ಅಂದು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದ್ದರೆ ಇಂದು ಮುಖಭಂಗ ಆಗುತ್ತಿತ್ತೇ?
ಸುಮಾರು ಒಂದು ವರ್ಷದ ಹಿಂದೆ, ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ಟಿಕೆಟಿಗಾಗಿ ನಡೆದ ವಿದ್ಯಮಾನದ ಸುತ್ತ ನಡೆದ ಘಟನೆಯನ್ನು ಈ ಸಂದರ್ಭದಲ್ಲಿ ಪ್ರಸ್ತಾವಿಸಲೇಬೇಕು.
ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇನ್ನಿಲ್ಲದಂತೇ ಪಕ್ಷದ ಟಿಕೆಟಿಗಾಗಿ ಪ್ರಯತ್ನಿಸಿದ್ದದ್ದು ಗೊತ್ತೇ ಇದೆ. ಇದು ಸಾಧ್ಯವಾಗದೇ ಇದ್ದಾಗ, ಸಿ ಎಸ್ ಪುಟ್ಟರಾಜು ಅವರಿಂದ ತೆರವಾದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಾದರೂ ಟಿಕೆಟ್ ಸಿಗಬಹುದು ಎಂದು ಪ್ರಜ್ವಲ್ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ದೇಶ ರಾಜಕಾರಣಕ್ಕಿಂತ, ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಒಲವನ್ನು ತೋರಿದ್ದ ಪ್ರಜ್ವಲ್ ಅಸೆಂಬ್ಲಿ ಟಿಕೆಟಿಗಾಗಿ ಒತ್ತಡವನ್ನು ಹೇರುತ್ತಲೇ ಇದ್ದರು. ಕುಟುಂಬದಿಂದ ಇಬ್ಬರು ಮಾತ್ರ (ಕುಮಾರಸ್ವಾಮಿ, ರೇವಣ್ಣ) ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಇವರ ಆಸೆಗೆ ತಣ್ಣೀರು ಎರಚುತ್ತಲೇ ಇದ್ದರು.
ಮೊದಲು ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಜ್ವಲ್ ರೇವಣ್ಣ ಬಯಸಿದ್ದರು. ಆದರೆ, ಸಿದ್ದರಾಮಯ್ಯನವರ ಮೇಲಿನ ಸಿಟ್ಟಿನಿಂದ ಕಾಂಗ್ರೆಸ್ ತೊರೆದಿದ್ದ ಎಚ್ ವಿಶ್ವನಾಥ್ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಪಕ್ಷ ಸೇರಲು ಈ ಕ್ಷೇತ್ರದ ಟಿಕೆಟ್ ನೀಡಬೇಕೆನ್ನುವ ಷರತ್ತನ್ನೂ ಅವರು ಹಾಕಿರಬಹುದು.

ದೇವೇಗೌಡ್ರು ಹುಣಸೂರು ಕ್ಷೇತ್ರದ ಟಿಕೆಟ್ ಅನ್ನು ಎಚ್ ವಿಶ್ವನಾಥ್ ಅವರಿಗೆ ನೀಡಿದರು
ಮೊಮ್ಮಗ ಪ್ರಜ್ವಲ್ ಬದಲಿಗೆ ದೇವೇಗೌಡ್ರು ಹುಣಸೂರು ಕ್ಷೇತ್ರದ ಟಿಕೆಟ್ ಅನ್ನು ಎಚ್ ವಿಶ್ವನಾಥ್ ಅವರಿಗೆ ನೀಡಿದರು. ಇದರಿಂದ ನಿರಾಶರಾಗದ ಪ್ರಜ್ವಲ್ ರೇವಣ್ಣ ಮತ್ತೆ ಟಿಕೆಟಿಗಾಗಿ ಪ್ರಯತ್ನ ನಡೆಸಲು ಆರಂಭಿಸಿದರು. ಈ ಬಾರಿ, ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕಾಗಿ.

