ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಕರಾಳ ಮುಖ
ಫೆಬ್ರವರಿ 23: ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಾಂಡವಾಡುತ್ತಿದೆ ! ಪರವಾನಗಿ ಹೊಂದಿರುವ ಗಣಿ ಗುತ್ತಿಗೆ ಕಂಪನಿಗಳು ಸುರಕ್ಷತಾ ನಿಯಮ ಗಾಳಿಗೆ ತೂರುತ್ತಿವೆ. ಇದನ್ನು ನೋಡಿ ಎಷ್ಟೋ ಕಂಪನಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಇವುಗಳ ವಿರುದ್ಧ ಕ್ರಮ ಜರುಗಿಸಬೇಕಾಗಿರುವ ಪೊಲೀಸರು, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ರಾಜಕಾರಣಿಗಳ ಮುಲಾಜಿಗೆ ಒಳಗಾಗಿ ಅಶಕ್ತರಾಗಿದ್ದಾರೆ. ಬಹುತೇಕ ರಾಜಕಾರಣಿಗಳ ಮಾಲಿಕತ್ವಕ್ಕೆ ಒಳಪಡುವ ಕ್ರಷರ್ ಗಳಿಗೆ ಅಂಕುಶ ಹಾಕುವ ಬದಲಿಗೆ ರಾಜ್ಯ ಸರ್ಕಾರ ಕ್ರಷರ್ ಗಳ ಗಣಿಗಾರಿಕೆ ನಿಯಮ ಸಡಿಲಿಸಿ ಪೋಷಣೆ ಮಾಡುತ್ತಿದೆ !
ಶಿವಮೊಗ್ಗದ ಹೊಸಗೋಡು ಗ್ರಾಮದ ಕಲ್ಲು ಗಣಿಗಾರಿಕೆ ಸ್ಫೋಟ ಕಾರ್ಮಿಕರನ್ನು ಬಲಿ ಪಡೆದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಪ್ರತಿ ನಿತ್ಯ ಪರಿಸರ, ಪ್ರಾಣಿ ಪಕ್ಷಿಗಳ ಮೇಲೆ ಹಾಗೂ ಜನರ ಮೇಲೆ ಮಾಲಿನ್ಯದ ದಬ್ಬಾಳಿಕೆ ನಡೆಸುತ್ತಿರುವ ಕ್ರಷರ್ ಮಾಫಿಯಾ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಕೋವಿಡ್ ಸಂಕಷ್ಟ ಕಾಲದಲ್ಲೂ ಕ್ರಷರ್ ಗಳಿಗೆ ವಿಧಿಸಿದ್ದ ಷರತ್ತುಗಳನ್ನು ಸಡಿಲಿಸಿ ರಾಜ್ಯ ಸರ್ಕಾರ ಕ್ರಷರ್ ಬಿಲ್ಗೆ ತಿದ್ದುಪಡಿ ತಂದಿದೆ. ಇದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಆಂಜನೇಯರೆಡ್ಡಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಇದರ ನಡುವೆಯೂ ಕ್ರಷರ್ ಗಳ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿದ್ದ ಪರಿಸರ ಸುರಕ್ಷತಾ ನಿಯಮಗಳನ್ನು ಸಡಿಲಿಸಿ ರಾಜ್ಯ ಸರ್ಕಾರ ತಿದ್ದುಪಡಿ ಕಾಯ್ದೆ ಜಾರಿ ಮಾಡಿದೆ. ಇದು ಈಗ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ವಿಧಿ ವಿಜ್ಞಾನ ತಜ್ಞರು ಸ್ಫೋಟ ಕುರಿತು ಬಿಚ್ಚಿಟ್ಟ ರಹಸ್ಯ !
