Karnataka Rain: ಕರ್ನಾಟಕ ಕರಾವಳಿಗೆ ಮತ್ತೆ ವರುಣಾಘಾತ, ಅತ್ಯಧಿಕ ಮಳೆ ಮುನ್ಸೂಚನೆ
ಬೆಂಗಳೂರು, ಆಗಸ್ಟ್ 26: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟ ಕೊಂಚ ಕಡಿಮೆ ಆಯಿತು ಅನ್ನುಷ್ಟರಲ್ಲಿಯೇ ಮತ್ತೆ ವರುಣಾಘಾತದ ಮುನ್ಸೂಚನೆ ಲಭಿಸಿದೆ. ಅರಬ್ಬಿ ಸಮುದ್ರದಲ್ಲಿನ ಬದಲಾವಣೆಗಳಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯ ಆಗುವ ಎಲ್ಲ ಲಕ್ಷಣಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಪಶ್ಚಿಮ ಘಟ್ಟಗಳು, ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಜುಲೈ ತಿಂಗಳಲ್ಲಿ ಅಬ್ಬರಿಸಿತ್ತು. ನದಿಗಳು ತುಂಬಿ ಹರಿಯುವ ಜೊತೆಗೆ ಜಲಾಶಯಗಳು ಭರ್ತಿ ಆದವು. ಅತಿವೃಷ್ಠಿ ಉಂಟಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಗುಡ್ಡಗಳು ಕುಸಿತ ರಸ್ತೆ ಹಾಗೂ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆಗಸ್ಟ್ ತಿಂಗಳ ಮೊದಲ ಎರಡು ವಾರದ ಹೊತ್ತಿಗೆ ಮಳೆ ಕಡಿಮೆ ಆಗಿ ಎಲ್ಲವು ಸಹಜ ಸ್ಥಿತಿಗೆ ಬರುತ್ತಿವೆ ಎನ್ನುವ ಹೊತ್ತಿಗಾಗಲೇ ಇದೀಗ ಮತ್ತೆ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ.

ಆಗಸ್ಟ್ 31ರವರೆಗೆ 'ಆರೆಂಜ್ ಅಲರ್ಟ್'
ಹವಾಮಾನ ಇಲಾಖೆ ಪ್ರಕಾರ, ಮುಂದಿನ ಐದು ದಿನಗಳ ಕಾಲದ ರಾಜ್ಯದಲ್ಲಿ ಅತ್ಯಧಿಕ ಮಳೆ ಬೀಳಲಿದೆ. ಈ ಪೈಕಿ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಆಗಸ್ಟ್ 27ರಿಂದ 31ರವರೆಗೆ ಎಲ್ಲ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.
ಇನ್ನುಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಒಂದೆರಡು ದಿನ ಜೋರು ಮಳೆ ಆಗಲಿದೆ. ನಂತರ ಬೆಳಗಾವಿ ಜಿಲ್ಲೆಗೆ ಮೂರು ದಿನ ಮತ್ತು ಧಾರವಾಡ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಆರ್ಭಟ ಕಂಡು ಬರಲಿದ್ದು, ಇವುಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ತೇವಾಂಶ ಭರಿತ ತಂಪು ಗಾಳಿ, ಅನಾರೋಗ್ಯ ಸಮಸ್ಯೆ
ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ತುಂತುರು ಮಳೆ ಆಗಬಹುದು. ಚಾಮರಾಜನಗರ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಜಿಲ್ಲೆಗಳಲ್ಲಿ ಹಗರು ಮಳೆ ಆಗುವ ನಿರೀಕ್ಷೆ ಇದೆ. ಹವಾಮಾನದಲ್ಲಿನ ಬದಲಾವಣೆಯಿಂದ ಬಿಸಿಲು, ಮಳೆ, ತೇವಾಂಶ ಭರಿತ ತಂಪು ಗಾಳಿ, ಒಮ್ಮೊಮ್ಮೆ ಸೆಕೆಯ ವಾತಾವರಣ ನಿರ್ಮಾಣವಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಜನರಲ್ಲಿ ಅನಾರೋಗ್ಯ ಸಮಸ್ಯೆ ಸಹ ಎದುರಾಗಿದೆ.

ಅರಬ್ಬಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನದಲ್ಲಿನ ವೈಪರಿತ್ಯ, ಬದಲಾವಣೆಗಳ ತೀವ್ರ ಇನ್ನೂ ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿಯೇ ವಿವಿಧ ಕಡೆಗಳಲ್ಲಿ ಜೋರು ಮಳೆ ಲಕ್ಷಣಗಳು ಕಂಡು ಬಂದಿವೆ. ಕಳೆದ ತಿಂಗಳು ವಾಡಿಕೆಯಷ್ಟು ಮಳೆ ಆಗಿದೆ. ಆದರೆ ಈ ಆಗಸ್ಟ್ ತಿಂಗಳಲ್ಲಿ ನಿರೀಕ್ಷಿತ ಮಳೆ ಆಗಿಲ್ಲ ಎಂದು ಹವಾಮಾನ ತಜ್ಞರು ವಿಶ್ಲಷಿಸಿದ್ದಾರೆ...












Click it and Unblock the Notifications