ಶಾಸಕ ಅಲ್ಲದಿದ್ದರೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಸಿಕ್ಕಿದ್ದು ಹೇಗೆ?
ಬೆಂಗಳೂರು, ಆಗಸ್ಟ್ 20: ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದ್ದು, 17 ಮಂದಿ ಸಚಿವರಾಗಿ ಇಂದು ಬಡ್ತಿ ಪಡೆದಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ, ಇಷ್ಟೊಂದು ಆಕಾಂಕ್ಷಿಗಳಿದ್ದಾಗ್ಯೂ ಶಾಸಕರಲ್ಲದವರಿಗೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಅವಕಾಶ ನೀಡಿರುವುದು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ್ ಸವದಿ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ಷ್ಮಣ್ ಸವಧಿ, ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಲಕ್ಷ್ಮಣ್ ಸವದಿ ವಿರುದ್ಧ ಜಯಗಳಿಸಿದ್ದ ಮಹೇಶ್ ಕುಮಟಳ್ಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ, ಉಪಚುನಾವಣೆಯಲ್ಲಿ ಲಕ್ಷಣ ಸವದಿಯನ್ನು ಅಭ್ಯರ್ಥಿ ಮಾಡುವ ಉಮೇದು ಬಿಜೆಪಿಗೆ ಇದೆ ಹಾಗಾಗಿ ಲಕ್ಷ್ಮಣ ಸವಧಿ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.

ಮತದಾರರನ್ನು ಒಲಿಸಿಕೊಳ್ಳಲು ಈ ತಂತ್ರ
ಅಭ್ಯರ್ಥಿ ಗೆಲ್ಲುವ ಮೊದಲೇ ಅವರಿಗೆ ಸಚಿವ ಸ್ಥಾನ ನೀಡಿದ್ದು ಮತದಾರರ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಲಕ್ಷ್ಮಣ ಸವದಿ ಗೆಲುವು ಆಗ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ರಾಜೀನಾಮೆ ನೀಡಿದ ನಂತರ ಮಹೇಶ್ ಕುಮಟಳ್ಳಿ ಅವರ ಪ್ರಭಾವ ಕ್ಷೇತ್ರದಲ್ಲಿ ತಗ್ಗಿರುವ ಕಾರಣ ಅವರಿಗೆ ಉಪಚುನಾವಣೆ ಟಿಕೆಟ್ ನಿರಾಕರಿಸಲಾಗಿದೆ.

ಸವಧಿಗೆ ಮಂತ್ರಿಗಿರಿ ಸಿಗಲು ರಮೇಶ್ ಜಾರಕಿಹೊಳಿ ಕಾರಣ?
ಲಕ್ಷ್ಮಣ ಸವದಿಗೆ ಟಿಕೆಟ್ ಸಿಗುವ ಹಿಂದೆ ರಮೇಶ್ ಜಾರಕಿಹೊಳಿ ಪಾತ್ರವಿದೆ ಎನ್ನಲಾಗುತ್ತಿದೆ. ಅನರ್ಹತೆಗೆ ಒಳಗಾಗಿದ್ದರಿಂದ ಸಚಿವ ಸ್ಥಾನ ಪಡೆಯಲು ರಮೇಶ್ ಜಾರಕಿಹೊಳಿಗೆ ಆಗಿಲ್ಲ. ಹಾಗಾಗಿ ತಮ್ಮ ಪ್ರತಿನಿಧಿಯಾಗಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ದೊರೆಯುವಂತೆ ರಮೇಶ್ ಜಾರಕಿಹೊಳಿ ಮಾಡಿದ್ದಾರೆ. ಉಪಚುನಾವಣೆ ನಂತರ ಲಕ್ಷ್ಮಣ್ ಸವದಿಯನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯೂ ಇದೆ ಎಂಬ ಸುದ್ದಿ ವಿಧಾನಸೌಧದ ಪಡಸಾಲೆಯನ್ನು ಹರಿದಾಡುತ್ತಿದೆ.

ಈ ಹಿಂದೆ ಮಂತ್ರಿ ಆಗಿದ್ದ ಲಕ್ಷ್ಮಣ ಸವದಿ
ಲಕ್ಷ್ಮಣ್ ಸವದಿ ಅವರು ಯಡಿಯೂರಪ್ಪ ಅವರಿಗೆ ಆಪ್ತರೂ ಆಗಿದ್ದು, ಈ ಹಿಂದೆ ಮಂತ್ರಿಯೂ ಆಗಿದ್ದರು. ಆದರೆ ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ ವಿವಾದ ಎದ್ದಾಗ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಚಿವರಾಗಿರುವ ಇನ್ನು ಆರು ತಿಂಗಳ ಒಳಗಾಗಿ ಉಪಚುನಾವಣೆಯಲ್ಲಿ ಗೆಲ್ಲಬೇಕು ಅಥವಾ ವಿಧಾನಪರಿಷತ್ ಸದಸ್ಯರಾಗಿಯಾದರೂ ಆಗಬೇಕಾಗಿದೆ.

ಸದನಕ್ಕೆ ಮತ್ತೆ ಬ್ಲೂ ಬಾಯ್ಸ್!
ವಿಶೇಷವೆಂದರೆ 2012 ರಲ್ಲಿ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿ ಕೊನೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಲಕ್ಷ್ಮಣ್ ಸವದಿ ಮತ್ತು ಸಿಸಿ ಪಾಟೀಲ್ ಇಬ್ಬರೂ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಸದನಕ್ಕೆ ಮತ್ತೆ ಬ್ಲೂ ಬಾಯ್ಸ್ ಸೇರಿಕೊಂಡಿದ್ದಾರೆ.












Click it and Unblock the Notifications