ಬಳ್ಳಾರಿ ಗಣಿ ಹಗರಣದ ಬಗ್ಗೆ ಈಗ ಮಾತಾಡೋರೇ ಇಲ್ಲ!
ಬಳ್ಳಾರಿ, ಮಾರ್ಚ್ 26: 2013ರ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸದ್ದು ಮಾಡಿದ ಪ್ರಮುಖ ಪ್ರಕರಣ ಅಂದರೆ ಅದು ಬಳ್ಳಾರಿ ಗಣಿ ಹಗರಣ. ಜನಾರ್ದನ ರೆಡ್ಡಿ ಸಹೋದರರ ವಿರುದ್ಧ ವಿಧಾನಸಭೆಯಲ್ಲೇ ತೊಡೆ ತಟ್ಟಿದ್ದ ಹಾಲಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಗುಂಪು ಕಟ್ಟಿಕೊಂಡು ಬೆಂಗಳೂರಿನಿಂದ 320 ಕಿಲೋಮೀಟರ್ ದೂರದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರು. ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.
ಆದರೆ ಇವತ್ತು ಬಳ್ಳಾರಿಯಲ್ಲಿ ಗಣಿಗಾರಿಗೆ, ಗಣಿ ಹಗರಣದ ಬಗ್ಗೆ ಮಾತನಾಡುವವರೇ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಇಬ್ಬರೂ ಈ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ. ಇಬ್ಬರೂ ಒಬ್ಬರ ಮೇಲೊಬ್ಬರು ಕೆಸರೆರೆಚಾಟದಲ್ಲಷ್ಟೇ ತೊಡಗಿದ್ದಾರೆ.
ಬಳ್ಳಾರಿ ಜನರೂ ಅಷ್ಟೇ ಗಣಿ ಹಗರಣದ ಬಗ್ಗೆ ಮಾತನಾಡುತ್ತಾರಾದರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ಅವರಿಗೂ ಇಲ್ಲ. ಹಾಗೆ ನೋಡಿದರೆ ಅಲ್ಲಿ ಜನರಿಗೆ ಗಣಿಗಾರಿಕೆಯಿಂದ ಒಳ್ಳೆಯದೂ ಆಗಿದೆ. ಕೆಟ್ಟದ್ದೂ ಆಗಿದೆ. ಗಣಿಗಾರಿಕೆ ಇಲ್ಲಿನ ಜನರಿಗೆ ಉದ್ಯೋಗ ತಂದಿತ್ತಿದ್ದರೆ, ಇದೇ ಗಣಿಗಾರಿಗೆ ಇಲ್ಲಿನ ಪರಿಸರವನ್ನು ನಾಶ ಮಾಡಿತು. ಜತೆಗೆ ಬಳ್ಳಾರಿಗೆ ಕಳಂಕದ ಕೆಸರನ್ನೂ ಮೆತ್ತಿತು.

ಈ ಬಾರಿ ಮಾತ್ರ ಬಳ್ಳಾರಿ ಹಗರಣದ ಬಗ್ಗೆ ಯಾರ ಬಾಯಿಯಿಂದಲೂ ಶಬ್ದವೇ ಹೊರ ಬರುತ್ತಿಲ್ಲ. ಬಿಜೆಪಿ ಈ ವಿಚಾರದಲ್ಲಿ ಶಾಂತವಾಗಿದ್ದು ಕೇವಲ ಕಾಂಗ್ರೆಸಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ.
ಇನ್ನು ಕಾಂಗ್ರೆಸ್ ಈ ಬಗ್ಗೆ ಧ್ವನಿ ಎತ್ತುವ ಅವಕಾಶವನ್ನೇ ಕಳೆದುಕೊಂಡಿದೆ. ಕಾರಣ ಹಗರಣದ ಕಲೆ ಮೆತ್ತಿಕೊಂಡಿದ್ದ ವ್ಯಕ್ತಿಗಳನ್ನು ಕೈ ಪಕ್ಷ ತನ್ನೊಳಕ್ಕೆ ಸೇರಿಸಿಕೊಂಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯನಗರದ ಮಾಜಿ ಬಿಜೆಪಿ ಶಾಸಕ ಆನಂದ್ ಸಿಂಗ್ ಮತ್ತು ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ. ನಾಗೇಂದ್ರ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಇದೇ ಗಣಿ ಹಗರಣದಲ್ಲಿ ಆರೋಪ ಕೇಳಿ ಬಂದ ಅನಿಲ್ ಲಾಡ್, ಸಂತೋಷ್ ಲಾಡ್, ಅಬ್ದುಲ್ ವಹಾಬ್, ಇ ತುಕರಾಮ್ ಮೊದಲಾದವರು ಕಾಂಗ್ರೆಸ್ ನಲ್ಲೇ ಇದ್ದಾರೆ.
ವಿಚಿತ್ರ ಎಂದರೆ ಹೊಸಪೇಟೆಯಿಂದ ತಮ್ಮ ಜನಾಶಿರ್ವಾದ ಯಾತ್ರೆಯನ್ನು ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಒಂದೇ ಒಂದು ಬಾರಿಯೂ ಈ ಹಗರಣದ ಬಗ್ಗೆ ಮಾತೇ ಆಡಲಿಲ್ಲ. ಬದಲಿಗೆ ಅಕ್ರಮ ಗಣಿಗಾರಿಕೆ ಹಗರಣದ ಬಗ್ಗೆ ಲೋಕಾಯುಕ್ತರು ನೀಡಿದ್ದ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದ ಸಿಂಗ್ ಮತ್ತು ನಾಗೇಂದ್ರ ರಾಹುಲ್ ಗಾಂಧಿಯವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದರು. ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಅರ್ಧ ಗಂಟೆ ಮಾತನಾಡಿದರು. ಆದರೆ ಗಣಿ ಎಂಬ ಶಬ್ದ ಅವರ ಬಾಯಿಂದ ಒಮ್ಮೆಯೂ ಬರಲೇ ಇಲ್ಲ.












Click it and Unblock the Notifications