ಕರ್ನಾಟಕದಲ್ಲಿ ಕೋವಿಡ್ 4ನೇ ಅಲೆ: ಎಲ್ಲಾ ನಿಮ್ಮ ಕೈಲೇ ಇದೆ!
ಬೆಂಗಳೂರು, ಜೂ. 8: ಕೋವಿಡ್ ನಾಲ್ಕನೇ ಅಲೆಯ ಭೀತಿ ನಿಧಾನಕ್ಕೆ ಆರಂಭವಾಗಿದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಮತ್ತೊಮ್ಮೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಅಂತ ನಿಯಂತ್ರಣಕ್ಕೆ ಸಿದ್ಧವಿದೆ. ಮೊದಲ ಹಂತದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದರೆ, ಮುಂದಿನ ಬೆಳವಣಿಗೆಗಳು ಜನರ ಕೈಲೇ ಇವೆ. ಹೇಗೆ ಎಂಬುದನ್ನು ಈ ವರದಿ ವಿವರಿಸಲಿದೆ, ಕೊಂಚ ತಾಳ್ಮೆಯಿಂದ ಓದಿ...
Recommended Video
ಮುಂಬೈ, ದೆಹಲಿ ಸಹಿತ ಹಲವು ಮಹಾನಗರಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣ ಪೀಕ್ ಹಂತಕ್ಕೆ ತಲುಪುತ್ತಿದೆ. ಪ್ರತಿನಿತ್ಯವೂ ಸಾವಿರಾರು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಚಿತ್ರನಟರು, ರಾಜಕಾರಣಿಗಳಿಗೆ ಈಗಾಗಲೇ ಕೋವಿಡ್ ಸೋಂಕಿತರಾಗುತ್ತಿದ್ದು, ಜನರ ಗಮನವನ್ನು ಸಹಜವಾಗಿಯೇ ಕೋವಿಡ್ ಭೀತಿಯತ್ತ ಸೆಳೆಯುತ್ತಿದೆ. ಕರ್ನಾಟಕದಲ್ಲಿಯೂ ಸಹ ಸ್ವತಃ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಕೋವಿಡ್ ಸೋಂಕಿತರಾಗಿ, ಈಗ ಗುಣಮುಖಗೊಂಡಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಸದ್ಯ ನಾಲ್ಕನೇ ಅಲೆಯ ಭೀತಿ ಇಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ವಲ್ಪಮಟ್ಟಿನ ಭರವಸೆ ಮೂಡಿಸಿದ್ದಾರೆ. ಹೆಚ್ಚು ಕಡಿಮೆ ಮೊದಲ ಮೂರು ಅಲೆಗಳ ಆರಂಭಕ್ಕೆ ಮುನ್ನ ಸರಕಾರ ನಡೆಸುವವರಿಂದ ಇಂತಹ ಆಶ್ವಾಸನೆಗಳು ಹೊರಬಿದ್ದ ಹಿನ್ನೆಲೆಯಲ್ಲಿ, ಯಾವುದನ್ನೂ ಸ್ಪಷ್ಟವಾಗಿ ಹೀಗೆ ಎಂದು ಹೇಳುವುದು ಕಷ್ಟ ಇದೆ. ಇದರ ನಡುವೆಯೇ ನಾಲ್ಕನೇ ಅಲೆಗೆ ತೆರೆಮರೆಯ ಸಿದ್ಧತೆಗಳು ಆರಂಭವಾದಂತೆ ಕಾಣಿಸುತ್ತಿವೆ.

