ಪೌರತ್ವ ತಿದ್ದುಪಡಿ ಕಾಯ್ದೆ: ಜನಜಾಗೃತಿ ಅಭಿಯಾನದಲ್ಲೂ ಬಿಜೆಪಿಗೆ ಹಿನ್ನಡೆ!
ದೇಶಾದ್ಯಂತ ಪ್ರತಿಭಟನೆಯ ಜ್ವಾಲೆ ಹತ್ತಲು ಕಾರಣವಾದ ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ, ಕರ್ನಾಟಕದಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತಿರುವ ಬಿಜೆಪಿಗೆ ನಿರೀಕ್ಷಿತ ಬೆಂಬಲ ಸಿಗದೇ ಇರುವುದು ದೆಹಲಿ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
ಖುದ್ದಾಗಿ ಮುಖ್ಯಮಂತ್ರಿಗಳೇ ಅಭಿಯಾನದ ನೇತೃತ್ವವನ್ನು ವಹಿಸಿಕೊಂಡಿದ್ದರೂ, ಮಸೂದೆಯನ್ನು ಪ್ರಮುಖವಾಗಿ ಮುಸ್ಲಿಂ ಸಮುದಾಯ ನಂಬುವಂತಹ ಅಥವಾ ಒಪ್ಪಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲದೇ ಇರುವುದು ವಾಸ್ತವತೆ.
ಯಡಿಯೂರಪ್ಪ ತಮ್ಮ ಸಂಪುಟದ ಸದಸ್ಯರ ಜೊತೆ, ಕರಪತ್ರ ಹಿಡಿದುಕೊಂಡು ಮುಸ್ಲಿಂ ಪ್ರಾಬಲ್ಯವಿರುವ ಬೆಂಗಳೂರಿನ ಕೆಲವೊಂದು ಪ್ರದೇಶಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಇದಕ್ಕಾಗಿ, ಬಿಜೆಪಿ ಪುಸ್ತಕವನ್ನೂ ಸಿದ್ದಪಡಿಸಿ, ಮನೆಮನೆಗೂ ಹಂಚುತ್ತಿದೆ.
ಪುಸ್ತಕ, ಕರಪತ್ರವನ್ನು ಸ್ವೀಕರಿಸಿ, ಪೌರತ್ವ ಮಸೂದೆಯ ಪರ ಸಹಿ ಹಾಕುತ್ತಿರುವವರು, ನಿಜವಾಗಿಯೂ ಈ ಕಾಯ್ದೆಯನ್ನು ಒಪ್ಪಿಕೊಳ್ಳುತ್ತಾರೋ, ಅಂದರೆ ಅದಕ್ಕೆ ಹೌದು ಎನ್ನುವ ಉತ್ತರ ಸಿಗುವುದು ಕಷ್ಟ. ಇದಕ್ಕೆ ಕೊಡಬಹುದಾದ ಸಣ್ಣ ಉದಾಹರಣೆ, ಬಳ್ಲಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದದ್ದು.

ವಸಂತ ನಗರದಲ್ಲಿ ಸಿಎಂ ಯಡಿಯೂರಪ್ಪ ರೌಂಡ್
ಬೆಂಗಳೂರು ಸೆಂಟ್ರಲ್ ಲೋಕಸಭಾ ವ್ಯಾಪ್ತಿಯ, ವಸಂತ ನಗರದಲ್ಲಿ ಸಿಎಂ ಯಡಿಯೂರಪ್ಪ ರೌಂಡ್ ಹೊಡೆದು ಬಂದಿದ್ದಾರೆ. ಭಾರತದ ಮುಸ್ಲಿಮರಿಗೆ ಈ ಕಾಯ್ದೆಯಿಂದ ಏನೂ ತೊಂದರೆಯಿಲ್ಲ ಎಂದು ಸಾರಿಸಾರಿ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಬಿಜೆಪಿಯ ತಂಡ ಅಲ್ಲಿಂದ ಹೊರಟ ನಂತರವೂ, ಆ ಸಮುದಾಯಕ್ಕೆ ಮಸೂದೆಯ ಬಗ್ಗೆ ಇರುವ ಸಂಶಯ, ಗೊಂದಲ, ಭಯ ಹಾಗೇ ಮುಂದುವರಿದಿರುವುದು ಸ್ಪಷ್ಟ.