ರಾಜ್ಯದಲ್ಲಿ ಮೊದಲು ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಚಪ್ಪಡಿ, ಚರಂಡಿ ಕಲ್ಲು, ಸೈಜು ಕಲ್ಲು ಹಾಗೂ ಗ್ರಾನೈಟ್ ಗಾಗಿ ಗಣಿಗಾರಿಕೆ ನಡೆಯುತ್ತಿತ್ತು. ಇದನ್ನು ಮೀರಿಸಿ ಎಲ್ಲೆಲ್ಲೂ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಯಾವಾಗ ಮರಳು ಖಾಲಿ ಆಯಿತೋ ಎಂ ಸ್ಯಾಂಡ್ ಪರ್ಯಾಯವಾಗಿ ಹುಟ್ಟುಕೊಂಡಿತು. ಕೇವಲ ಕಲ್ಲಿನ ಉಪಕರಣಗಳಿಗೆ ಸೀಮಿತವಾಗಿದ್ದ ಕಲ್ಲು ಗಣಿಗಾರಿಕೆಗೆ ಎಲ್ಲಿಲ್ಲದ ಬೇಡಿಕೆ ಬಂತು. ನಿಸರ್ಗ ಸಂಪತ್ತನ್ನು ಮಾರಿ ಬದುಕುವ ಗಣಿಗಾರಿಕೆ ತೀರಾ ಲಾಭದಾಯಕ ಎಂಬುದು ಅರಿವಾಗಿತ್ತು. ರಾಜಕಾರಣಿಗಳೇ ಸ್ವತಃ ಸಂಬಂಧಿಕರ, ಆಪ್ತರ ಹೆಸರಿನಲ್ಲಿ ಗಣಿಗಾರಿಕೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಸುಮಾರು ಜನ ಪ್ರತಿನಿಧಿಗಳ ನೆರಳಿನಲ್ಲಿ ಕ್ರಷರ್ ಗಳು ತಲೆಯುತ್ತಿದವು. ಇವತ್ತು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ತುಮಕೂರು ಕೋಲಾರ ಹಾಗೂ ರಾಮನಗರ ಭಾಗದಲ್ಲಿಯೇ ಹೆಚ್ಚು ಕ್ವಾರಿ ಗಣಿಗಾರಿಕೆ ನಡೆಯುತ್ತಿದೆ. ಎಲ್ಲಾ ಸುರಕ್ಷತಾ ನಿಯಮ ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿದ್ದರೂ ಅವುಗಳ ಮೇಲೆ ಯಾವ ಇಲಾಖೆಯೂ ಕ್ರಮ ಜರುಗಿಸುತ್ತಿಲ್ಲ. ಪ್ರಾಮಾಣಿಕತೆಯ ಕೊರತೆಯಿಂದ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಾಂಡವಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಆಂಜನೇಯ ರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಕ್ರಷರ್ ಗಳ ಕಾರ್ಯ ನಿರ್ವಹಣೆಗೆ ತೊಡಕಾಗಿದ್ದ ನಿಯಮಗಳನ್ನು ಸಡಿಸಿಲಿ ಸರ್ಕಾರ ತಂದ ತಿದ್ದುಪಡಿ ವಿರುದ್ಧ ಆಂಜನೇಯರೆಡ್ಡಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಕಾನೂನು ಸಮರ ಸಾರಿದ್ದಾರೆ.
ದಿನವೂ ಸಾವೇ :
ಶಿವಮೊಗ್ಗದ ಹೊಸಗೋಡು ಗ್ರಾಮದ ಕಲ್ಲು ಗಣಿಗಾರಿಕೆ ಸ್ಫೋಟ ಪ್ರಕರಣ ಇಡೀ ರಾಜ್ಯದ ಗಣಿಗಾರಿಕೆ ಬಗ್ಗೆ ತಿರುಗಿ ನೋಡುವಂತೆ ಮಾಡಿದೆ. ಮುಗ್ಧ ಕಾರ್ಮಿಕರು ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದಾರೆ. ವಾಸ್ತವದಲ್ಲಿ ನೋಡುವುದಾದರೆ ಪ್ರತಿ ನಿತ್ಯ ಜೀವಗಳ ಮೇಲೆ ಕ್ರಷರ್ ಗಳು ದಾಳಿ ಮಾಡುತ್ತಲೇ ಇವೆ. ಕಲ್ಲು ಗಣಿಗಾರಿಕೆಗೆ ಸ್ಪೋಟಿಸಲು ಡೈನಾಮೆಂಟ್ ಡಿನೋನೇಟರ್ ಬಳಸುತ್ತಿದ್ ಜಾಗದಲ್ಲಿ ಜಿಲೆಟಿನ್ ಹಾಗೂ ವಾಟರ್ ಜೆಲ್, ಗೋರ್ ಗಮ್ ಎಂಬ ಅಪಾಯಕಾರಿ ಸ್ಫೋಟಕಗಳು ಬಂದಿವೆ. ಇವನ್ನು ಅನಕ್ಷರಸ್ತ ಕಾರ್ಮಿಕರೇ ಸ್ಫೋಟಿಸಿ ಅವಘಡ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸ್ಪೋಟಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ಅಂತರ್ಜಲ ಪಾತಾಳ ಸೇರುತ್ತಿದೆ. ಎಂ ಸ್ಯಾಂಡ್ ಸಾಗಿಸುವ ಆನೆ ದೈತ್ಯ ಟಿಪ್ಪರ್ ಗಳಿಂದ ರಸ್ತೆಗಳು ಹಾಳಾಗುತ್ತಿವೆ. ಧೂಳಿನಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲಾ ಕಣ್ಣಿಗೆ ಕಾಣುವ ರೀತಿಯಲ್ಲಿಯೇ ಅಕ್ರಮಗಳು ಎಡೆಯೆತ್ತಿದರೂ ಪ್ರಶ್ನಿಸುವ ಧೈರ್ಯ ಯಾವ ಇಲಾಖೆಯ ಅಧಿಕಾರಿಗೂ ಇಲ್ಲ!
ಕೇಳುವರು ಇಲ್ಲ:
ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಪರವಾನಗಿ ಗಣಿ ಗುತ್ತಿಗೆ ಕಂಪನಿಗಳಿಂದ ಪರಿಸರದ ಮೇಲೆ ಅಗಾದ ಪ್ರಮಾಣದ ಪರಿಣಾಮ ಬೀರುತ್ತಿದೆ. ಆದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ ಉದಾಹರಣೆಗಳೇ ಇಲ್ಲ. ಸಾರ್ವಜನಿಕರು ನೀಡಿರುವ ದೂರುಗಳನ್ನು ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಬಿಟ್ಟರೆ ರಾಜ್ಯದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಜರುಗಿಸಿಲ್ಲ. ಯಾವುದಾದರೂ ಅವಘಡ ಸಂಭವಿಸಿದರಷ್ಟೇ ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತದೆ. ಇದು ರಾಜ್ಯದ ಪರಿಸರ ಕಾಪಾಡುವ ಜವಾಬ್ಧಾರಿ ಹೊತ್ತ ಇಲಾಖೆಯ ಹಣೆಬರಹ. ಇನ್ನು ಪೊಲೀಸ್ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ, ಕಂದಾಯ ಇಲಾಖೆ ಬೆಸ್ಕಾಂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿದ ಉದಾಹರಣೆಗಳೇ ಇಲ್ಲದಂತಾಗಿವೆ.