ರಾಜರಾಜೇಶ್ವರಿ ನಗರ ಕ್ಷೇತ್ರ
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿರುವುದರಿಂದ, ಸಮರ್ಥ ಅಭ್ಯರ್ಥಿಯನ್ನು ಹಾಕಿದ್ದರೆ, ಜೆಡಿಎಸ್ ಇಲ್ಲಿ ಗೆಲುವು ಸಾಧಿಸಬಹುದಿತ್ತು. ಆದರೆ, ಇಲ್ಲೂ ಒತ್ತಡಕ್ಕೆ ಮಣಿದ ದೇವೇಗೌಡ್ರು, ಚಿತ್ರನಟಿ ಅಮೂಲ್ಯ ಅವರ ಮಾವ ಜಿ ಎಚ್ ರಾಮಚಂದ್ರ ಅವರಿಗೆ ಟಿಕೆಟ್ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ನಾಯ್ಡು
ಬಿಜೆಪಿ (ಮುನಿರಾಜು ಗೌಡ) ಮತ್ತು ಜೆಡಿಎಸ್ ಮತಗಳು ಇಬ್ಬಾಗವಾಗಿದ್ದರಿಂದ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನಿರತ್ನ ನಾಯ್ಡು ನಿರಾಯಾಸವಾಗಿ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದರು. ಮುನಿರತ್ನಗೆ 108,064, ಬಿಜೆಪಿಗೆ 82,572 ಮತ್ತು ಜೆಡಿಎಸ್ ಅಭ್ಯರ್ಥಿಗೆ 60,360 ಮತಗಳು ಬಂದಿದ್ದವು.

ಪಕ್ಷದ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆ ಪ್ರಜ್ವಲ್
ಪಕ್ಷದ ಸೂಟ್ ಕೇಸ್ ಸಂಸ್ಕೃತಿಯ ಬಗ್ಗೆ ಮತ್ತು ಚಿಕ್ಕಪ್ಪ ಕುಮಾರಸ್ವಾಮಿ ಬಗ್ಗೆ ಚುನಾವಣೆಗೂ ಮುನ್ನ ಬಹಿರಂಗವಾಗಿ ಪ್ರಜ್ವಲ್ ಬೇಸರವನ್ನು ಹೊರಹಾಕಿದ್ದರು. ರಾಜರಾಜೇಶ್ವರಿ ನಗರದ ಟಿಕೆಟ್ ಸಿಗದೇ ಇದ್ದಾಗ, ಪ್ರಜ್ವಲ್ ಭ್ರಮನಿರಸನರಾಗಿದ್ದರು. ಪ್ರಜ್ವಲ್ ನಿಂತಿದ್ದರೆ, ನಿರಾಯಾಸವಾಗಿ ಈ ಕ್ಷೇತ್ರವನ್ನು ಗೆಲ್ಲಬಹುದಾಗಿತ್ತು ಎನ್ನುವ ಮಾತು ಚಾಲ್ತಿಯಲ್ಲಿತ್ತು.

ಅಂದು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದ್ದರೆ ಇಂದು ಈ ಮುಖಭಂಗ ಆಗುತ್ತಿತ್ತೇ
ಈಗ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಎಚ್ ವಿಶ್ವನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕುಮಾರಸ್ವಾಮಿ ವಿರುದ್ದ ಬೇಸರವನ್ನು ಹೊರಹಾಕಿದ್ದಾರೆ. ಇನ್ನು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಕೂಡಾ ರಾಜೀನಾಮೆ ನೀಡಿದ್ದಾರೆ. ಅವರು ಜೆಡಿಎಸ್ ಶಾಸಕರು ಅಲ್ಲದಿದ್ದರೂ, ಎಚ್ಡಿಕೆ ಸರಕಾರಕ್ಕೆ ಅವರ ರಾಜೀನಾಮೆಯಿಂದ ತೊಂದರೆಯಾಗಿದೆ. ಹಾಗಾಗಿ, ಅಂದು ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದ್ದರೆ ಇಂದು ಈ ಮುಖಭಂಗ ಆಗುತ್ತಿತ್ತೇ ಎಂದು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.












Click it and Unblock the Notifications