ಕನ್ನಡಿಗರಿಗೆ ಕೆಟ್ಟ ಹೆಸರು ತರುವುದಿಲ್ಲ : ಎಚ್.ಎಲ್.ದತ್ತು
ಬೆಂಗಳೂರು, ಅ. 21 : 'ನಾನು ಕರ್ನಾಟಕಕ್ಕೆ ಒಳ್ಳೆಯ ಹೆಸರನ್ನು ತರುತ್ತೇನೋ ಇಲ್ಲವೋ ಗೊತ್ತಿಲ್ಲ ! ಆದರೆ, ನಿಶ್ಚಯವಾಗಿಯೂ ಕೆಟ್ಟ ಹೆಸರನ್ನಂತೂ ತರುವುದಿಲ್ಲ ಎಂದು ಕನ್ನಡಿಗರಿಗೆ ಭರವಸೆ ನೀಡಲು ಇಚ್ಛಿಸುತ್ತೇನೆ' ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹಂದ್ಯಾಳ್ ಲಕ್ಷ್ಮಿನಾರಾಯಣಸ್ವಾಮಿ ದತ್ತು ಅವರು ಹೇಳಿದ್ದಾರೆ.
ಸೋಮವಾರ ಬೆಂಗಳೂರು ವಕೀಲರ ಸಂಘವು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಎಚ್.ಎಲ್.ದತ್ತು ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಹಣೆಬರಹ ಹಾಗೂ ದೇವರನ್ನು ಬಲವಾಗಿ ನಾನು ನಂಬುತ್ತೇನೆ. ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುವ ಧೈರ್ಯ ಹಾಗೂ ಆತ್ಮವಿಶ್ವಾಸ ನನ್ನಲ್ಲಿದೆ' ಎಂದರು. [ದತ್ತು ಅವರ ಸಂಕ್ಷಿಪ್ತ ಪರಿಚಯ]
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅತ್ಯುನ್ನತ ಸ್ಥಾನ ಅಲಂಕರಿಸಲು ಅವಕಾಶವಿರುವುದು ಪ್ರಜಾಪ್ರಭುತ್ವದ ವೈಶಿಷ್ಟ್ಯ ಎಂದು ಬಣ್ಣಿಸಿದರು. ಹತ್ತು ವರ್ಷಗಳ ಕಾಲ ವಕೀಲ ವೃತ್ತಿಯಲ್ಲಿದ್ದರೂ ತಾವು ವಕೀಲನಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ಹೆಚ್. ವಘೇಲಾ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲಗೌಡ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ. ಎನ್. ಸುಬ್ಬಾರೆಡ್ಡಿ, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರೊ ರವಿವರ್ಮ ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕಕ್ಕೆ ಕೆಟ್ಟ ಹೆಸರು ತರುವುದಿಲ್ಲ
'ನಾನು ಕರ್ನಾಟಕಕ್ಕೆ ಒಳ್ಳೆಯ ಹೆಸರನ್ನು ತರುತ್ತೇನೋ ಇಲ್ಲವೋ ಗೊತ್ತಿಲ್ಲ ! ಆದರೆ, ನಿಶ್ಚಯವಾಗಿಯೂ ಕೆಟ್ಟ ಹೆಸರನ್ನಂತೂ ತರುವುದಿಲ್ಲ ಎಂದು ಕನ್ನಡಿಗರಿಗೆ ಭರವಸೆ ನೀಡಲು ಇಚ್ಛಿಸುತ್ತೇನೆ' ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹಂದ್ಯಾಳ್ ಲಕ್ಷ್ಮಿನಾರಾಯಣಸ್ವಾಮಿ ದತ್ತು ಅವರು ಹೇಳಿದರು.
ಎಲ್ಲರನ್ನೂ ಸ್ಮರಿಸಿದ ಮುಖ್ಯನ್ಯಾಯಮೂರ್ತಿಗಳು
ಉನ್ನತ ಹುದ್ದೆ ಏರಲು ತಮಗೆ ಆತ್ಮಸ್ಥೈರ್ಯ ತುಂಬಿದ ತಮ್ಮ ಶಾಲಾ ಮುಖ್ಯೋಪಾಧ್ಯಾಯ ರಂಗನಾಥರಾವ್, ವೃತ್ತಿಯಲ್ಲಿ ಉತ್ತುಂಗಕ್ಕೇರಲು ಮಾರ್ಗದರ್ಶನ ಮಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್. ಸಂತೋಷ್ ಹೆಗಡೆ ಹಾಗೂ ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ದಿ.ಆರ್. ಎನ್. ನರಸಿಂಹಮೂರ್ತಿ ಸ್ಮರಿಸಿದ ದತ್ತು ಅವರು, ತಮಗೆ ಪರಿಶ್ರಮ ಹಾಗೂ ವಿನಮ್ರತೆಯ ಪಾಠ ಕಲಿಸಿದ ತಂದೆ-ತಾಯಿ, ಗುರುಗಳಿಗೂ ತಲೆಬಾಗುವುದಾಗಿ ವಿನಯಪೂರ್ವಕವಾಗಿ ನುಡಿದರು.
ಕಕ್ಷಿದಾರರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಾರೆ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅತ್ಯುನ್ನತ ಸ್ಥಾನ ಅಲಂಕರಿಸಲು ಅವಕಾಶವಿರುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ ಎಂದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಪ್ರಕರಣಗಳಿಂದ ನ್ಯಾಯಾಲಯಗಳು ಹೆಚ್ಚು ಕ್ರಿಯಾಶೀಲವಾಗುತ್ತಿವೆ. ಒತ್ತಡಗಳ ನಡುವೆ ಗೆದ್ದವನು ಸೋತ ಹಾಗೂ ಸೋತವನು ಸತ್ತ ಎಂದಾಗಬಾರದು. ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ದತ್ತು ಅವರು ಶ್ರಮಿಸುತ್ತಾರೆಂಬ ಭರವಸೆ ಇದೆ ಎಂದು ಹೇಳಿದರು.
ನ್ಯಾಯಾಲಯದ ಪೀಠವನ್ನು ಸ್ಥಾಪಿಸಿ
ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರೊ ರವಿವರ್ಮ ಕುಮಾರ್ ಅವರು ಮಾತನಾಡಿ, ದಕ್ಷಿಣ ಭಾರತದಲ್ಲಿ, ಅವಕಾಶವಿದ್ದರೆ ಬೆಂಗಳೂರಿನಲ್ಲಿಯೇ, ಭಾರತ ಸುಪ್ರೀಂಕೋರ್ಟ್ ಪೀಠವನ್ನು ಸ್ಥಾಪಿಸಿ ಇತಿಹಾಸ ಸೃಷ್ಠಿಸುವಂತೆ ದತ್ತು ಅವರಲ್ಲಿ ಮನವಿ ಮಾಡಿದರು.
ದಂಪತಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಎಚ್.ಎಲ್.ದತ್ತು ಮತ್ತು ಶ್ರೀಮತಿ ಗಾಯತ್ರಿ ದೇವಿ ದತ್ತು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.