ರಾಜಕಾರಣಿಗಳಿಗೆ ಸೇರಿದ್ದು:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಧಿಕೃತ ಪರವಾನಗಿ ಪಡೆದು ನಡೆಯುತ್ತಿರುವ ಕ್ರಷರ್ ಗಳು ಸರ್. ಎಂ. ವಿಶ್ವೇಶ್ವರಯ್ಯ ಜನಿಸಿದ ಮುದ್ದೇನಹಳ್ಳಿ ಊರನ್ನೇ ಅಕ್ರಮಿಸಿಕೊಂಡಿವೆ. ನಂದಿ ಬೆಟ್ಟದ ತಪ್ಪಲಲ್ಲಿ ದಿನ ನಿತ್ಯ ಸ್ಪೋಟಗಳು ಸಂಭವಿಸುತ್ತಿವೆ. ಕ್ರಷರ್ ಗೆ ಇಂತಿಷ್ಟೇ ಸ್ವರೂಪದ ಕಲ್ಲು ಅಗತ್ಯವಿಲ್ಲ. ಸಿಕ್ಕ ಕಲ್ಲನ್ನು ಪುಡಿ ಮಾಡುವ ಕಾಯಕ. ಹೀಗಾಗಿ ದೊಡ್ಡ ಬಂಡೆಗಳನ್ನು ಸ್ಫೋಟಿಸಲು ಅಪಾಯಕಾರಿ ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಜನರಿಗೆ ಇದು ಪ್ರತಿ ನಿತ್ಯ ಜೀವನದ ಭಾಗವಾಗಿ ಬಿಟ್ಟಿದೆ. ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ ತಾಲೂಕಿನಲ್ಲಿ ಕ್ವಾರಿ ಗಣಿಗಾರಿಕೆಯ ಅಕ್ರಮಗಳು ಪರಕಾಷ್ಠೆ ತಲುಪಿದೆ. ನೆರೆ ಆಂಧ್ರ ಪ್ರದೇಶದ ಉದ್ಯಮಿಗಳು, ರಾಜಕಾರಣಿಗಳು ಕೂಡ ಈ ವ್ಯವಹಾರದಲ್ಲಿ ತೊಡಗಿದ್ದಾರೆ. ಪ್ರಭಾವಿಗಳ ಮಾಲಿಕತ್ವಕ್ಕೆ ಸೇರಿದ ಈ ಕ್ರಷರ್ ಗಳು ಸುರಕ್ಷತಾ ನಿಯಮ ಗಾಳಿಗೆ ತೂರಿದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನಂದಿ ನಿವಾಸಿ ವಸಂತ್ ಕೃಷ್ಣ ಅವರು ವಾಸ್ತವ ಚಿತ್ರಣ ನೀಡಿದರು. ಜಿಲ್ಲೆಯಲ್ಲಿ ಪರವಾನಗಿ ಪಡೆದ ಕ್ರಷರ್ ಗಳಿಗಿಂತಲೂ ಅಕ್ರಮ ಕ್ರಷರ್ ಗಳೇ ಜಾಸ್ತಿ ಯಿವೆ. ಇವನ್ನು ಪ್ರಶ್ನಿಸುವ ಶಕ್ತಿ ಯಾರಿಗೂ ಇಲ್ಲದಂತಾಗಿದೆ.
