ಹ್ಯೂಬ್ಲೋಟ್ ವಾಚ್ ವಿವಾದ, ಕುಮಾರಸ್ವಾಮಿ ಕೇಳಿದ 5 ಪ್ರಶ್ನೆಗಳು
ಬೆಂಗಳೂರು, ಫೆಬ್ರವರಿ 25 : ಹ್ಯೂಬ್ಲೋಟ್ ಕಂಪನಿಯ ವಜ್ರ ಖಚಿತ 50 ರಿಂದ 70 ಲಕ್ಷ ಬೆಲೆಬಾಳುವ ವಾಚ್ ಬಗ್ಗೆ ಸಿದ್ದರಾಮಯ್ಯ ಅವರು ನೀಡಿರುವ ಸ್ಪಷ್ಟನೆಗಳ ಬಗ್ಗೆ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಸ್ಪಷ್ಟನೆ ನೀಡಲು ಇಷ್ಟು ದಿನ ತೆಗೆದುಕೊಂಡಿದ್ದೇಕೆ?' ಎಂದು ಅವರು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ವಿವಾದ ದೊಡ್ಡದಾಗುತ್ತಿದ್ದಂತೆ ಕಾನೂನು ಸಲಹೆ ಪಡೆದು, ಸ್ಪಷ್ಟನೆ ನೀಡಿದ್ದಾರೆ' ಎಂದು ದೂರಿದರು. [ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್]
'ಸಿದ್ದರಾಮಯ್ಯ ಅವರಿಗೆ ವಾಚ್ ಉಡುಗೊರೆ ಕೊಟ್ಟ ಡಾ.ಗಿರೀಶ್ ಚಂದ್ರ ವರ್ಮಾ ಅವರು ಯಾರೆಂದು ನನಗೆ ತಿಳಿದಿಲ್ಲ?. ಉಡುಗೊರೆ ಕೊಟ್ಟವರು ಸಿದ್ದರಾಮಯ್ಯ ಅವರ ಆಪ್ತ ಸ್ನೇಹಿತರಾಗಿದ್ದರೆ ಮೊದಲೇ ಏಕೆ ಹೆಸರು ಹೇಳಲಿಲ್ಲ?, ಆಪ್ತ ಸ್ನೇಹಿತರ ಹೆಸರೇ ನೆನಪಿನಲ್ಲಿ ಇರಲಿಲ್ಲವೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. [ಕೈಗಡಿಯಾರದ ರಾದ್ಧಾಂತ, ಕಡೆಗೂ ಬಾಯ್ಬಿಟ್ಟ ಸಿದ್ದರಾಮಯ್ಯ]
ಗುರುವಾರ ಮಧ್ಯಾಹ್ನ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, '2015ರ ಜುಲೈನಿಂದ ಈ ವಾಚು ನನ್ನ ಬಳಿ ಇದೆ. ದುಬೈನಲ್ಲಿ ನೆಲೆಸಿರುವ ನನ್ನ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಅವರು ಈ ವಾಚ್ಅನ್ನು ನನಗೆ ಉಡುಗೊರೆಯಾಗಿ ನೀಡಿದರು' ಎಂದು ಹೇಳಿದ್ದರು. ಕುಮಾರಸ್ವಾಮಿ ಅವರ ಪ್ರಶ್ನೆಗಳೇನು ಚಿತ್ರಗಳಲ್ಲಿ ನೋಡಿ......
'ಇಷ್ಟು ದಿನ ಏನು ಮಾಡುತ್ತಿದ್ದಿರಿ'
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನೆ ಬಳಿಕ ಮಾತನಾಡಿರುವ ಕುಮಾರಸ್ವಾಮಿ ಅವರು, 'ಸ್ಪಷ್ಟನೆ ನೀಡಲು ಸಿದ್ದರಾಮಯ್ಯ ಅವರು ಇಷ್ಟು ದಿನ ತೆಗೆದುಕೊಂಡಿದ್ದೇಕೆ?' ಎಂದು ಪ್ರಶ್ನೆ ಮಾಡಿದ್ದಾರೆ.
ಮೊದಲೇ ಏಕೆ ಹೆಸರು ಹೇಳಲಿಲ್ಲ?
'ಸಿದ್ದರಾಮಯ್ಯ ಅವರಿಗೆ ವಾಚ್ ಉಡುಗೊರೆ ಕೊಟ್ಟವರು ಡಾ.ಗಿರೀಶ್ ಚಂದ್ರ ವರ್ಮಾ ಎಂದಾದರೆ ಉಡುಗೊರೆ ಕೊಟ್ಟವರ ಹೆಸರನ್ನು ಸಿದ್ದರಾಮಯ್ಯ ಅವರು ಮೊದಲೇ ಏಕೆ ಹೆಸರು ಹೇಳಲಿಲ್ಲ?, ಆಪ್ತ ಸ್ನೇಹಿತರ ಹೆಸರೇ ನೆನಪಿನಲ್ಲಿ ಇರಲಿಲ್ಲವೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾನೂನು ಸಲಹೆ ಪಡೆದಿದ್ದಾರೆಯೇ?
'ಮುಖ್ಯಮಂತ್ರಿ ಸಿದ್ದರಾಮಯ್ಯ ವಾಚ್ ವಿವಾದ ದೊಡ್ಡದಾಗುತ್ತಿದ್ದಂತೆ ಕಾನೂನು ಸಲಹೆ ಪಡೆದು, ಸ್ಪಷ್ಟನೆ ನೀಡಿದ್ದಾರೆಯೇ?, ಇಲ್ಲವಾದಲ್ಲಿ ಸ್ಪಷ್ಟನೆ ನೀಡಲು ಇಷ್ಟು ದಿನ ತೆಗೆದುಕೊಂಡದ್ದೇಕೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ಉಡುಗೊರೆ ಸಿಕ್ಕಿದ್ದರೆ ಮೊದಲೇ ಹೇಳಬೇಕಿತ್ತು'
'ಆತ್ಮೀಯ ಸ್ನೇಹಿತರೇ ವಾಚ್ ಉಡುಗೊರೆ ಕೊಟ್ಟಿದ್ದರೆ ಮೊದಲೇ ಹೇಳಬಹುದಿತ್ತು. ಉಡುಗೊರೆ ಬಂದಿದೆ ಎಂದು ಹೇಳಲು ಇಷ್ಟು ದಿನ ತೆಗೆದುಕೊಂಡಿದ್ದೇಕೆ?. ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಶುಕ್ರವಾರ ಪತ್ರಿಕಾಗೋಷ್ಠಿ
'ವಾಚ್ ವಿವಾದ ಮತ್ತು ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತೇನೆ. ನನ್ನ ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ.