Vijayapura: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ವಿಫುಲ ಅವಕಾಶಗಳು: ವರದಿ
ಬೆಂಗಳೂರು, ನವೆಂಬರ್ 09: ವಿಜಯಪುರ ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮಶಿನರಿ ಮತ್ತು ಎಕ್ವಿಪ್ಮೆಂಟ್, ನಾನ್-ಮೆಟಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸ್ಯುಟಿಕಲ್ಸ್, ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು ಮತ್ತು ವಿಶೇಷ ಅಲಾಯ್ ಹಾಗೂ ಲೋಹೋತ್ಪನ್ನಗಳ ತಯಾರಿಕೆ ಹೀಗೆ ಒಟ್ಟು ಆರು ಕೈಗಾರಿಕಾ ವಲಯಗಳಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಅತ್ಯುತ್ತಮ ಅವಕಾಶಗಳಿವೆ ಎಂದು 'ಉನ್ನತ ಮಟ್ಟದ ಸಮಿತಿ'ಯೊಂದು ಹೇಳಿದೆ.
ಉನ್ನತ ಮಟ್ಟದ ಸಮಿತಿಯು ಕೈಗಾರಿಕೆ ಯೋಜನೆ ಕುರಿತು ಪ್ರಾಥಮಿಕ ವರದಿಯೊಂದನ್ನು ಗುರುವಾರ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರಿಗೆ ಸಲ್ಲಿಸಿತು. ಏಕಸ್ ಎಸ್ಇಜೆಡ್ ಮತ್ತು ದೆಹಲಿಯ ಸಿಬಿಆರ್ ಇ ಸಂಸ್ಥೆಯ ಪ್ರತಿನಿಧಿಗಳು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

ಸಚಿವ ಎಂಬಿ ಪಾಟೀಲ ಅವರು ರಾಜ್ಯ ಸರ್ಕಾರದಲ್ಲಿ ಕೈಗಾರಿಕಾ ಇಲಾಖೆ ಸಚಿವ ಹುದ್ದೆ ಸ್ವೀಕರಿಸಿದ ಕೆಲದಿನಗಳಲ್ಲೇ ತಮ್ಮ ತವರು ಜಿಲ್ಲೆಯನ್ನು ಕೈಗಾರಿಕಾ ದೃಷ್ಟಿಯಿಂದಲೂ ಮುಂಚೂಣಿಗೆ ತರುವ ಉದ್ದೇಶದಿಂದ ಸಿಬಿಆರ್ ಇ ಸಂಸ್ಥೆಗೆ ವರದಿ ನೀಡುವಂತೆ ಕೋರಿದ್ದರು. ಅವರ ಸೂಚನೆಯಂತೆ ಇಂದು ವರದಿ ಸಲ್ಲಿಕೆ ಆಗಿದೆ.
ವರದಿ ಸ್ವೀಕರಿಸಿ ಸಚಿವರು ಹೇಳಿದ್ದೇನು?
ವರದಿ ಸ್ವೀಕರಿಸಿ ಮಾತನಾಡಿದ ಎಂಬಿ ಪಾಟೀಲ್ ನಮ್ಮಲ್ಲಿ ಎಲ್ಲ ಉದ್ಯಮಗಳು ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡಿವೆ. ಆದರೆ ಬಿಯಾಂಡ್ ಬೆಂಗಳೂರು ಉಪಕ್ರಮದಡಿ ರಾಜಧಾನಿಯ ಆಚೆಗೂ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಹೇರಳ ಅವಕಾಶಗಳಿವೆ. ವಿಜಯಪುರ ಜಿಲ್ಲೆಯಲ್ಲಂತೂ ನೀರು,ವಿದ್ಯುತ್ ಮತ್ತು ಜಮೀನಿನ ಲಭ್ಯತೆಗೆ ಸಮಸ್ಯೆ ಇಲ್ಲ. ಇದರ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಯ ಗುರಿಯೂ ಇದೆ ಎಂದು ತಿಳಿಸಿದರು.
ವರದಿಯಲ್ಲಿ ಗುರುತಿಸಿರುವ ಆರು ವಲಯಗಳಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳನ್ನೂ ಹೇಳಲಾಗಿದೆ. ಇವರನ್ನೆಲ್ಲ ಕರೆಸಿ, ಮುಂದಿನ ಹೆಜ್ಜೆಗಳನ್ನು ಇಡಲಾಗುವುದು. ಒಟ್ಟಿನಲ್ಲಿ ವಿಜಯಪುರವನ್ನು ರಾಜ್ಯದ ಪ್ರಮುಖ ಕೈಗಾರಿಕಾ ತಾಣವನ್ನಾಗಿ ಮಾಡಲಾಗುವುದು. ಈ ಅಧ್ಯಯನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸಿರು ನಿಶಾನೆ ತೋರಿಸಿದ್ದರು ಎಂದು ವಿವರಿಸಿದರು.