ಕೋಲಾರಿನಲ್ಲಿ ಅಕ್ರಮ:
ನೆರೆಯ ಕೋಲಾರ ಜಿಲ್ಲೆಯದ್ದು ಇದಕ್ಕಿಂತ ಭಿನ್ನತೆಯಿಲ್ಲ. ಹೇಳಿ ಕೇಳಿ ಕಲ್ಲು ಬಂಡೆಗಳಿಂದ ಕೂಡಿದ ಜಿಲ್ಲೆ ಕೋಲಾರ. ಅದರಲ್ಲೂ ಮಾಲೂರು ತಾಲೂಕು ಮಾತ್ರ ಅಕ್ರಮ ಕ್ವಾರಿಗಳ ಕೇಂದ್ರ ಸ್ಥಾನವಾಗಿದೆ. ದಿನ ನಿತ್ಯ ಸಾವಿರಾರು ಲಾರಿಗಳು ಕಲ್ಲುಗಳನ್ನು ರಾಜಧಾನಿಗೆ ಪೂರೈಸುತ್ತವೆ. ಟೇಕಲ್, ಹುಣಸಿಕೋಟೆ ಸುತ್ತಮುತ್ತ ಗ್ರಾಮಗಳ ಬಳಿ ಕಲ್ಲು ಕ್ವಾರಿಗಳಿಂದ ಪ್ರಪಾತಗಳೇ ಸೃಷ್ಟಿಯಾಗಿವೆ. ಇಲ್ಲಿ ಆಳುವ ಶಾಸಕರ ಕಪಿಮುಷ್ಠಿಗೆ ಒಳಗಾಗುವ ಕ್ವಾರಿಗಳ ಅಕ್ರಮ ಗಣಿ ದಣಿಗಳನ್ನು ಎದುರು ಹಾಕಿಕೊಳ್ಳುವರೂ ಇಲ್ಲ. ಪ್ರಶ್ನಿಸುವಂತೆಯೂ ಇಲ್ಲ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿರುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಮಳಬಾಗಿಲು, ಕೋಲಾರ, ಮಾಲೂರು, ಬಂಗಾರಪೇಟೆ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ದಾಖಲೆಗಳ ಸಮೇತ ದೂರು ನೀಡಿದರೂ ಕ್ರಮ ಜರುಗಿಸುವ ಅಧಿಕಾರಿಗಳೇ ಇಲ್ಲದಂತಗಾಗಿದೆ ಎಂದು ಮಾಲೂರು ಮಾಜಿ ಶಾಸಕ ಮಂಜುನಾಥ್ ಬೇಸರ ವ್ಯಕ್ತಪಡಿಸುತ್ತಾರೆ.
ಬೆಂಗಳೂರು ಗ್ರಾಮಾಂತರ:
ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರಕ್ಕೆ ಹೊಂದಿಕೊಂಡಿರುವ ತಿಪ್ಪಗೊಂಡನಹಳ್ಳಿ ಸುತ್ತಮುತ್ತ ನೂರಾರು ಕ್ರಷರ್ ಗಳು ತಲೆಯೆತ್ತಿವೆ. ದಿನ ನಿತ್ಯ ಸಾವಿವಾರು ಲಾರಿಗಳು ಎಂ ಸ್ಯಾಂಡ್ ಸರಬರಾಜು ಮಾಡುತ್ತವೆ. ಅರಣ್ಯ ಭಾಗದ ಪದತಳದಲ್ಲೇ ಹುಟ್ಟಿರುವ ಈ ಕ್ರಷರ್ ಗಳು ಜನ ಪ್ರತಿನಿಧಿಗಳಿಗೆ ಸೇರಿವೆ. ಇನ್ನೂ ಕೆಲವು ಜನ ಪ್ರತಿನಿಧಿಗಳ ಸಂಬಂಧಿಕರಿಗೆ ಸೇರಿವೆ. ದಿನ ನಿತ್ಯ ಇಲ್ಲಿ ಕೂಡ ಸ್ಫೋಟಕ ಬಳಸಲಾಗುತ್ತದೆ. ಆದರೆ, ಎಲ್ಲಾ ಸುರಕ್ಷತಾ ನಿಯಮಗಳು ಗಾಳಿಗೆ ತೂರಿ ಪರಿಸರ ನಾಶವಾಗುತ್ತಿದೆ. ಇಷ್ಟಾಗಿಯೂ ಜಿಲ್ಲಾಡಳೀತವಾಗಲೀ, ಪೊಲೀಸರಾಗಲೀ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಾಗಲೀ ಅಕ್ರಮದ ವಿರುದ್ಧ ಧ್ವನಿಯೆತ್ತಿಲ್ಲ.ಅಕ್ರಮ ಕಲ್ಲು ಗಣಿಗಾರಿಕೆಗೆ ಉದ್ಯಿಗಳು ಎಷ್ಟು ಕಾರಣ ಕರ್ತರೂ ಅಪ್ರಾಮಾಣಿಕ ಅಧಿಕಾರಿಗಳ ಪಾಲೂ ಅಷ್ಟೇ ಇದೆ ಎನ್ನುತ್ತಾರೆ ತಿಮ್ಮಗೊಂಡನಹಳ್ಳಿ ನಿವಾಸಿಗಳು.
