ಕುಡಿಯುವ ನೀರಿನ ಅನುದಾನಕ್ಕೆ ಉತ್ಸವ, ಮೇಳವೇ ರದ್ದು
ಬೆಂಗಳೂರು, ಸೆಪ್ಟೆಂಬರ್, 11: ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ಉತ್ಸವ ಹಾಗೂ ಕೈಗಾರಿಕಾ ಮೇಳವನ್ನು ರದ್ದು ಪಡಿಸಿ,ಈ ಕಾರ್ಯಕ್ರಮಕ್ಕೆ ಸಂದಾಯವಾದ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ನೀಡಲು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.
ಹೈದರಾಬಾದ್ ಕರ್ನಾಟಕದಲ್ಲಿ ಮಳೆಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮವನ್ನು ತಗ್ಗಿಸಲು ಈಗಾಗಲೇ ಅನುದಾನವಾಗಿ ಬಂದ 3.5 ಲಕ್ಷ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂತಿರುಗಿಸಲಾಗುತ್ತದೆ ಎಂದು ಮಂಡಳಿಯು ತಿಳಿಸಿದೆ.[ಬರ ಪರಿಹಾರ : ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು]
ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು 'ಉತ್ಸವಕ್ಕೆಂದು ಮಂಜೂರಾದ ಹಣವನ್ನು ಬಯಲು ಸೀಮೆ ವ್ಯಾಪ್ತಿಯ ಬರ ಪೀಡಿತ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ 9,000ಲೀ ಸಾಮರ್ಥ್ಯದ 20 ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಳಸಲಾಗುತ್ತದೆ ಎಂದು ಪೌರಾಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
ಮಳೆ ಕೊರೆತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಪರಿಶೀಲಿಸಲು 4 ತಂಡಗಳನ್ನು ರಚಿಸಲಾಗಿದ್ದು, ಈ ತಂಡವು ಮೈಸೂರು, ಬೆಳಗಾವಿ ಕಲಬುರಗಿ ಜಿಲ್ಲೆಗಳನ್ನೊಳಗೊಂಡಂತೆ ವಿವಿಧೆಡೆ ಪ್ರವಾಸ ಕೈಗೊಂಡು ಬರದ ಕುರಿತಾಗಿ ಸಮಗ್ರ ವರದಿ ನೀಡಲಿದೆ. ಮಳೆ ಕೈಕೊಟ್ಟ ಪರಿಣಾಮ 11,500 ಕೋಟಿ ನಷ್ಟವಾಗಿದೆ.