ಹಿಂದೆ ಆರಂಭವಾಗಿದ್ದು ಹೇಗೆ?
ಈ ಹಿಂದಿನ ಮೂರು ಅಲೆಗಳನ್ನು ಗಮನಿಸಿದಾಗ ಸರ್ಕಾರ ಮೊದಲು ಮಾಸ್ಕ ಕಡ್ಡಾಯ ಮಾಡುತ್ತದೆ. ಬಳಿಕ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಪ್ರಯೋಗ ಮಾಡುತ್ತದೆ. ಆ ಬಳಿಕ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ಮಾಡುತ್ತದೆ. ಇನ್ನೂ ಪ್ರಕರಣಗಳ ಸಂಖ್ಯೆ ಏರುತ್ತಾ ಹೋದಂತೆ ವೀಕೆಂಡ್ ಕರ್ಫ್ಯೂ ಬರುತ್ತದೆ. ಆಗಲೂ ಹತೋಟಿ ಕಷ್ಟವಾಗಿ ಆಸ್ಪತ್ರೆಗಳೆಲ್ಲಾ ಭರ್ತಿಯಾಗುವಂತಹ ವಾತಾವರಣ ನಿರ್ಮಾಣವಾದರೆ ಸಂಪೂರ್ಣ ಲಾಕ್ಡೌನ್ನತ್ತ ಚಿಂತನೆ ಮಾಡುತ್ತದೆ. ಈಗ ನಾಲ್ಕನೇ ಅಲೆಯ ಆರಂಭದ ಸ್ಥಿತಿಯಂತೆ ಕಾಣಿಸುತ್ತಿರುವ ಈ ಹೊತ್ತಿನಲ್ಲಿ ಬರೀ ರಾಜಧಾನಿಯಲ್ಲಿ ಮಾತ್ರ ಮಾಸ್ಕ ಕಡ್ಡಾಯ ಎಂಬ ಘೋಷಣೆ ಸಹಜವಾಗಿಯೇ ಗಮನ ಸೆಳೆಯುತ್ತಿದೆ.
ಕೊರೊನಾ ಈ ಭೂಮಿಯಲ್ಲಿ ಇದ್ದೇ ಇರುತ್ತದೆ. ಜನ ಸಾಮಾನ್ಯರು ಅದಕ್ಕೆ ಹೊಂದಿಕೊಂಡು ಹೋಗಬೇಕು ಎಂದು ವೈದ್ಯ ವಿಜ್ಞಾನ ಹೇಳಿದ ನಂತರ ಜನರು ನಿಧಾನಕ್ಕೆ ಭಯದಿಂದ ಹೊರಬಂದಿದ್ದಾರೆ. ಸೂಕ್ತ ಮುಂಜಾಗ್ರತೆಗಳೊಂದಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವರ್ಕ್ಫ್ರಮ್ ಹೋಮ್ನಿಂದ ಹೊರಬಂದು ಕಚೇರಿಗಳು ಪ್ರಾರಂಭವಾಗಿವೆ. ಕೈಗಾರಿಕೆಗಳಲ್ಲಿ ಯಂತ್ರಗಳ ಸದ್ದು ಕೇಳಿಸುತ್ತಿದೆ. ಪುಟ್ಟ ಮಕ್ಕಳು ಕಲಿಯುವ ಶಾಲೆಗಳು ಗಿಜಿಗುಡುತ್ತಿವೆ. ಜನ ಜೀವನ ಸಹಜವಾಗುತ್ತಿರುವ ಹೊತ್ತಿನಲ್ಲಿ ಈಗ ಮತ್ತೆ ಮಾಸ್ಕ ಕಡ್ಡಾಯ, ವರ್ಕ್ಫ್ರಮ್ ಹೋಂನ ಅಗತ್ಯತೆಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇವು ಜನರನ್ನು ಮತ್ತೆ ಆತಂಕಕ್ಕೆ ದೂಡುವುದಕ್ಕೆ ಮುನ್ಸೂಚನೆಗಳ ರೀತಿಯಲ್ಲಿ ಕಾಣಿಸುತ್ತಿವೆ.

