಲ್ಲಿ 'ಅಟಲ್ ಆಹಾರ ಕೇಂದ್ರ' ಸ್ಥಾಪಿಸುವುದಾಗಿ ಭರವಸೆ ನೀಡಿತ್ತು.
ಟ್ವೀಟ್ ಮಾಡಿ ಕಾಂಗ್ರೆಸ್ ತಿರುಗೇಟು!
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಡವರ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ವೈಭವದ ದಿನಗಳನ್ನು ಕಾಣಲಿದೆ. ಉತ್ತಮ ಗುಣಮಟ್ಟ, ಉತ್ತಮ ಆಹಾರದೊಂದಿಗೆ ಇಂದಿರಾ ಕ್ಯಾಂಟೀನ್ ಗಳನ್ನು ಜನರ ಸೇವೆಗೆ ಮತ್ತೊಮ್ಮೆ ಅಣಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಸವಣ್ಣನ ದಾಸೋಹ ತತ್ವವನ್ನು ಕಾಂಗ್ರೆಸ್ ಸರ್ಕಾರ ಪಾಲಿಸಲಿದೆ' ಎಂದಿದೆ.
ಒಟ್ನಲ್ಲಿ 'ಇಂದಿರಾ ಕ್ಯಾಂಟೀನ್' ವಿಚಾರದಲ್ಲಿ ಫೈಟ್ ಮಾಡುತ್ತಿದ್ದ ಬಿಜೆಪಿ & ಕಾಂಗ್ರೆಸ್ನ ತಿಕ್ಕಾಟ ಇಲ್ಲೇ ಅಂತ್ಯವಾಗುವ ಲಕ್ಷಣ ಕಾಣ್ತಿದೆ. ಏಕೆಂದರೆ ಬಡವರಿಗೆ ಮತ್ತೆ ರುಚಿ, ಶುಚಿ ಆಹಾರ ನೀಡಲು ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ. ಆದರೆ ಈ ಯೋಜನೆ ಅದೆಷ್ಟು ಬೇಗ ಜಾರಿಗೆ ಬರಲಿದೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications