ಐಐಟಿ ಧಾರವಾಡಕ್ಕೆ: ರಾಯಚೂರು ಬಂದ್ ಯಶಸ್ವಿ
ರಾಯಚೂರು, ಸೆಪ್ಟೆಂಬರ್. 10: ಐಐಟಿ ಕೈ ತಪ್ಪಿದ್ದನ್ನು ಖಂಡಿಸಿ ಗುರುವಾರ ಕರೆ ನೀಡಿದ್ದ ರಾಯಚೂರು ಬಂದ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗರಿಕರು ಸ್ವಯಂ ಪ್ರೇರಿತವಾಗಿ ಬಂದ್ ನಲ್ಲಿ ಪಾಲ್ಗೊಂಡಿದ್ದರು. ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು.
ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಹೆದ್ದಾರಿ ತಡೆ ನಡೆಸಿದ್ದರ ಪರಿಣಾಮ ಕೆಲ ಗಂಟೆಗಳ ಕಾಲ ಸಂಚಾರ ಸಂಪೂರ್ಣ ಬಂದ್ ಆಗಿತ್ತು.[ಐಐಟಿ ಮೈಸೂರಿನ ಕೈ ತಪ್ಪಲು ಏನು ಕಾರಣ? ಪ್ರತಾಪ ಉತ್ತರ]
ನಗರದ ಅಂಬೇಡ್ಕರ್ ವೃತ್ತದಲ್ಲಿ ಒಂದು ಗೂಡಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದರು. ರಾಯಚೂರು ಸಂಸದ ಬಿ.ವಿ.ನಾಯಕ್ ಪ್ರತಿಭಟನೆಯಲ್ಲಿ ಭಾಗವಹಿಸಿ ಐಐಟಿ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. (ಫೋಟೋ ಕೃಪೆ)
ಮಂಗಳವಾರ ರಾತ್ರಿಯೇ ಭುಗಿಲೆದ್ದ ಆಕ್ರೋಶ
ಪ್ರಹ್ಲಾದ ಜೋಷಿ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗುತ್ತದೆ ಎಂದು ಫೇಸ್ ಬುಕ್ ನಲ್ಲಿಬರೆದ ತಕ್ಷಣವೇ ನಾಗರಿಕರಲ್ಲಿ ಆಕ್ರೋಶದ ಕಿಡಿ ಹೊತ್ತಿತ್ತು. ಬುಧವಾರ ರಾತ್ರಿಯೇ ನಗರದ ಬಸ್ ನಿಲ್ದಾಣದ ಮುಂಭಾಗ ಟೈರ್ಗಳಿಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರ ಹಾಕಲು ನಾಗರಿಕರು ಆರಂಭಿಸಿದ್ದರು.
ಎಲ್ಲ ಪಕ್ಷಗಳ ವಿರುದ್ಧ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ಅನಂತ್ ಕುಮಾರ್ ಅವರು ರಾಯಚೂರನ್ನು ಕಡೆಗಣಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಉತ್ತರ ಕರ್ನಾಟಕ ಕಡೆಗಣನೆ
ಉತ್ತರ ಕರ್ನಾಟಕವನ್ನು ಎಲ್ಲ ಸಂಗತಿಗಳಲ್ಲೂ ಕಡೆಗಣನೆ ಮಾಡಲಾಗುತ್ತಿದೆ. ಈ ಬಾರಿ ಸಹ ಇದ್ದ ಅವಕಾಶವನ್ನು ಸರ್ಕಾರಗಳು ಬಲಿ ಕೊಟ್ಟಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೀದಿಗಿಳಿದ ಎನ್ ಎಸ್ ಯುಐ
ಎನ್ ಎಸ್ ಯುಐ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಾಮಾಜಿಕ ಜಾಲತಾಣಗಳ ಮೂಲಕವೂ ಐಐಟಿ ಕೈ ತಪ್ಪಿದ್ದಕ್ಕೆ ಆಕ್ರೋಶ ಹೊರಬೀಳುತ್ತಿದೆ.