ಸರ್ಕಾರದ ಸೂಚನೆ ಗಮನಿಸಿ:
"ರಾಜ್ಯ ಸರಕಾರ ಸದ್ಯ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡಿರುವುದನ್ನು ಈಗಲೇ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮುಂದುವರಿದು, ಈ ವಿಚಾರದಲ್ಲಿ ಜನರು ನಿರ್ಲಕ್ಷ್ಯ ತೋರಿಸಿದರೆ, ಮುಂದೆ ಕೊರೊನಾ ಸಂಖ್ಯೆಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಸರಕಾರಕ್ಕೆ ಮತ್ತೆ ಲಾಕ್ಡೌನ್ ಅಸ್ತ್ರ ಪ್ರಯೋಗಿಸುವ ಅನಿವಾರ್ಯತೆ ಬೀಳಬಹುದು,'' ಎನ್ನುತ್ತಾರೆ ಕೊರೊನಾ ತಜ್ಞರು.
ರಸ್ತೆಗಳು ತುಂಬಿರುವ ಈ ಸಮಯದಲ್ಲಿ ಹೊರಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಾರ್ವಜನಿಕ ಸಾರಿಗೆಗಳನ್ನು ಬಳಸುವಾಗ ಸೂಕ್ತ ಮುಂಜಾಗೃತ ಕ್ರಮಗಳು ತೆಗೆದುಕೊಳ್ಳುವುದು ಅತ್ಯಗತ್ಯ ಎಂಬುದನ್ನು ಅವರು ಪ್ರತಿಪಾದಿಸುತ್ತಾರೆ. "ಕೊರೊನಾ ವಿಚಾರದಲ್ಲಿ ಇಡೀ ಜಗತ್ತಿನಲ್ಲಿ ಔಷಧಿಗಳ ಬಳಕೆಗಿಂತ ಹೆಚ್ಚು ಒತ್ತು ನೀಡಿದ್ದು ಶುಚಿತ್ವಕ್ಕೆ. ಕೈ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ರೋಗ ಹರಡಂತೆ ತಡೆಯಲು ಸಹಕಾರಿಯಾಗಿತ್ತು. ಅದೇ ಮಾದರಿ ಈಗಲೂ ಜಾರಿಯಲ್ಲಿದ್ದರೆ ಮಾತ್ರವೇ ಕೊರೊನಾ ನಾಲ್ಕನೇ ಅಲೆಯಲ್ಲಿ ತಡೆಯಲು ಸಾಧ್ಯ,'' ಎನ್ನುತ್ತಾರೆ ನಗರದ ವೈದ್ಯ ಡಾ. ಶ್ಯಾಮಸುಂದರ್ ಅವರು.

ಕೊರೊನಾ ಸಂಖ್ಯೆ- ಬೆಳೆಯುತ್ತಿರುವ ವೇಗ:
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಜೂ.7ರ ಮಾಹಿತಿಪ್ರಕಾರ ಕರ್ನಾಟಕದಲ್ಲಿ 24 ಗಂಟೆಗಲ್ಲಿ 348 ಹೊಸ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಒಟ್ಟಾರೆ 2478 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ. ಒಂದು ದಿನಕ್ಕೆ 16,474 ಕೋವಿಡ್ ತಪಾಸಣೆಗಳು ನಡೆದಿದ್ದು, ಇದರಲ್ಲಿ ಪಾಸಿಟಿವಿಟಿ ಪ್ರಮಾಣ 2.11 ಇದೆ ಎಂದು ವರದಿ ನೀಡಲಾಗಿದೆ.

ಶಾಲೆಗಳಲ್ಲೂ ಇರಲಿ ಮುಂಜಾಗ್ರತೆ
ಈ ಮಧ್ಯೆ ಒಂದನೇ ತರಗತಿಯಿಂದ ಶಾಲೆಗಳು ಪ್ರಾರಂಭವಾಗಿ ಮೂರು ವಾರ ಕಳೆಯುತ್ತಿದೆ. ನರ್ಸರಿ ಶಾಲೆಗಳು ಈ ವಾರದಿಂದ ಆರಂಭವಾಗಿವೆ. ಪಿಯು ತರಗತಿಗಳ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾದ ಅಗತ್ಯ ಇದೆ. ಶಾಲೆಗಳಲ್ಲಿ ಸ್ಯಾನಿಟೈಸರ್, ಮಕ್ಕಳನ್ನು ಕೂಡಿಸುವುದರಲ್ಲಿ ಅಂತರ ಕಾಪಾಡುವುದು, ಮಾಸ್ಕ್ ಹಾಕುವಂತೆ ಮಕ್ಕಳಲ್ಲಿ ಅರಿವು ಮೂಡಿಸುವುದು, ಶೀತ-ಕೆಮ್ಮು-ಜ್ವರ ಇರುವಂತಹ ಮಕ್ಕಳನ್ನು ಶಾಲೆಯಿಂದ ರಜೆ ನೀಡಿ ಆನೈಲೈನ್ ಮೂಲಕ ಬೋಧಿಸುವಂತಹ ಕ್ರಮಗಳನ್ನು ಈಗಿನಿಂದಲೇ ರೂಢಿಸಿಕೊಳ್ಳಬೇಕಾದ ಅಗತ್ಯತೆ ಇದೆ.












Click it and Unblock the Notifications