HD Kumaraswamy: ಮತ್ತೆ ನಾನೇ ಮುಖ್ಯಮಂತ್ರಿ : ಹೆಚ್ ಡಿ ಕುಮಾರಸ್ವಾಮಿ ಮಾತಿನ ಮರ್ಮವೇನು?
ಮಂಡ್ಯ, ಅಕ್ಟೋಬರ್ 19: 2028ರ ವರೆಗೆ ಈ ಸರ್ಕಾರ ನಡೆಯಲ್ಲ ಎನ್ನುವುದು ಖಚಿತ. ಮತ್ತೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಜನರು ಒಂದು ಅವಕಾಶ ಕೊಡುತ್ತಾರೆ ಸಿಗುವ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ಬರುತ್ತದೆ. ನಾನು ಜ್ಯೋತಿಷ್ಯಗಾರನಲ್ಲ, ಆದರೂ ಹೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮಂಡ್ಯದಲ್ಲಿ ಉದ್ಯೋಗ ಮೇಳದ ಸಮಾರೋಪದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲಿಲ್ಲ. ಜನರು ಮತ್ತು ಆ ಪಕ್ಷದ ಶಾಸಕರೇ ಸರ್ಕಾರವನ್ನು ತೆಗೆಯುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದರು.

2028ರವರೆಗೆ ಈ ಸರ್ಕಾರ ನಡೆಯಲ್ಲ. ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೇಗುದಿ ಇದೆ. ಅದು ಯಾವಾಗ ಅಸ್ಪೋಟ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಕಾದು ನೋಡೋಣ. ನಾವು ಅವರ ಸರ್ಕಾರ ಅಲ್ಲಾಡಿಸುತ್ತೇವೆ ಎನ್ನುವುದು ಸರಿಯಲ್ಲ, ಅವರ ಶಾಸಕರು ಮತ್ತು ಜನರೇ ಸರ್ಕಾರದ ಬುಡ ಅಲ್ಲಾಡಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು ಸಚಿವರು.
ಸರ್ಕಾರದ ನಿಷ್ಕ್ರಿಯತೆಯಿಂದ ಶಾಸಕರು ಹಳ್ಳಿಗೆ ಹೋಗಿ ಜನರನ್ನು ಭೇಟಿ ಮಾಡದಂತಹ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ನಡವಳಿಕೆ ಬಗ್ಗೆ ಅವರಲ್ಲೇ ವಿಪರೀತ ಅಸಮಾಧಾನ ಇದೆ, ಅದು ಸ್ಪೋಟವಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಜನ ಮತ್ತೆ ತೀರ್ಮಾನ ಮಾಡ್ತಾರೆ ಅನ್ನುವ ವಿಶ್ವಾಸದಲ್ಲಿದ್ದೇನೆ. ಜನ ಬಯಸಿದರೆ ಯಾಕೆ ಆಗಬಾರದು? ನಾನು ಮುಖ್ಯಮಂತ್ರಿ ಸ್ಥಾನ ಐದು ವರ್ಷಗಳ ಸರ್ಕಾರ ಕೊಡಿ ಅಂತ ಜನತೆಗೆ ಈಗಲೂ ಮನವಿ ಮಾಡುತ್ತೇನೆ. ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಮಾಡಿದ್ದು. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲೂ ನಾಡಿಗೆ ಕೊಟ್ಟ ಜನಪರ ಕಾರ್ಯಕ್ರಮಗಳ ಬಗ್ಗೆ ಜನ ಮರೆತಿಲ್ಲ ಎಂದರು.
ಕರ್ನಾಟಕ ಸಮೃದ್ಧಿಯ ನಾಡು. ಒಂದು ಅವಕಾಶ ಕೊಟ್ಟರೆ ನಾನು ಉತ್ತಮ ಕೆಲಸ ಮಾಡುತ್ತೇನೆ. ಯಾವ ಕುಟುಂಬವೂ ತಮ್ಮ ಬದುಕಿಗಾಗಿ ಕೈ ಒಡ್ಡುವ ಪರಿಸ್ಥಿತಿ ಬರಬಾರದು. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯ ಇದು. ಹಣ ಇವತ್ತು ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಿದರೆ ಇವರು ಕೊಡುವ 2 ಸಾವಿರ ಅಲ್ಲ, ಕನಿಷ್ಠ 10 ಸಾವಿರ ಸಂಪಾದನೆ ಮಾಡುವ ಕಾರ್ಯಕ್ರಮಗಳನ್ನು ಜಾರಿ ಮಾಡಬಹುದು. ಮುಂದೆ ಜನರು ಒಂದು ಅವಕಾಶ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ಬರುತ್ತದೆ ಎಂದು ನಂಬಿದ್ದೇನೆ. ನಾನು ಜ್ಯೋತಿಷ್ಯಗಾರನಲ್ಲ, ಆಶಾವಾದಿ ಅಷ್ಟೇ. ಈ ಸರ್ಕಾರದ ನಡವಳಿಕೆಯ ಬಗ್ಗೆ ಜನರು ಬೇಸತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಜನರಿಗೆ ಕೊಡಿಸಲಿ, ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಿ ಎಂದು ಕೆಲ ಕಾಂಗ್ರೆಸ್ ಸಚಿವರು ಹೇಳಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಟಕ್ಕರ್ ಕೊಡುವುದಲ್ಲ ನನ್ನ ಜವಾಬ್ದಾರಿ, ನನ್ನ ಕೆಲಸ ನಾನು ನಿರ್ವಹಣೆ ಮಾಡಿದ್ದೇನೆ. ಇನ್ನೊಬ್ಬರ ಮೆಚ್ಚಿಸಲು ನಾನು ಕೆಲಸ ಮಾಡಲ್ಲ, ಜನರು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡ್ತಿದ್ದೇನೆ. ಇನ್ನೊಬ್ಬರ ಸರ್ಟಿಫಿಕೇಟ್ ಗೆ ನಾನು ಕೆಲಸ ಮಾಡುವವನಲ್ಲ ನಾನು. ಸಣ್ಣದಾಗಿ ಮಾತನಾಡುವವರಿಗೆ ಇದೆ ತಕ್ಕ ಉತ್ತರ ಎಂದು ಹೇಳಿದರು.
2018ರಲ್ಲಿ ನಾನು ಸಿಎಂ ಆಗಿದ್ದಾಗ 50 ಸಾವಿರ ಉದ್ಯೋಗ ಸೃಷ್ಟಿಸಲು ಡಿಸ್ನಿಲ್ಯಾಂಡ್ ಯೋಜನೆ ರೂಪಿಸಲಾಗಿತ್ತು. ಕಾವೇರಿ ಪ್ರತಿಮೆ ಸ್ಥಾಪಿಸುವ ಉದ್ದೇಶ ಇತ್ತು. ನನ್ನ ಸರಕಾರ ಹೋಯಿತು, ಅದು ಅಲ್ಲಿಗೇ ನಿಂತಿತು. ಇವರು ಏನು ಮಾಡುತ್ತಾರೆ ಎನ್ನುವುದನ್ನು ನೋಡೋಣ. ರೈತ ವಿರೋಧಿ ನೀತಿ ಅನುಸರಿಸಿ ಯಾವುದೇ ಕಾರ್ಯಕ್ರಮ ಆಗಬಾರದು. ನಮ್ಮ ರೈತರ ಹೊಲಕ್ಕೆ ನೀರು ಬಿಡಬೇಕು. ರೈತರನ್ನು ಕರೆದು ಅವರ ಅನುಮಾನಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications