ಅವಧಿಗೂ ಮುನ್ನ ನಾನೇಕೆ ರಾಜೀನಾಮೆ ಕೊಡ್ಲಿ?
ಬೆಂಗಳೂರು, ಮೇ 21 : "ರಾಜ್ಯಪಾಲನಾಗಿ ನನ್ನ ಅವಧಿ ಜೂ.29ರವರೆಗೆ ಇದೆ. ಅವಧಿಗೂ ಮುನ್ನ ನಾನು ರಾಜೀನಾಮೆ ನೀಡುವುದಿಲ್ಲ" ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಕರ್ನಾಟಕದ ರಾಜ್ಯಪಾಲರು ಅವಧಿಗೆ ಮುನ್ನ ರಾಜೀನಾಮೆ ನೀಡಲಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿಗಳಿಗೆ ತೆರೆ ಬಿದ್ದಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ರಾಜ್ಯಪಾಲರು, ಕರ್ನಾಟಕದ ರಾಜ್ಯಪಾಲನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ತೃಪ್ತಿ ಇದೆ. ನನ್ನ ಅವಧಿ ಜೂ.29ರವರೆಗೆ ಇದೆ. ಅಲ್ಲಿಯವರೆಗೆ ರಾಜೀನಾಮೆ ನೀಡುವುದಿಲ್ಲ ಹೇಳಿದರು. ನಾನು ಯಾವಾಗ ರಾಜೀನಾಮೆ ನೀಡಬೇಕು ಎಂಬ ಬಗ್ಗೆ ರಾಷ್ಟ್ರಪತಿ ಭವನದಿಂದ ನಿರ್ದೇಶನ ಬರುತ್ತದೆ, ಆಗ ರಾಜೀನಾಮೆ ನೀಡುತ್ತೇನೆ ಎಂದರು.

ರಾಜ್ಯಪಾಲ ಹುದ್ದೆ ಸಾಂವಿಧಾನಿಕವಾದುದು. ನನ್ನ ರಾಜೀನಾಮೆ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜೀನಾಮೆ ವಿಚಾರದ ಬಗ್ಗೆ ರಾಷ್ಟ್ರಪತಿಗಳಿಗೆ ಮಾತ್ರವೇ ವರದಿ ನೀಡುತ್ತೇನೆ. ರಾಜ್ಯಕ್ಕೆ ಹೊಸ ರಾಜ್ಯಪಾಲರು ಬರುವುದಕ್ಕೂ ಮೊದಲೇ ರಾಜೀನಾಮೆ ನೀಡುವುದಿಲ್ಲ ಎಂದು ಎಚ್.ಆರ್.ಭಾರದ್ವಾಜ್ ಸ್ಪಷ್ಟಪಡಿಸಿದರು. [ಬಿಜೆಪಿ ಅಧಿಕಾರಕ್ಕೆ ಬಂದ್ರೆ ರಾಜ್ಯಪಾಲರು ಮನೆಗೆ]
ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಹಲವು ರಾಜ್ಯಪಾಲರು ಅವಧಿಗೂ ಮೊದಲೇ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕರ್ನಾಟಕದ ರಾಜ್ಯಪಾಲರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳಿತ್ತು. ಆದರೆ, ಈ ಉಹಾಪೋಹಗಳಿಗೆ ಭಾರದ್ವಾಜ್ ಮಂಗಳವಾರ ತೆರೆ ಎಳೆದಿದ್ದಾರೆ.
ಪ್ರತಿಕ್ರಿಯೆ ನೀಡಲು ನಕಾರ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಜ್ಯಪಾಲರು "ನಾನು ದೆಹಲಿಯ ಯಾವುದೇ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿಲ್ಲ. ಆದ್ದರಿಂದ ಸೋಲಿನ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಸಹ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯಪಾಲರು, ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿ, ಚುನಾವಣೆ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿಯೊಂದಿಗೆ ನಾನು ಮಾತುಕತೆ ನಡೆಸಿಲ್ಲ ಎಂದು ಹೇಳಿದರು.











Click it and Unblock the Notifications