'ಜೆಡಿಎಸ್ ಪಕ್ಷ ತಾಯಿ ಇದ್ದಂತೆ, ತಾಯಿ ಮರೆತರೆ ಅನ್ನ ಸಿಗುವುದಿಲ್ಲ'
ರಾಮನಗರ, ಫೆಬ್ರವರಿ 08 : 'ಜೆಡಿಎಸ್ ಪಕ್ಷ ತಮಗೆ ತಾಯಿ ಇದ್ದಂತೆ, ತಾಯಿಯನ್ನು ಮರೆತರೆ ಅನ್ನ ಸಿಗುವುದಿಲ್ಲ. ತಾವು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದಿಲ್ಲ' ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಮಾಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಭಾನುವಾರ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜಮೀರ್ ಅಹಮದ್ ಖಾನ್ ಪ್ರಚಾರ ನಡೆಸಿದರು. ಮಾಗಡಿ ಶಾಸಕ ಬಾಲಕೃಷ್ಣ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು. ಹೆಬ್ಬಾಳದಲ್ಲಿ ನಡೆದ ಉಪ ಚುನಾವಣೆ ಪ್ರಚಾರದಲ್ಲಿ ಮಾತ್ರ ಜಮೀರ್ ಪಾಲ್ಗೊಂಡಿರಲಿಲ್ಲ. [ಸದ್ಯಕ್ಕೆ ಜಮೀರ್ ಉಚ್ಛಾಟನೆ ಮಾಡುವುದಿಲ್ಲ]
ಕುದೂರಿನಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, 'ತಮ್ಮ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ, ತಾವು ಎಂದಿಗೂ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು. [ಜಮೀರ್ ಉಲ್ಟಾ ಹೊಡೆಯಲು ಕಾರಣ ಹೀಗೂ ಇರಬಹುದೇ?]
'ಆನೇಕಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ತಾವು ಪ್ರಚಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಜಮೀರ್ ಅವರು, ಕಾಂಗ್ರೆಸ್ ಪರ ಪ್ರಚಾರ ನಡೆಸಲು ನಾನೇನು ಹುಚ್ಚನಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಹಂಗಿನ ಅರಮನೆ ತಮಗೆ ಬೇಕಿಲ್ಲ' ಎಂದು ಹೇಳಿದರು. ಜಮೀರ್ ಅಹಮದ್ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ.......[ದೇವೇಗೌಡ, ಎಚ್ಡಿಕೆಗೆ ಇಕ್ಬಾಲ್ ಅನ್ಸಾರಿ ಬಹಿರಂಗ ಸವಾಲು!]
'ಬಿಜೆಪಿ, ಕಾಂಗ್ರೆಸ್ ಹಂಗಿನ ಅರಮನೆ ಬೇಕಿಲ್ಲ'
ಭಾನುವಾರ ಮಾಗಡಿ ತಾಲೂಕಿನ ಕುದೂರಿನಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು, 'ಜೆಡಿಎಸ್ ಪಕ್ಷದ ಜೋಪಡಿಯೇ ತಮಗೆ ಮನೆ. ಕಾಂಗ್ರೆಸ್ ಮತ್ತು ಬಿಜೆಪಿಯ ಹಂಗಿನ ಅರಮನೆ ತಮಗೆ ಬೇಕಿಲ್ಲ. ತಾವು ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'ಪಕ್ಷದಿಂದ ಉಚ್ಛಾಟಿಸುವುದಿಲ್ಲ'
'ಎಚ್.ಡಿ.ದೇವೇಗೌಡರು ತಮ್ಮನ್ನು ಪಕ್ಷದಿಂದ ಉಚ್ಛಾಟಿಸುವುದಿಲ್ಲ. ಆದರೆ, ಸಭೆ ಸಮಾರಂಭಗಳಿಗೆ ಕರೆಯುವುದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹೇಳಿಕೆ ಕೊಡಲಿ, ಜೆಡಿಎಸ್ ಪಕ್ಷ ತಮಗೆ ತಾಯಿ ಇದ್ದಂತೆ, ತಾಯಿಯನ್ನು ಮರೆತರೆ ಅನ್ನ ಸಿಗುವುದಿಲ್ಲ' ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
'2018ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ'
'2006ರಲ್ಲಿ ಇದ್ದಂತೆ ಕುಮಾರಸ್ವಾಮಿ ಅವರು ಬದಲಾದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದು ಜಮೀರ್ ಅಹಮದ್ ಖಾನ್ ತಿಳಿಸಿದರು.
