ಡಿಕೆಶಿ ಮುಂಬೈ ಭೇಟಿ ಯಶಸ್ವಿ ಆಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು!
Recommended Video
ಬೆಂಗಳೂರು, ಜುಲೈ 19: ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರು ಜಿ. ಟಿ. ದೇವೇಗೌಡ ಹಾಗೂ ಶಿವಲಿಂಗೇಗೌಡ ಜತೆಗೆ ಮುಂಬೈಗೆ ತೆರಳಿದರಲ್ಲ, ಅತೃಪ್ತ ಶಾಸಕರ ಜತೆಗೆ ಸಂಪರ್ಕ ಸಾಧಿಸುವ ಆ ಪ್ರಯತ್ನ ಯಶಸ್ವಿ ಆಗಿದ್ದರೆ ಈಗಿನ ಕರ್ನಾಟಕದ ರಾಜಕೀಯ ಸನ್ನಿವೇಶವೇ ಬೇರೆ ಇರುತ್ತಿತ್ತು ಎನ್ನುತ್ತವೆ ಕಾಂಗ್ರೆಸ್ ನ ಉನ್ನತ ಮೂಲಗಳು.
ವಿಶ್ವಾಸಮತ LIVE: ಕಲಾಪ ಮುಂದೂಡಿಕೆ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸ್ಪೀಕರ್
ಮುಂಬೈನ ಹೋಟೆಲ್ನಲ್ಲಿದ್ದ ಅತೃಪ್ತ ಶಾಸಕರನ್ನು ಭೇಟಿ ಆಗಲು ಡಿ. ಕೆ. ಶಿವಕುಮಾರ್ ಮತ್ತು ಜೆಡಿಎಸ್ ಇಬ್ಬರು ತೆರಳಿದರು ಎಂಬುದು ಟಿವಿಗಳಲ್ಲಿ ತೋರಿಸಿದ ಸುದ್ದಿ. ಆದರೆ ಎನ್ಎಸ್ಯುಐನ ಕರ್ನಾಟಕ ಘಟಕದ ನಾಯಕರನ್ನೂ ಡಿಕೆಶಿ ಮುಂಬೈಗೆ ಕರೆದೊಯ್ದಿದ್ದರು ಮತ್ತು ಅಲ್ಲಿ ನಡೆದ ಅಷ್ಟೂ ಘಟನಾವಳಿಗಳನ್ನು ಅವರೊಬ್ಬರೇ ನಿಭಾಯಿಸಿದರು ಎಂಬುದು ಪಕ್ಷದ ಮೂಲಗಳು ಬಿಟ್ಟುಕೊಡುವ ಮಾಹಿತಿ.
Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್
ಆದರೆ, ಈ ವಿಚಾರದಲ್ಲಿ ಶತಾಯಗತಾಯ ಪ್ರಯತ್ನ ಪಟ್ಟರೂ ಯಶಸ್ಸು ಸಾಧಿಸಲು ಆಗಲೇ ಇಲ್ಲ. ಸ್ವತಃ ಡಿ.ಕೆ.ಶಿವಕುಮಾರ್ ಅವರಿಗಿದ್ದ ವಿಶ್ವಾಸ ಕೂಡ ಅದೇ ಆಗಿತ್ತು; ಅತೃಪ್ತ ಶಾಸಕರ ಜತೆಗೆ ಒಮ್ಮೆ ಮಾತನಾಡಲು ಸಾಧ್ಯವಾದಲ್ಲಿ ಮನವೊಲಿಕೆ ಕಷ್ಟವಾಗಲಾರದು. ಜತೆಗೆ ಸಚಿವ ಸ್ಥಾನ ಮತ್ತೊಂದು ನೀಡಿ, ಮೈತ್ರಿ ಸರಕಾರದ ಜತೆಗೆ ಉಳಿಸಿಕೊಳ್ಳಬಹುದು ಎಂಬ ನಂಬಿಕೆಯಲ್ಲಿ ಅವರಿದ್ದರು.
ಶಾಸಕರ ಅನರ್ಹತೆ ಸೇರಿದಂತೆ ವಿವಿಧ ಆಯ್ಕೆಗಳು
ಯಾವಾಗ ಶಿವಕುಮಾರ್ ರ ಮುಂಬೈ ಭೇಟಿ ವಿಫಲ ಆಯಿತೋ ಅಲ್ಲಿಂದಲೇ ಬೇರೆ ಬೇರೆ ರಣತಂತ್ರಗಳ ಆಯ್ಕೆಯನ್ನು ಮಾಡಿಕೊಳ್ಳಲಾಯಿತು. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಾಗಿ ಅರ್ಜಿ ಹಾಕಿಕೊಳ್ಳುವುದು, ಸಾಂವಿಧಾನಿಕ ಮಾರ್ಗವಾಗಿ ವಿಶ್ವಾಸ ಮತ ಯಾಚನೆ ಮುಂದಿಟ್ಟುಕೊಂಡು ಸಮಯ ಮುಂದೆ ಹಾಕುತ್ತಾ ಸಾಗುವುದು, ಶಾಸಕರ ಅನರ್ಹತೆ ಇತ್ಯಾದಿ ಆಯ್ಕೆಗಳು ಮೊಳಕೆಯೊಡೆದಿದ್ದು ಅಲ್ಲಿಂದಲೇ.
