ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ರಿಂದ ಕಾನೂನು ಹೋರಾಟ
ಬೆಂಗಳೂರು, ಏಪ್ರಿಲ್ 26 : ಐಎಎಸ್ ಅಧಿಕಾರಿ ಮೊಹ್ಮದ್ ಮೊಯ್ಸಿನ್ ನ್ಯಾಯಾಲಯದ ಮೆಟ್ಟಿಲೇರುವ ಸುಳಿವು ನೀಡಿದ್ದಾರೆ. ಮೊಹ್ಮದ್ ಮೊಯ್ಸಿನ್ ಅವರು ನರೇಂದ್ರ ಮೋದಿ ಹೆಲಿಕಾಪ್ಟರ್ ತಪಾಸಣೆ ನಡೆಸಿ ಅಮಾನತುಗೊಂಡಿದ್ದರು.
ಮೊಹ್ಮದ್ ಮೊಯ್ಸಿನ್ ಅವರನ್ನು ಕೇಂದ್ರ ಚುನಾವಣಾ ಆಯೋಗ ಅಮಾನತು ಮಾಡಿತ್ತು. ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಅಮಾನತು ಆದೇಶಕ್ಕೆ ತಡೆ ನೀಡಿದೆ. ಇದರಿಂದಾಗಿ ಆಯೋಗ ಅಮಾನತು ಆದೇಶ ವಾಪಸ್ ಪಡೆದಿದೆ.
ಆದರೆ, ಮೊಹ್ಮದ್ ಮೊಯ್ಸಿನ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಆಯೋಗದ ಈ ಕ್ರಮವನ್ನು ಪ್ರಶ್ನಿಸಿ ಮೊಹ್ಮದ್ ಮೊಯ್ಸಿನ್ ಅವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವ ಸುಳಿವನ್ನು ನೀಡಿದ್ದಾರೆ.
ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಏಪ್ರಿಲ್ 25ರ ಆದೇಶದ ಬಳಿಕ ಮೊಹ್ಮದ್ ಮೊಯ್ಸಿನ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.

ಪತ್ರಿಕಾ ಪ್ರಕಟಣೆ
ಮೊಹ್ಮದ್ ಮೊಯ್ಸಿನ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಚುನಾವಣಾ ಆಯೋಗ 13/3/2019ರ ಆದೇಶದಂತೆ ನನ್ನನ್ನು ಜನರಲ್ ಅಬ್ಜರ್ವರ್ ಆಗಿ ನೇಮಿಸಿತು. ಓಡಿಶಾ ರಾಜ್ಯದ ಸಂಬಲ್ಪುರ್ ಸಂಸದೀಯ ಕ್ಷೇತ್ರವನ್ನು ನನಗೆ ಹಂಚಿಕೆ ಮಾಡಲಾಯಿತು ಎಂದು ಹೇಳಿದ್ದಾರೆ.

ಸಂಬಲ್ಪುರ ತಲುಪಿದೆ
3/4/2019ರಂದು ನಾನು ಸಂಬಲ್ಪುರ ತುಲುಪಿ ಜನರಲ್ ಅಬ್ಜರ್ವರ್ ಆಗಿ ಕೆಲಸ ಆರಂಭಿಸಿದೆ. ಎಸ್ಪಿಜಿ ರಕ್ಷಣೆ ಪಡೆಯುವವರಿಗೆ ಸಂಬಂಧಿಸಿದಂತೆ ಆಯೋಗವು ಹೊರಡಿಸಿದ ಸೂಚನೆಗಳನ್ನು ನಾನು ಪಾಲಿಸಿಲ್ಲ ಎಂಬ ಆರೋಪದ ಮೇಲೆ ನನ್ನನ್ನು 16/4/2019ರ ಆದೇಶದ ಅನ್ವಯ ಅಮಾನತು ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬರಸಿಡಿಲು ಬಡಿದಂತಾಯಿತು
ಆಯೋಗದ ಆದೇಶದಿಂದಾಗಿ ಬರಸಿಡಿಲು ಬಡಿದಂತಾಯಿತು. ಏಕೆಂದರೆ ನಿಗದಿತ ಸೂಚನೆಗಳನ್ನು ಪಾಲಿಸಿ ಪ್ರಸ್ತುತ ನಡೆಯುತ್ತಿರುವ ಚುನಾವಣೆ ಮಾತ್ರವಲ್ಲ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸಹ ನಾನು ಜನರಲ್ ಅಬ್ಜರ್ವರ್ ಆಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದೆ ಎಂದು ಮೊಹ್ಮದ್ ಮೊಯ್ಸಿನ್ ತಿಳಿಸಿದ್ದಾರೆ.

ಅಮಾನತು ಆದೇಶಕ್ಕೆ ತಡೆ
ಆಯೋಗದ ಆದೇಶವನ್ನು ನಾನು ಕೇಂದ್ರ ಆಡಳಿತ ನ್ಯಾಯ ಮಂಡಳಿ ಬೆಂಗಳೂರು ಪೀಠದಲ್ಲಿ ಪ್ರಶ್ನಿಸಿದೆ. ಏ.25ರಂದು ಮಧ್ಯಂತರ ಆದೇಶ ನೀಡಿದ ನ್ಯಾಯ ಮಂಡಳಿ ಅಮಾನತು ಆದೇಶ ರದ್ದು ಮಾಡಿದೆ. ಮೇ 3ರಂದು ಮುಂದಿನ ವಿಚಾರಣೆ ನಡೆಯಲಿದೆ.
ಸಿಎಟಿ ಆದೇಶದ ಬಳಿಕ ಆಯೋಗ ಅಮಾನತು ಆದೇಶ ರದ್ದು ಮಾಡಿದೆ. ಆದರೆ, ನನ್ನ ವಿರುದ್ಧ ಶಿಸ್ತಿನ ನಡಾವಳಿಯನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಮುಂದಿನ ಆದೇಶದ ತನಕ ನನ್ನನ್ನು ಬಹಿಷ್ಕರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನಿನ ಪರಿಹಾರ ಪಡೆಯಲಿದ್ದೇನೆ.












Click it and Unblock the Notifications