Karnataka Rains: ಇಂದು ರಾಜ್ಯದ ಈ ಭಾಗದಲ್ಲಿ ಗುಡುಗು ಸಹಿತ ಮಳೆ: ಐಎಂಡಿ ಮುನ್ಸೂಚನೆ
ಬೆಂಗಳೂರು, ಮಾರ್ಚ್ 13: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಆರಂಭದಲ್ಲಿ ಹೆಚ್ಚು ಚುರುಕಾಗಿದೆ. ಇದಕ್ಕೆ ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳು, ಚಂಡಮಾರುತ ಪರಿಚಲನೆ ಕಾರಣ ಎನ್ನಲಾಗಿದೆ. ಇದರಿಂದಾಗಿ ರಾಜ್ಯದ ಬೆಂಗಳೂರು, ಮೈಸೂರು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಉತ್ತಮ ಮಳೆ ಆಗಿದೆ. ಇವತ್ತು ಗುರುವಾರ (ಮಾರ್ಚ್ 13) ಸಹ ಯಾವ ಕ್ಷಣದಲ್ಲಾದರೂ ಈ ಕೆಳಗಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗಬಹುದು ಎಂದು ಹವಾಮಾನ ಇಲಾಕೆ ಎಚ್ಚರಿಕೆ ನೀಡಿದೆ.
ತಮಿಳುನಾಡು ಮತ್ತು ಕೇರಳ ಕರಾವಳಿ ಭಾಗಕ್ಕೆ ಚಂಡಮಾರುತ ಪರಿಚಲನೆ ಸಮೀಪಿಸಿದ ಕಾರಣ ಆ ಎರಡು ರಾಜ್ಯಗಳ ಹತ್ತಾರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಐಎಂಡಿ ಹೈ ಅಲರ್ಟ್ ಘೋಷಿಸಿದೆ. ಇದರ ಬೆನ್ನಲ್ಲೆ ಕರ್ನಾಟಕದ ದಕ್ಷಿಣ ಒಳನಾಡಿನ ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ವಿವಿಧೆಡೆ ಇಂದು ಗುರುವಾರ ಮಳೆ ಬರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಸುರಿದ ಮಳೆಗೆ ತಂಪಾಯ್ತು ಇಳೆ
ರಾಜ್ಯದ ಕೆಲವು ಭಾಗಗಳಲ್ಲಿ ನೆನ್ನೆ ಬುಧವಾರ (ಮಾರ್ಚ್ 12) ವರ್ಷದ ಮೊದಲ ಮಳೆ ಸುರಿದಿದೆ. ಗುಡುಗು ಮಿಂಚು ಸಹಿತ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ದಾಖಲಾಗಿದೆ. ಬೇಸಿಗೆ ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಈ ಮಳೆ ಕೊಂಚ ನೆಮ್ಮದಿ ತಂದಿದೆ. ಮಳೆ ಕಾರಣಕ್ಕಾಗಿ ಮಬ್ಬು ವಾತಾವರಣ, ತಂಪು ಗಾಳಿ ಕಂಡು ಬಂದಿದೆ.
ದಕ್ಷಿಣ ಕನ್ನಡದಲ್ಲಿ ನೆನ್ನೆ 82 ಮಿ.ಮೀ, ಉಡುಪಿ 70ಮಿ.ಮೀ, ಹಾಸನ 64ಮಿ.ಮೀ, ತುಮಕೂರು 45 ಮಿ.ಮೀ, ಕೊಡಗು 29ಮಿ.ಮೀ, ಚಿಕ್ಕಮಗಳೂರು 28 ಮಿ.ಮೀ, ಚಾಮರಾಜನಗರ 23 ಮಿ.ಮೀ ಮತ್ತು ಮಂಡ್ಯ 20 ಮಿ.ಮೀ, ಮಳೆ ದಾಖಲಾಗಿದೆ. ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಉತ್ತಮ ಮಳೆ ದಾಖಲಾಗಿದೆ. ಇಂದು ಗುರುವಾರ ಬೆಳಗ್ಗೆ 07 ಗಂಟೆವರೆಗೆ ವಿವಿಧೆಡೆ ಮಳೆ ಆಗಿದ್ದು, ಸಂಜೆ ಮತ್ತೆ ಮಳೆ ಬರುವ ಮುನ್ಸೂಚನೆ ಇದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ವಾತಾವರಣ ಕಂಡು ಬಂದರೆ, ಉತ್ತರ ಕರ್ನಾಟಕದ ಬೀದರ್, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಮುಂದುವರೆದಿದೆ.

ಒಂದು ಕಡೆ ಹಗುರದಿಂದ ಸಾಧಾರಣ ಮಳೆಯ ಕಂಡು ಬಂದರೆ, ರಾಜ್ಯದ ಇನ್ನರ್ಧ ಕಡೆಯಲ್ಲಿ ಭಾರೀ ತಾಪಮಾನ, ಸೆಕೆ, ತೀವ್ರ ಬಿಸಿಲಿನ ಝಳ ಕಂಡು ಬರುತ್ತಿದೆ. ಮಳೆ ಬರುತ್ತಿರುವ ಜಿಲ್ಲೆಗಳಲ್ಲಿ ರೈತರು ಬಿತ್ತನೆಗೆ ಪೂರ್ವ ತಯಾರಿ, ಜಮೀನು ರಂಟೆ, ಕುಂಟಿ ಹೊಡೆಸಿ ಹದ ಮಾಡಿಕೊಳ್ಳುತ್ತಿದ್ದಾರೆ. ಹೀಟ್ ವೇವ್ಗೆ ನಲುಗಿದ ಜನರಿಗೆ ಈ ಮಳೆ ಕೊಂಚ ನೆಮ್ಮದ ತಂದಿರುವುದಂತೂ ಸತ್ಯ.
ಹೀಟ್ ವೇವ್ ಜಿಲ್ಲೆಗಳು: ಗರಿಷ್ಠ ತಾಪಮಾನ ವಿವರ
ಕಲಬುರಗಿಯಲ್ಲಿ ಬುಧವಾರ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದೇ ರೀತಿ ಪೆಣಂಬೂರಿನಲ್ಲಿ 37 ಡಿ.ಸೆ, ಮಂಗಳೂರು ವಿಮಾನ ನಿಲ್ದಾಣ 36, ವಿಜಯಪುರ, ಬಾಗಲಕೋಟೆ, ಹಾವೇರಿಯಲ್ಲಿ ತಲಾ 35 ಡಿ.ಸೆ., ಬೆಳಗಾವಿ ವಿಮಾನ ನಿಲ್ದಾಣ 35 ಡಿ.ಸೆ., ಆಗುಂಬೆ 35, ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ 34 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications