ಫಾರಂ 7 ಇಲ್ಲದೇ ಮತದಾರರ ಪಟ್ಟಿಯಿಂದ 27 ಲಕ್ಷ ಹೆಸರು ತೆಗೆದಿದ್ದು ಹೇಗೆ?: ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 22: ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯುವುದಕ್ಕೆ ಅಥವಾ ಸೇರಿಸುವುದಕ್ಕೆ ಫಾರಂ 7 ಅತ್ಯಗತ್ಯ. ಈ ಅರ್ಜಿಗಳು ಇಲ್ಲದೆ 27 ಲಕ್ಷ ಹೆಸರು ತೆಗೆದಿದ್ದು ಹೇಗೆ? ಇವುಗಳಿಗೆ ಸಹಿ ಹಾಕಿದವರು ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಬೇರೆ ಸಮಯದಲ್ಲಿ ಚಿಲುಮೆ ಸಂಸ್ಥೆಗೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ ಅವುಗಳಿಗೂ ಈ ಚುನಾವಣೆ ಪ್ರಕ್ರಿಯೆಗೂ ಬಹಳ ವ್ಯತ್ಯಾಸವಿದೆ.
ಚುನಾವಣಾ ಆಯೋಗ ಅಧಿಕಾರಿಗಳ ಭೇಟಿಗೆ ಇಂದು ಸಮಯಾವಕಾಶ ಕೇಳಲಾಗಿತ್ತು. ಹಿರಿಯ ಅಧಿಕಾರಿ ಭೇಟಿ ಮಾಡಬೇಕಿದ್ದು, ನಾಳೆ ಸಮಯ ನೀಡಿದ್ದಾರೆ. ನಾಳೆ ಭೇಟಿ ಮಾಡಿ ನಮ್ಮ ದೂರು ನೀಡುತ್ತೇವೆ. ಈ ಪ್ರಕರಣದಲ್ಲಿ ಸಾಕಷ್ಟು ಕಾನೂನು ಅಂಶಗಳಿವೆ. ಮತದಾರರ ಮಾಹಿತಿ ತೆಗೆದುಕೊಳ್ಳುವ ಅವಕಾಶ ಯಾರಿಗೂ ಇಲ್ಲ. ರಾಜ್ಯದಲ್ಲಿ 8250 ಬೂತ್ಗಳಿವೆ. ಪ್ರತಿ ಬೂತ್ ಗೆ ಒಬ್ಬರನ್ನು ನೇಮಕ ಮಾಡಬೇಕು. ಕೇವಲ ಚಿಲುಮೆ ಸಂಸ್ಥೆ ಮಾತ್ರವಲ್ಲ, 7 ಸಾವಿರಕ್ಕೂ ಹೆಚ್ಚು ಜನರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಎಲ್ಲಾ 28 ಕ್ಷೇತ್ರ ಚುನಾವಣಾಧಿಕಾರಿ ಮೇಲೂ ಪ್ರಕರಣ ದಾಖಲಿಸಬೇಕು.

ಒತ್ತಡದ ಮೇಲೆ ಈ ಕೆಲಸ ಮಾಡಿದ್ದೇವೆ ಎಂದು ಕೆಲವು ಬಂಧಿತ ಆರೋಪಿಗಳು ಹೇಳಿಕೆ ನೀಡಿರುವ ವಿಚಾರವಾಗಿ ಮಾತನಾಡಿ, ಈ ವಿಚಾರ ನನಗೆ ಗೊತ್ತಿಲ್ಲ. ಆತ ಕಳ್ಳತನ ಮಾಡಿದ್ದರೆ, ಅದನ್ನು ಮಾಡಿಸಿದವರು ಯಾರು? ಹೀಗೆ ಮಾಡಬೇಕು ಎಂದು ಹೇಳಿಕೊಟ್ಟವರು ಯಾರು? ಅಧಿಕಾರಿಯೊಬ್ಬರು ಮೇಲಾಧಿಕಾರಿಗಳ ಆದೇಶದ ಮೇರೆಗೆ ನಾವು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದು, ಈ ಮೇಲಾಧಿಕಾರಿಗಳು ಯಾರು? ನಾನಾ, ಸಿದ್ದರಾಮಯ್ಯನವರಾ, ಯಡಿಯರಪ್ಪನವರಾ, ಬೊಮ್ಮಾಯಿ ಅವರಾ? ಈ ವಿಚಾರ ತನಿಖೆಯಾಗಬೇಕು. ಆದರೆ ಇದು ಇವರಿಂದ ಸಾಧ್ಯವಿಲ್ಲ. ನಾವು ಎಲ್ಲವನ್ನೂ ಈಗಲೇ ಬಹಿರಂಗ ಮಾಡುವುದಿಲ್ಲ. ದೂರು ಕೊಟ್ಟ ನಂತರ ಏನು ದೂರು ಕೊಟ್ಟಿದ್ದೇವೆ ಎಂದು ತಿಳಿಸುತ್ತೇವೆ ಎಂದರು.
ಚಿಲುಮೆ ಸಂಸ್ಥೆ ನಡೆಸಿದ ಅಕ್ರಮ ಏನು..?
ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಬಿಎಂಪಿ ಅನುಮತಿಯನನ ಚಿಲುಮೆ ಸಂಸ್ಥೆ ಪಡೆದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಹೆಸರಿನಲ್ಲಿ ಗುರುತಿನ ಚೀಟಿಯನ್ನ ಸೃಷ್ಟಿಸಿಕೊಂಡು ಮತದಾರರ ಮನೆಮನೆಗಳಿಗೆ ತೆರಳಿ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಮಾಹಿತಿಯನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಬಿ ಎಲ್ ಓ ಗುರುತಿನ ಚೀಟಿಯನ್ನು ಸರ್ಕಾರಿ ನೌಕರರು ಅಥವಾ ಅರೆ ಸರ್ಕಾರಿ ಸಿಬ್ಬಂದಿ ಅಲ್ಲದೆ ಬೇರೆಯವರು ಪಡೆದುಕೊಳ್ಳವುದು ಅಪರಾಧವಾಗಿದೆ.

ಇನ್ನೂ ಮತದಾರರ ಮಾಹಿತಿ ಕಳವು ಹಗರಣದಲ್ಲಿ ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಎಂಬ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಈ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಆಪ್ ಮೂಲಕ ದತ್ತಾಂಶವನ್ನು ಸಂಗ್ರಹ ಮಾಡಿದೆ. ಬಿಎಲ್ಒ ಅಧಿಕಾರಿಗಳ ಹೆಸರಿನಲ್ಲಿ ಮತದಾರರ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಮತ್ತಿತರ ಮಾಹಿತಿಯನ್ನು ಸಂಗ್ರಹ ಮಾಡಿದೆ ಎಂಬ ಆರೋಪ ಇದೆ.












Click it and Unblock the Notifications