ಮುಸ್ಲಿಂರ ವಿರುದ್ಧವಾಗಿಯೇ ತರುತ್ತಿರುವ ಕಾನೂನು
ಇದೇ ಜನವರಿ ಐದರಿಂದ ಜನ ಜಾಗೃತಿ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ಈ ಮಸೂದೆ, ಅಲ್ಪಸಂಖ್ಯಾತ ಮುಸ್ಲಿಂರ ವಿರುದ್ಧವಾಗಿಯೇ ತರುತ್ತಿರುವ ಕಾನೂನು ಆಗಿದೆ ಎಂಬುದು ಜನರ ಮನಃಪಟಲದಲ್ಲಿ ಬೇರೂರಿಯಾಗಿರುವಂತಹ ಈ ಸಮಯದಲ್ಲಿ, ಅವರ ಓಲೈಸಲು ಬಿಜೆಪಿ ಭಾರೀ ಪ್ರಯತ್ನ ನಡೆಸುತ್ತಿದೆ.

ಕಪ್ಪು ಬಟ್ಟೆ ತೋರಿಸಿ, ವಾಪಸ್ ಕಳುಹಿಸಿದ ಘಟನೆ
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ, ಮುಸ್ಲಿಂ ಮತ್ತು ದಲಿತರು ಹೆಚ್ಚಾಗಿರುವ ಎಸ್. ಆರ್. ನಗರ 18ನೇ ವಾರ್ಡ್ನಲ್ಲಿ, ಸೋಮವಾರ (ಜ 6) ಬಿಜೆಪಿ ಮುಖಂಡರು, ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ವಿವರಿಸಲು ತೆರಳಿದ್ದರು. ಆದರೆ, ಬಂದಿದ್ದ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರನ್ನು ಕಪ್ಪು ಬಟ್ಟೆ ತೋರಿಸಿ, ವಾಪಸ್ ಕಳುಹಿಸಿದ ಘಟನೆ ನಡೆದಿತ್ತು.

ಶಾಸಕ ಆನಂದ್ ಸಿಂಗ್
ಇದಾದ ನಂತರ, ಮತ್ತೆ ಮರುದಿನ ಶಾಸಕ ಆನಂದ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಆ ಭಾಗಕ್ಕೆ ಹೋಗಿದ್ದಾರೆ. ಆದರೆ ಈ ಬಾರಿ, ಬಿಜೆಪಿಯವರು ಬರುವುದನ್ನು ಅರಿತ ನಾಗರೀಕರು ಬಾಗಿಲು ಹಾಕಿ ತಮ್ಮ ಆಕ್ರೋಶವನ್ನು ಮುಂದುವರಿಸಿದರು. "We reject CAA, NRC, NPR" ಎಂದು ಬರೆಲಾಗಿದ್ದ ಕರಪತ್ರವನ್ನು ಬಾಗಿಲಿಗೆ ಅಂಟಿಸಿದ್ದರು. ಬಂದ ದಾರಿಗೆ ಸುಂಕವಿಲ್ಲದಂತೇ, ಬಿಜೆಪಿ ಮುಖಂಡರು ವಾಪಸ್ ತೆರಳಿದ್ದರು.

ಸೋಮಶೇಖರ ರೆಡ್ಡಿಯಂತಹ ನಾಯಕರು ನೀಡುವ ಪ್ರಚೋದನಕಾರಿ ಹೇಳಿಕೆ
ಒಂದು ಕಡೆ, ಮುಸ್ಲಿಮರ ಮನವೊಲಿಸಲು ಅಭಿಯಾನಕ್ಕೆ ಮುಂದಾಗಿರುವ ಬಿಜೆಪಿಗೆ, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿಯಂತಹ ನಾಯಕರು ನೀಡುವ ಪ್ರಚೋದನಕಾರಿ ಹೇಳಿಕೆ, ಇನ್ನಷ್ಟು ಧಕ್ಕೆ ತರುತ್ತಿರುವುದಂತೂ ಹೌದು. ಒಟ್ಟಿನಲ್ಲಿ, ಬಿಜೆಪಿ ಆರಂಭಿಸಿರುವ ಜನಜಾಗೃತಿ ಅಭಿಯಾನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿಲ್ಲ.












Click it and Unblock the Notifications