ರಾಜಕೀಯದಲ್ಲಿ ಸಂಕ್ರಮಣ, ಜನ ಸಾಮಾನ್ಯರ ಪಕ್ಷ ಉದಯ
ಬಾಗಲಕೋಟೆ, ಜನವರಿ 15: ಚುನಾವಣೆಯ ಹೊಸ್ತಿಲಲ್ಲೇ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಅಲೆಯನ್ನು ಹುಟ್ಟು ಹಾಕುವ ದೃಷ್ಟಿಯಿಂದ ಕಳಸಾ ಬಂಡೂರಿ ಹೋರಾಟಗಾರರು ನೂತನ ಪಕ್ಷವನ್ನು ಹುಟ್ಟು ಹಾಕಿದ್ದಾರೆ.
ಅಭಿವೃದ್ದಿ ಪರ - ಭ್ರಷ್ಟಾಚಾರ ವಿರೋಧಿ ಸಂಕಲ್ಪವನ್ನು ಹೊತ್ತಿರುವ ಈ ಪಕ್ಷ ಜನ ಸಾಮಾನ್ಯರಿಂದ ಜನ ಸಾಮಾನ್ಯರಿಗೋಸ್ಕರ ಪ್ರಾರಂಭವಾಗಿರುವ ಪಕ್ಷವಾಗಿದೆ ಎಂದು ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಡಾ ಅಯ್ಯಪ್ಪ ರಾಮಣ್ಣ ದೊರೆ ಹೇಳಿದರು.
ಚುನಾವಣೆಯ ಸಂಧರ್ಭದಲ್ಲಿ ಮಾತ್ರ ಸಮಸ್ಯೆಗಳ ಬಗ್ಗೆ ದನಿ ಎತ್ತುವ ರಾಜಕೀಯ ಪಕ್ಷಗಳ ಬಗ್ಗೆ ಬೇಸರವಾಗಿದೆ. ಕೇವಲ ರಾಜಕೀಯ ಹಿತಾಸಕ್ತಿಯಿದ್ದಿದ್ದಲ್ಲಿ ಕಳಸಾ ಬಂಡೂರಿ ಯೋಜನೆ ಯಾವಾಗಲೋ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ರಾಜಕೀಯ ಪಕ್ಷಗಳ ಅನಾದರ ಹಾಗೂ ಪಕ್ಷಗಳ ಹಿತಾಸಕ್ತಿಯ ಮುಂದೆ ಜನರ ಸಮಸ್ಯೆಗಳನ್ನು ಕಡೆಗಣಿಸುವ ಪರಿಪಾಠದಿಂದ ನಾವು ಬೇಸತ್ತು ಹೋಗಿದ್ದೇವೆ.
ಗೋವಾ ಸಚಿವರನ್ನು ನಮ್ಮ ರಾಜ್ಯದಲ್ಲಿ ಪರಿಶೀಲನೆಗೆ ಬಿಟ್ಟಿದ್ದು ಮೂರ್ಖತನ. ನಮ್ಮ ರಾಜ್ಯದ ಜನರು ಗೋವಾ ರಾಜ್ಯದಲ್ಲಿ ಪರಿವೀಕ್ಷಣೆಗೆ ಹೋಗುವುದಾದಲ್ಲಿ ಅವರು ಅವಕಾಶ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಡಾ. ಅಯ್ಯಪ್ಪ ಮಾತನಾಡಿ
ಜನ ಸಾಮಾನ್ಯರ ಪಕ್ಷದ ನೂತನ ಅಧ್ಯಕ್ಷ ಡಾ. ಅಯ್ಯಪ್ಪ ಮಾತನಾಡಿ, ರಾಜ್ಯದ ಗಡಿಯ ಭಾಗದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯಾವುದೆ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ. ಆದರೂ ಕೂಡಾ ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ ರೈತರ ಸಹಾಯ ಹಾಗೂ ನೇತೃತ್ವದಲ್ಲಿ ಕಳಸಾ ಬಂಡೂರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಮ್ಮ ಪಕ್ಷ ಸಿದ್ದವಿದೆ. ಇದಕ್ಕಾಗಿ ಈಗಾಗಲೇ ನಾವು ರೈತ ಮುಖಂಡರುಗಳ ಜೊತೆ ಸಮಾಲೋಚನೆ ನಡೆಸಿದ್ದ ರೈತರುಗಳಿಂದ 100 ರೂಪಾಯಿ ಸಂಗ್ರಹಿಸಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ 20 ಕೋಟಿ ರೂ
ನಮ್ಮ ಹೋರಾಟಕ್ಕೆ ಬಲ ತುಂಬುವಂತಹ ರಾಜಕೀಯ ಪಕ್ಷದ ಅವಶ್ಯಕತೆಯನ್ನು ಮನಗೊಂಡಿರುವ ನಾವು ಶಿಕ್ಷಣ ತಜ್ಞ ಡಾ ಅಯ್ಯಪ್ಪ ನೇತೃತ್ವದಲ್ಲಿ ಜನ ಸಾಮಾನ್ಯರ ಪಕ್ಷವನ್ನು ಹುಟ್ಟು ಹಾಕಿದ್ದೇವೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದೇವೆ
ಜನ ಸಾಮಾನ್ಯರ ಪಕ್ಷದ ವತಿಯಿಂದ 20 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಲು ಸಿದ್ದ ಎಂದು ಘೋಷಿಸಿದರು. ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ ಕೇವಲ 24 ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಜನ ಸಾಮಾನ್ಯರ ಪಕ್ಷ ಸಿದ್ದವಿದೆ ಎಂದರು.

ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸತೀಶ್ ಟಿ ವಿ
ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸತೀಶ್ ಟಿ ವಿ ಮಾತನಾಡಿ, ಲಿಂಗಾಯತ ಧರ್ಮ ಮಾನವ ಧರ್ಮ. ಲಿಂಗಾಯತ ಧರ್ಮ ಎನ್ನುವ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಲಿಂಗಾಯತ ಸಮುದಾಯವನ್ನು ಪೂರ್ತಿ ಮುಗಿಸಲು ಬರುತ್ತಿದ್ದಾರೆ. ಉತ್ತರ ಕರ್ನಾಟಕವನ್ನು ಮುಗಿಸಲು ಜೆಡಿಎಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಯೋಜನೆಯ ನೀಲಿ ನಕ್ಷೆಯನ್ನು ಬಿಡುಗಡೆಗೊಳಿಸಿದ ಅವರು, ಯೋಜನೆ ಪೂರ್ಣಗೊಳಿಸಲು ರಾಜ್ಯ ಸರಕಾರಕ್ಕೆ ಗಡುವು ನೀಡಿದರು. ಈ ಗಡುವಿನೊಳಗಾಗಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ರೈತರೇ ಕಾಮಗಾರಿಯನ್ನು ನಡೆಸಲು ಪ್ರಾರಂಭಿಸುವುದಾಗಿ ತಿಳಿಸಿದರು.

ರೈತ ಮಹಿಳೆ ನಿಂಬೆವ್ವ ರಾಮಣ್ಣ ದೊರೆ
ನಿಂಬೆವ್ವ ರಾಮಣ್ಣ ದೊರೆ ಅವರಿಂದ ಕಾರ್ಯಕ್ರವನ್ನು ಉದ್ಘಾಟಿಸಲಾಯಿತು. ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಸತೀಶ್ ಟಿ.ವಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಕ್ಷದ ಧ್ವಜ ನೀಡುವ ಮೂಲಕ ಹಸ್ತಾಂತರಿಸಿದರು.
ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಸತೀಶ್ ಟಿ ವಿ, ಅಮೃತ್ ಇಜಾರೆ, ವಿಕಾಸ್ ಸೊಪ್ಪಿನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪಕ್ಷದ ಪ್ರಮುಖ ಧ್ಯೆಯೋದ್ದೇಶಗಳು
*ಕರ್ನಾಟಕದ ಸರ್ವಾಂಗೀಣ ಪ್ರಗತಿ, ರಾಜಕೀಯ ಮತ್ತು ಆಡಳಿತದಲ್ಲಿ ಭ್ರಷ್ಟಾಚಾರದ ನಿರ್ಮೂಲನೆಗೆ ಒತ್ತು.
* ಮಹದಾಯಿ, ಕಳಸಾ - ಬಂಡೂರಿಯಿಂದ ಮಲಪ್ರಭೆಗೆ ನೀರು ಹರಿಸುವ ಯೋಜನೆಗೆ ಶೀಘ್ರವೇ ಶಾಶ್ವತ ಪರಿಹಾರ.
* ಕೃಷ್ಣಾ ಕಣಿವೆ ಯೋಜನೆಗಳ ತ್ವರಿತ ಜಾರಿ, ರೈತರ ಜಮೀನುಗಳೀಗೆ ನೀರು ಹರಿಸುವ ಕಾಮಗಾರಿಗಳ ನಿರ್ಮಾಣ
* ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ 20 ಕೋಟಿ ರೂ ದೇಣಿಗೆ
* ಸರಕಾರ ಅನುಮತಿ ನೀಡಿದಲ್ಲಿ ರೈತರ ಕೈಯಲ್ಲೇ ಕಾಮಗಾರಿ ಪೂರ್ಣ
* ಕಳಸಾ ಬಂಡೂರಿ ಯೋಜನೆಯ ನೀಲಿನಕ್ಷೆ ತಯಾರಿ
* 224 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ತಯಾರಿ












Click it and Unblock the Notifications