ಆರ್ಎಸ್ಎಸ್ ಮೂಲಕ ಮತ್ತೆ ಬಿಜೆಪಿ ಸೇರ್ತಾರಾ ಕೆ ಎಸ್ ಈಶ್ವರಪ್ಪ?
ವಿಜಯಪುರ, ಸೆಪ್ಟೆಂಬರ್ 09: ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಸಿಗದ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದರಿಂದ ಉಚ್ಛಾಟನೆ ಮಾಡಲಾಗಿತ್ತು. ಇದೀಗ ಕೆ ಎಸ್ ಈಶ್ವರಪ್ಪ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಚರ್ಚೆ ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ.
ಆರ್ಎಸ್ಎಸ್ ಮೂಲಕ ಮತ್ತೆ ಬಿಜೆಪಿ ಸೇರಲು ಕೆ ಎಸ್ ಈಶ್ವರಪ್ಪ ಅವರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಪ್ರತಿಕ್ರಿಯಿಸಿದ್ದು, ಬಿಜೆಪಿ, ಯಡಿಯೂರಪ್ಪ ನಡೆ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಆರ್ಎಸ್ಎಸ್ ಮೂಲಕ ಮತ್ತೆ ಬಿಜೆಪಿ ಸೇರುವ ಅವಶ್ಯಕತೆ ನನಗಿಲ್ಲ. ನಾನೂ ಆರ್ಎಸ್ಎಸ್ನವನೇ ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು ಎಂದಿದ್ದಾರೆ.

ರಾಯಣ್ಣ ಬ್ರಿಗೇಡ್ ನಿಲ್ಲಿಸುವಂತೆ ಬಿಎಸ್ ಯಡಿಯೂರಪ್ಪ ಅಮಿತ್ ಶಾಗೆ ಹೇಳಿದ್ದರು. ಅಮಿತ್ ಶಾ ಹೇಳಿದ್ದಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ಬ್ರಿಗೇಡ್ ನಿಲ್ಲಿಸಿದ್ದೆ. ಇಂಧನ ಸಚಿವನಾಗಿದ್ದಾಗ ರಾಜಿನಾಮೆ ಕೊಟ್ಟು ರಾಜ್ಯಾಧ್ಯಕ್ಷನಾಗು ಅಂದರು. ಇಂಧನ ಖಾತೆಯ ಸಚಿವ ಸ್ಥಾನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷನಾದೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲೂ ನನಗೆ ಮೋಸ ಮಾಡಿದರು. ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಎಲ್ಲಿಯವರೆಗೆ ಇರಬೇಕು. ಅಪ್ಪ, ಮಕ್ಕಳ ಕೈಯಲ್ಲಿ ಇರಬೇಕಾ ಎಂದು ಖಾರವಾಗಿ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಎಲ್ಲಾ ಹಿರಿಯ ಕಾರ್ಯಕರ್ತರಿಗೆ ಇಂಥ ವಿಚಾರದಲ್ಲಿ ನೋವಿದೆ. ಅವರಿಗ್ಯಾರಿಗೂ ತೃಪ್ತಿಯಿಲ್ಲ, ಬಹಿರಂಗವಾಗಿ ಹೇಳಲಿಕ್ಕೆ ತಯಾರಿಲ್ಲ. ಯತ್ನಾಳ್ರಂತಹ ಕೆಲವರು ಮಾತ್ರ ಈ ಬಗ್ಗೆ ಹೇಳುತ್ತಿದ್ದಾರೆ. ಮೊನ್ನೆ ಹತ್ತು-ಹನ್ನೆರಡು ಜನ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದೆಂಬ ನೋವಿದೆ. ಕಾಂಗ್ರೆಸ್ ಪಕ್ಷವನ್ನು ನರೇಂದ್ರ ಮೋದಿಯವರು ಟೀಕೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಕೊಟ್ಟಿಲ್ವಾ? ಎಂದು ವಾಗ್ದಾಳಿ ಮಾಡಿದ್ದಾರೆ.
ಇನ್ನೂ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮುಡಾ ಹಗರಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ರಾಜೀನಾಮೆಗೆ ಆಗ್ರಹಿಸಿದ್ದಿರಿ. ನಾನು ಸಹ ರಾಜೀನಾಮೆ ನೀಡಿದ್ದೆ, ಈಗ ನೀವ್ಯಾಕೆ ರಾಜೀನಾಮೆ ನೀಡ್ತಿಲ್ಲ. ನಿಮ್ಮ ವಿರುದ್ಧ ಭ್ರಷ್ಟಾಚಾರ ಆಪಾದನೆ ಬಂದಾಗ ಒಂದು ರೀತಿ, ಬೇರೆಯವರ ಮೇಲೆ ಆಪಾದನೆ ಬಂದಾಗ ಮತ್ತೊಂದು ರೀತಿ ಎಂದು ಕಿಡಿಕಾರಿದ್ದಾರೆ.
ನನ್ನ ಮೇಲಿನ ಆರೋಪದಲ್ಲಿ ನ್ಯಾಯಾಲಯ ನನಗೆ ದೋಷ ಮುಕ್ತ ಮಾಡಿತು. ಕ್ಲೀನ್ಚಿಟ್ ಸಿಕ್ಕ ಬಳಿಕ ನಮ್ಮ ನಾಯಕರು ನನಗೆ ಮೋಸ ಮಾಡಿದರು. ನಿಮಗೂ ಕ್ಲೀನ್ ಚಿಟ್ ಸಿಕ್ಕರೆ ನೀವು ಸಿಎಂ ಆಗಿ ಮುಂದುವರಿಯಿರಿ. ಇಲ್ಲವಾದರೆ ಸಿಎಂ ಆಗಿ ಮುಂದುವರಿಯೋಕೆ ಬರಲ್ಲ ಎಂದಿದ್ದಾರೆ. ಬಿಜೆಪಿ ಮಾಜಿ ಸಚಿವರ ವಿರುದ್ಧ ಯಾವುದೇ ಬಾಕಿ ಇಲ್ಲವೆಂದು ರಾಜ್ಯಪಾಲರ ಕಚೇರಿ ಸ್ಪಷ್ಟನೆ ನೀಡಿದೆ. ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಎಂದರೆ ಸುಳ್ಳು, ಸುಳ್ಳಿಗೂ ಒಂದು ಮಿತಿ ಇರಬೇಕು. ಸಿಎಂ, ಡಿಸಿಎಂ ಆಗಲು ಶಕ್ತಿ ಯೋಗ್ಯತೆ ಇಲ್ಲವೋ ಎಂಬುದು ನಿರ್ಧಾರವಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.












Click it and Unblock the Notifications