Rain Alert: ಕರ್ನಾಟಕದ ಈ ಜಿಲ್ಲೆಗಳಿಗೆ 'ರೆಡ್ ಅಲರ್ಟ್', 200 ಮಿ.ಮೀ.ಗೂ ಹೆಚ್ಚು ಮಳೆ: ಹವಾಮಾನ ವರದಿ
ಬೆಂಗಳೂರು, ಮೇ 20: ಕರ್ನಾಟಕದಾದ್ಯಂತ ಪೂರ್ವ ಮುಂಗಾರು ಮಳೆ ಬಿಟ್ಟು ಬಿಡದೇ ಅಬ್ಬರಿಸುತ್ತಿದೆ. ಮುಂದಿನ 05 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಆಗಲಿದೆ. ಅದರಲ್ಲಿ ಕೆಲವು ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನ (ಮೇ 20-23ರವರೆಗೆ) ಭರ್ಜರಿ ಮಳೆ ಆಗಲಿದೆ. ಗರಿಷ್ಠ 200 ಮಿಲಿ ಮೀಟರ್ಗೂ ಹೆಚ್ಚಿನ ಮಳೆ ಸಂಭವವಿದೆ. ಹೀಗಾಗಿ 06 ಜಿಲ್ಲೆಗಳಿಗೆ ''ರೆಡ್ ಅಲರ್ಟ್'' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವರುಣಾರ್ಭಟ ಹೆಚ್ಚಿರಲಿದೆ. ಗುಡಗು, ಮಿಂಚು ಸಹಿತ ಕರಾವಳಿ ಭಾಗದಲ್ಲಿ ಈಗಾಗಲೇ ಮಳೆ ಆಗುತ್ತಿದೆ. ಇದಕ್ಕೆ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ಎದ್ದಿರುವ ಚಂಡಮಾರುತ ವೈಪರೀತ್ಯ ಕಾರಣವೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಅದರ ಪ್ರಭಾವದಿಂದಲೇ ಮುಂಗಾರು ಮೊದಲೇ ಮೇ ತಿಂಗಳಲ್ಲಿ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ.

ರೆಡ್ ಅಲರ್ಟ್ ಜಿಲ್ಲೆಗಳು
ಮುಂದಿನ ಎರಡು ದಿನಗಳ ಕಾಲ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಈ ಸಂಬಂಧ ಐಎಂಡಿ 'ರೆಡ್ ಅಲರ್ಟ್' ನೀಡಿದೆ. ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಾಗಲಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು 110ರಿಂದ 200ಮಿಲಿ ಮೀಟರ್ವರೆಗೆ ಮಳೆ ಸಂಭವವಿದೆ. ಹೀಗಾಗಿ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದಂತೆ ಒಟ್ಟಾರೆ ಐದು ದಿನ ಸುಮಾರು 20 ಅಧಿಕ ಜಿಲ್ಲೆಗಳಿಗೆ ಗುಡುಗು, ಮಿಂಚು ಸಹಿತ ಭಾರೀ ಮಳೆ ಪ್ರಯುಕ್ತ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಅಲ್ಲದೇ ಕೊಡಗು, ಮಡಿಕೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆ.

ಬೆಂಗಳೂರಿಗೆ ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ವ್ಯಾಪಕ ಮಳೆ ಆಗುತ್ತಿದೆ. ಈಗಾಗಲೇ ಬಂದ ಮಳೆಯಿಂದಲೇ ಸಾಕಷ್ಟು ಸಮಸ್ಯೆ ಎದರಿಸುತ್ತಿರುವ ನಗರದಲ್ಲಿ ಮಂಗಳವಾರ ಮತ್ತೆ ಮಳೆ ಆಗಿದೆ. ಬಿಬಿಎಂಪಿ ಪರಿಹಾರ ಕ್ರಮ ಕೈಗೊಂಡಿದೆ. ಆದರೆ ತಗ್ಗು ಪ್ರದೇಶಗಳಲ್ಲಿನ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಇಂದು ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications