ಫ್ಯಾಕ್ಸ್ನಲ್ಲಿ ರಾಜೀನಾಮೆ ನೀಡಲು ನಾನು ಅಂಚೆ ಕಚೇರಿಯಲ್ಲಿಲ್ಲ
ಬೆಂಗಳೂರು, ಜುಲೈ 02 : 'ಫ್ಯಾಕ್ಸ್ ಮೂಲಕ ರಾಜೀನಾಮೆ ನೀಡಿದರೆ ತೆಗೆದುಕೊಳ್ಳುವುದಕ್ಕೆ ನಾನು ಅಂಚೆ ಇಲಾಖೆಯಲ್ಲಿಲ್ಲ' ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು, 'ಫ್ಯಾಕ್ಸ್ ಮೂಲಕ ರಾಜೀನಾಮೆ ನೀಡಿದ್ದೇನೆ ಎಂಬ ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ' ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ : ಯಾರು, ಏನು ಹೇಳಿದರು?
'ನಾನು ವಿಧಾನಸಭೆಯ ಸ್ಪೀಕರ್. ಮಾಧ್ಯಮಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ. ಯಾರ ದೊಡ್ಡಸ್ಥಿಕೆ ಇಲ್ಲಿ ನಡೆಯೋಲ್ಲ. ನಿಯಮಗಳು ಮಾತ್ರ ಇಲ್ಲಿ ದೊಡ್ಡದು' ಎಂದು ರಮೇಶ್ ಕುಮಾರ್ ಹೇಳಿದರು.
ಇಬ್ಬರು ಶಾಸಕರ ರಾಜೀನಾಮೆ : ರಾಹುಲ್ಗೆ ಸಿದ್ದರಾಮಯ್ಯ ಕರೆ
'ನಾನು ತಲೆ ಬಾಗೋದು ಸಂವಿಧಾನದ ಆಶಯಗಳಿಗೆ ಮಾತ್ರ. ಇದು ವಿಧಾನಸಭೆಯ ವಿಚಾರ. ನಾವು ದನಗಳ ರೀತಿ ನಡೆಯೋಕೆ ಆಗಲ್ಲ. ನಿಯಮಗಳನ್ನು ಪಾಲಿಸಬೇಕಾಗುತ್ತದೆ' ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್
'ಯಾವ ಶಾಸಕರು ನನ್ನನ್ನು ಭೇಟಿಯಾಗಲು ಸಮಯ ಕೇಳಿಲ್ಲ. ಒಂದು ವೇಳೆ ಶಾಸಕರು ನನ್ನನ್ನು ಭೇಟಿಯಾಗುವುದಾಗಿ ಹೇಳಿದರೆ ಅವರಿಗೆ ನನ್ನ ನಂಬರ್ ಕೊಡಿ' ಎಂದು ರಮೇಶ್ ಕುಮಾರ್ ತಿಳಿಸಿದರು.
'ಆನಂದ್ ಸಿಂಗ್ ಅವರು ಸೋಮವಾರ ಬೆಳಗ್ಗೆ 6.30ಕ್ಕೆ ಬಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ನೀಡುವಂತೆ ಯಾರಾದರೂ ಒತ್ತಡ ಹಾಕಿದ್ದಾರೆಯೇ?, ಕಾರಣವೇನು? ಎಂಬುದು ಸರಿಯಾಗಿ ತಿಳಿದಿಲ್ಲ. ಅವರನ್ನು ಕರೆಸಿ ಮಾತನಾಡುತ್ತೇನೆ' ಎಂದು ರಮೇಶ್ ಕುಮಾರ್ ಹೇಳಿದರು.
'ಡಾ.ಉಮೇಶ್ ಜಾಧವ್ ಅವರ ಪ್ರಕರಣದಲ್ಲಿ ಆದಂತೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ ರಾಜೀನಾಮೆ ಅಂಗೀಕಾರ ಮಾಡುತ್ತೇನೆ. ಅದಕ್ಕೆ ಎಷ್ಟು ದಿನ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ' ಎಂದರು.