ಇಂಧನ ಕ್ಷೇತ್ರದ ಸಲಕರಣೆ ಉತ್ಪಾದನೆಗೆ ಆದ್ಯತೆ
ಇಂಧನ ಕ್ಷೇತ್ರದ ಸಾಧನ-ಸಲಕರಣೆಗಳ ತಯಾರಿಕೆಯಲ್ಲಿ ವಿಕ್ರಂ ಸೋಲಾರ್, ವೋಲ್ಟಾಸ್, ಶ್ನೀಡರ್ ಎಲೆಕ್ಟ್ರಿಕ್, ಸಾಲಾಸರ್ ಟೆಕ್ನೋ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿಗಳನ್ನು ಗುರುತಿಸಲಾಗಿದೆ. ಹಾಗೆಯೇ ಲೋಹೋತ್ಪನ್ನಗಳ ವಲಯದಲ್ಲಿ ಟಾಟಾ ಸ್ಟೀಲ್, ಜಿಂದಾಲ್, ಮಶಿನರಿಯಲ್ಲಿ ಎಬಿಬಿ, ಮುಕುಂದ್ ಬಜಾಜ್ ಮತ್ತು ಸೀಮನ್ಸ್, ನ್ಯೂಟ್ರಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಇಮಾಮಿ, ಹಿಮಾಲಯ ವೆಲ್ನೆಸ್, ನೋವಸ್ ಲೈಫ್ ಸೈನ್ಸಸ್ ಮತ್ತು ಝೋಯಿಕ್ ಫಾರ್ಮಸುಟಿಕಲ್ಸ್ ಕಂಪನಿಗಳನ್ನು ಪರಿಗಣಿಸಲಾಗಿದೆ ಎಂದರು.
ಈ ಕಂಪನಿಗಳು ಉತ್ತಮ ರಸ್ತೆ, ನೀರು, ವಿದ್ಯುತ್, ಕೌಶಲ ಕೇಂದ್ರಗಳು, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಬಂದರುಗಳ ಲಭ್ಯತೆ ಮುಂತಾದ ಮೂಲ ಸೌಕರ್ಯಗಳನ್ನು ನಮ್ಮಿಂದ ಕೋರಿವೆ. ಇವುಗಳನ್ನು ಒದಗಿಸಲು ಸರ್ಕಾರ ತ್ವರಿತ ಗತಿಯಲ್ಲಿ ಕೆಲಸ ಮಾಡಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಂಡವಾಳ ಹರಿವು ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳ ಸಾಧ್ಯವಾಗಲಿದೆ ಎಂದು ಹೇಳಿದರು.
ವರದಿ ಸಲ್ಲಿಕೆ ವೇಳೆ ಏಕಸ್ ಇನ್ಫ್ರಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಎಸ್ ಅಣ್ಣಪ್ಪ, ಸಿಬಿಆರ್.ಇ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಸೌರವ್ ಹಾಜ್ರಾ, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.












Click it and Unblock the Notifications