'ಸಣ್ಣ-ಪುಟ್ಟ ಭಿನ್ನಾಭಿಪ್ರಾಯವಿದೆ'
'ತಮ್ಮ ಮತ್ತು ಕುಮಾರಸ್ವಾಮಿ ಅವರ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿವೆ. ಹಾಗೆಂದು ತಾವು ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಅಂತಹ ಸಂದರ್ಭ ಬಂದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೇಯೇ ಹೊರತು ಬೇರೆ ಪಕ್ಷವನ್ನು ಸೇರುವುದಿಲ್ಲ' ಎಂದು ಜಮೀರ್ ಸ್ಪಷ್ಟಪಡಿಸಿದರು.
'ಆನೇಕಲ್ಗೆ ಪ್ರಚಾರಕ್ಕೆ ಹೋಗಿಲ್ಲ'
'ಆನೇಕಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ತಾವು ಪ್ರಚಾರ ನಡೆಸಿಲ್ಲ' ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು. 'ನನ್ನ ಟ್ರಾವೆಲ್ಸ್ನಲ್ಲಿ ಕೆಲಸ ಮಾಡುವ ಚಾಲಕರು ಮದರಸಾ ಕಟ್ಟಲು ಅಲ್ಲಿ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಕಾಂಗ್ರೆಸ್ ಪರ ಪ್ರಚಾರ ನಡೆಸಲು ನಾನೇನು ಹುಚ್ಚನಲ್ಲ' ಎಂದು ಜಮೀರ್ ಹೇಳಿದರು.
ಜಮೀರ್ ಅಹಮದ್ ಫೋಟೋ ನಾಪತ್ತೆ
ಭಾನುವಾರ ಹೆಬ್ಬಾಳದಲ್ಲಿ ಉಪ ಚುನಾವಣೆ ಪ್ರಚಾರಕ್ಕಾಗಿ ಜೆಡಿಎಸ್ ಸಮಾವೇಶ ಆಯೋಜಿಸಿತ್ತು. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶಕ್ಕಾಗಿ ಹಾಕಿದ್ದ ಫ್ಲೆಕ್ಸ್ನಲ್ಲಿ ಜಮೀರ್ ಅಹಮದ್ ಅವ ಫೋಟೋ ಕಾಣೆಯಾಗಿತ್ತು. ಜಮೀರ್ ಅಹಮದ್ ಸಹ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ.
ದೇವೇಗೌಡರು ಏನು ಹೇಳಿದ್ದರು?
ಫೆ.2ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ದೇವೇಗೌಡರು 'ಭಿನ್ನಮತದ ಚಟುವಟಿಕೆ ನಡೆಸುವ ಜಮೀರ್ ಅಹಮದ್ ಖಾನ್ ಹಾಗೂ ಅವರ ಜೊತೆಗಿರುವ ಶಾಸಕರು ಪಕ್ಷ ಬಿಟ್ಟು ಹೋಗಲಿ' ಎಂದು ಹೇಳಿದ್ದರು. 'ನನ್ನ ವಿರುದ್ಧ ಪತ್ರಿಕೆಗಳಲ್ಲಿ ಜಮೀರ್ ಉರ್ದುವಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಪಕ್ಷಕ್ಕಾಗಿ ದೇವೇಗೌಡರು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದ್ದಾರೆ. ಜಮೀರ್ ಅಹಮದ್ ಯಾವ ಪಕ್ಷದಲ್ಲಿದ್ದಾರೆ?' ಎಂದು ಪ್ರಶ್ನಿಸಿದ್ದರು.