ಕನಿಷ್ಠ ಮಾತುಕತೆ ಮಾರ್ಗವೂ ಬಂದ್ ಆಯಿತು
ಯಾವಾಗ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ, ಮುಂಬೈಗೆ ಉದ್ಯಮಿ ರಾಜೀವ್ ಚಂದ್ರಶೇಖರ್ ಒಡೆತನದ ಖಾಸಗಿ ಕಂಪೆನಿಯ ವಿಮಾನದಲ್ಲಿ ಮುಂಬೈಗೆ ಹೊರಟರೋ ಕಾಂಗ್ರೆಸ್ ನಾಯಕರ ಸಂಪರ್ಕ ಕಡಿದುಕೊಂಡರು. ಅತೃಪ್ತರನ್ನು ಕರೆತರಲು ಕನಿಷ್ಠ ಮಾತುಕತೆಯ ಮಾರ್ಗವೂ ಬಂದ್ ಆಗಿ ಹೋಯಿತು. ಈ ಸಮಯದಲ್ಲಿ ಡಿಕೆಶಿ ಅಖಾಡಕ್ಕಿಳಿದರಾದರೂ ಬೆಂಗಳೂರಿನಲ್ಲಿ ಕುಳಿತು ರೆಬೆಲ್ ಶಾಸಕರ ಸಂಪರ್ಕ ಸಾಧಿಸುವುದು ಸಾಧ್ಯವಾಗಲಿಲ್ಲ.
ಸದನದಲ್ಲೇ ಶ್ರೀರಾಮುಲು 'ಆಪರೇಷನ್'ಗೆ ಕೈ ಹಾಕಿದ ಡಿಕೆಶಿ!
ಬ್ಯಾಂಕ್ ಎಂಡ್ ನಲ್ಲಿ ಶಾಸಕರ ಸಂಪರ್ಕಕ್ಕೆ ಪ್ರಯತ್ನ
ಕೊನೆಗೆ ಬೇರೆ ದಾರಿ ಕಾಣದೆ ಅವರೇ ವಾಣಿಜ್ಯ ನಗರಿಗೆ ಕಾಲಿಟ್ಟರು. ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಶ್ರೀನಿವಾಸ್ ಮತ್ತಿತರರು ಕೂಡ ಡಿಕೆಶಿ ಜತೆ ಹೊರಟರು. ಅಲ್ಲಿ ಸ್ಥಳೀಯ ಎನ್ಎಸ್ಯುಐ ನಾಯಕರ ಸಹಾಯದಿಂದ ಪ್ರತಿಭಟನೆಗೆ ಒಂದಷ್ಟು ಜನರನ್ನು ಕರೆತರಲು ಯೋಜನೆ ರೂಪಿಸಲಾಯಿತು. ಒಂದು ಕಡೆ ಡಿ. ಕೆ. ಶಿವಕುಮಾರ್ ಮುಂಬೈನಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರೆ, ಒಂದು ತಂಡ ಬ್ಯಾಕ್ ಎಂಡ್ನಲ್ಲಿ ಹೋಟೆಲ್ ಒಳಗಿದ್ದ ಶಾಸಕರ ಸಂಪರ್ಕಕ್ಕಾಗಿ ಪ್ರಯತ್ನ ನಡೆಸುತ್ತಿತ್ತು ಎಂಬುದು ಮೂಲಗಳು ಹೇಳುವ ಮಾಹಿತಿ.
ಅತೃಪ್ತ ಶಾಸಕ ಮಿತ್ರರಿಗೆ ಡಿ.ಕೆ.ಶಿವಕುಮಾರ್ ವಿನಮ್ರ ಮನವಿ
ಮುಂಬೈ ಭೇಟಿ ಸಫಲವಾಗಿದ್ದರೆ ಬೇರೆಯದೇ ಕಥೆ ಇತ್ತು
ಆದರೆ, ಎಲ್ಲಾ ಹೈಡ್ರಾಮಾಗಳ ನಂತರವೂ ಮುಂಬೈ ಪೊಲೀಸರು ಹಾಗೂ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರ ಪ್ರಯತ್ನಗಳನ್ನು ವಿಫಲಗೊಳಿಸಿತು. ಡಿಕೆಶಿ ಬೆಂಗಳೂರಿಗೆ ಹಿಂತಿರುಗಿದರು. ಒಂದು ವೇಳೆ ಡಿಕೆಶಿ ವಾಣಿಜ್ಯ ನಗರ ಭೇಟಿ ಸಫಲವಾಗಿದ್ದೇ ಆಗಿದ್ದರೆ ಇವತ್ತಿನ ಸ್ಥಿತಿ ಬೇರೆಯೇ ಇರುತ್ತಿತ್ತು ಎನ್ನತ್ತವೆ ಪಕ್ಷದ ಮೂಲಗಳು.