ಪರಿಹಾರ ಸಿಗಲಿದೆಯೇ :
ಶಿವಮೊಗ್ಗ ಹೊಸಗೋಡು ಗ್ರಾಮದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಎಲ್ಲೆಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಧ್ವನೆಯೇಳುತ್ತಿದೆ. ರಾಜ್ಯ ಸರ್ಕಾರವೇ ಹೊಸಗೋಡು ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ. ದುರ್ಘಟನೆ ಕಾರಣಕ್ಕೆ ಅದು ಸುದ್ದಿಯಾಗಿದೆ. ಆದರೆ ಸುದ್ದಿಯಾಗದ ರಾಜ್ಯದ ಅಕ್ರಮ ಕಲ್ಲು ಗಣಿಗಾರಿಕೆ ಯನ್ನು ಸಂಪೂರ್ಣ ನಿಲ್ಲಿಸುವ ಉದ್ದೇಶವಿದ್ದರೆ ಸರ್ಕಾರ ಈ ಕೂಡಲೇ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಪೋಟಕ ಬಳಸುವ ವಿಚಾರದಲ್ಲಿ ಯಾವ ಕಂಪನಿಗಳು ನಿಯಮ ಪಾಲಿಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ ಎನ್ನುತ್ತಾರೆ ಹಿರಿಯ ವಕೀಲರಾದ ರಾಜಣ್ಣ.
ಲೋಕಾಯುಕ್ತರ ಶಿಫಾರಸಿಗೂ ಬೆಲೆಯಿಲ್ಲ !
ರಾಜ್ಯದಲ್ಲಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ಅಕ್ರಮ ಕಲ್ಲು ಹಾಗೂ ಮರಳು ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಮೂರು ವರ್ಷಗಳ ಹಿಂದೆ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಿದ್ದರು. ಮಾತ್ರವಲ್ಲ, ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿ ನೈಸರ್ಗಿಕ ಸಂಪತ್ತನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು. ಲೋಕಾಯುಕ್ತರ ಈ ಸೂಚನೆ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಲೋಯುಕ್ತರಿಗೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಿದ್ದರು. ಅದರ ಪ್ರಕಾರ 2016 ರಿಂದ 2018 ರ ಮೂರು ವರ್ಷದ ಅವಧಿಯಲ್ಲಿ 28 ಸಾವಿರ ಕೇಸು ದಾಖಲಿಸಿದ್ದಾಗಿ ತಿಳಿಸಿದ್ದರು. ನೂರು ಕೋಟಿ ರೂಪಾಯಿ ದಂಡ ವಿಧಿಸಿರುವುದಾಗಿಯೂ ವಿವರಿಸಿದ್ದರು. ಇದಕ್ಕೆ ತೃಪ್ತರಾಗದ ಲೋಕಾಯುಕ್ತರು ದಂಡ ವಸೂಲಿ ಆದ್ಯತೆಯಾಗಬಾರದು. ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಸೂಚಿಸಿದ್ದರು. ಲೋಕಾಯುಕ್ತರು ಸೂಚಿಸಿ ನಾಲ್ಕು ವರ್ಷ ಕಳೆದಿದೆ. ಅಕ್ರಮ ಕಲ್ಲು ಗಣಿಗಾರಿಕೆ ಪರಕಾಷ್ಠೆ ತಲುಪಿದ್ದು ಬಿಟ್ಟರೆ ನಿಯಂತ್ರಣ ಮಾಡಿಲ್ಲ. !
Recommended Video