ಸಿಡಿ ವಿವಾದ : ಯಾವುದೇ ತನಿಖೆಗೆ ಸಿದ್ಧ ಅಂದ್ರು ಕುಮಾರಣ್ಣ
ಬೆಂಗಳೂರು, ಜು. 7 : ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ನೀಡಬೇಕಾಗುತ್ತದೆ ಎಂಬ ಹೇಳಿಕೆ ಕುರಿತು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ತಾವು ಯಾರಬಳಿಯೂ ಹಣ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಇಂದಿನ ರಾಜಕೀಯ ವ್ಯವಸ್ಥೆಗಳ ಚಿತ್ರಣವನ್ನು ನಾಯಕರೊಂದಿಗೆ ಹಂಚಿಕೊಂಡಿದ್ದೇನೆಯೇ ಹೊರತು ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಹೇಳಿದರು. [ಎಚ್ಡಿಕೆ ವಿವಾದ ಯಾರು, ಏನೆಂದರು?]

ಪಕ್ಷದ ಯಾವ ಶಾಸಕರು ಹಣ ಪಡೆದು ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ತಾವು ನೀಡಿರುವ ಹೇಳಿಕೆ ಕುರಿತು ಯಾವುದೇ ತನಿಖೆ ಎದುರಿಸಲು ಸಿದ್ಧವಿದ್ದು, ಸರ್ಕಾರ ಅಗತ್ಯವಿದ್ದರೆ ತನಿಖೆ ಮಾಡಿಸಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.
ಪ್ರತಿಕ್ರಿಯೆ ನೀಡಲು ಗೌಡರ ನಕಾರ : ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ನಮ್ಮ ಶಾಸಕರು ತಲಾ 1 ಕೋಟಿ ಹಣ ಕೇಳುತ್ತಿದ್ದಾರೆ ಎಂಬ ತಮ್ಮ ಪುತ್ರ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಿರಾಕರಿಸಿದ್ದಾರೆ. [ಏನಿದು ಸಿಡಿ, ಅದರಲ್ಲೇನಿದೆ?]
ಕೇಂದ್ರದ ಮಧ್ಯಪ್ರವೇಶ : ಎಚ್.ಡಿ.ಕುಮಾಸ್ವಾಮಿ ಅವರ ಒಂದು ಕೋಟಿ ರೂ. ಹೇಳಿಕೆ ಸದ್ಯ ಕೇಂದ್ರ ಸರ್ಕಾರದ ಗಮನ ಸೆಳೆದಿದೆ. ಪ್ರಕರಣದ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಆದರೆ, ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಇಲಾಖೆ ಪ್ರಕರಣದ ಕುರಿತು ಯಾವುದೇ ವರದಿ ನೀಡುವಂತೆ ಸೂಚನೆ ನೀಡಿಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಹೇಳಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಯಾವುದೇ ಚಟುವಟಿಕೆ ನಡೆದಿಲ್ಲ, ಅವರ ಪಕ್ಷದಲ್ಲಿ ನಡೆದಿರಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications