ಸಚಿವ ಅಂಬರೀಷ್ ಅವರೇ ಏನ್ರೀ ಇದು ಉಡಾಫೆ ಮಾತು?
ಲೇ ಬಡ್ಡೆತದೇ, ಕ್ಯಾಮೆ ಮಾಡ್ರೋ ಹೋಗ್ರಲಾ.. ಹೀಗೆ ಬೈಸಿಕೊಂಡ್ರೆನೇ ಅಂಬರೀಷ್ ಅಭಿಮಾನಿಗಳಿಗೆ ಒಂದು ರೀತಿಯ ನೆಮ್ಮದಿ ಸಿಗೋದು. ಆದರೆ ಇದು ಸಿನಿಮಾರಂಗ ಅಲ್ವಲ್ಲಾ, ಇದು ರಾಜಕೀಯ. ಅದರಲ್ಲೂ ಅಂಬರೀಷ್ ವಸತಿ ಸಚಿವರು ಎನ್ನೋ ಜವಾಬ್ದಾರಿ ಹುದ್ದೆ ಬೇರೆ.
ಸಿನಿಮಾದಲ್ಲಿ ಡೈಲಾಗು ಹೊಡೆದಂತೆ ರಾಜಕೀಯದಲ್ಲಿ ಹೇಳಿಕೆ ನೀಡಿದರೆ ಎಡವಟ್ಟಾಗುತ್ತೆ. ಅದರ ಅನುಭವ ಈ ಹಿಂದೆ ಹಲವು ಬಾರಿ ವಸತಿ ಸಚಿವರಿಗೆ ಆಗಿದ್ರೂ, ಅಂಬರೀಷ್ ತನ್ನ ವಾಕ್ ಶೈಲಿಯನ್ನು ಬದಲಾಯಿಸುವ ಪ್ರಯತ್ನಕ್ಕೆ ಮುಂದಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಎರಡು ವಿವಿಧ ಕಾರ್ಯಕ್ರಮದಲ್ಲೂ ಅಂಬಿ ಮಾತಿನ ವೈಖರಿ ಮತ್ತೆ ಅದೇ ರೀತಿ ಮುಂದುವರಿದಿದೆ. ಅಂಬರೀಷ್ ನೀಡಿರುವ ಹೇಳಿಕೆಗಳು ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. (ನಂಗೂ ಸ್ವಲ್ಪ ರಾಜಕೀಯ ಗೊತ್ತಿದೆ)
ಘಟನೆ 1: ವಿವಿಧ ದಲಿತ ಸಂಘಟನೆಗಳು ಜನಜಾಗೃತಿ ಸಮಾವೇಶವನ್ನು ಆಯೋಜಿಸಿದ್ದವು. ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಂಬರೀಷ್, ' ಸದ್ಯ ನೀವಿರುವ ಮನೆಗಳಲ್ಲಿ ನನ್ನ ಮನೆಯ ನಾಯಿ ಕೂಡಾ ಮಲಗೋಲ್ಲ' ಎಂದು ಹೇಳಿಕೆ ನೀಡಿದ್ದರು.
ಘಟನೆ 2: 'ನಿನ್ನಿಂದ ಮಂಡ್ಯ ಉದ್ದಾರ ಆಗ್ಬೇಕಾಗಿಲ್ಲ, ನಡೀಲಾ ಹೊರಗೆ' ಎಂದು ಮಂಡ್ಯದ ಪ್ರಥಮ ಪ್ರಜೆಯ ಮೇಲೆ ಅಂಬರೀಷ್ ಸಿಟ್ಟಾಗಿ, ರೇಗಾಡಿದ ಘಟನೆಯೂ ನಡೆದಿದೆ. ವಿವರವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ದಲಿತ ಸಂಘಟನೆಯ ಕಾರ್ಯಕ್ರಮ
ದಲಿತ ಸಂಘಟನೆಗಳು 'ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ದ ಜನಜಾಗೃತಿ ಸಮಾವೇಶ' ಕಾರ್ಯಕ್ರಮವನ್ನು (ಫೆ 7) ಹಮ್ಮಿಕೊಂಡಿದ್ದವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅಂಬಿ, ನಿಮ್ಮ ಮನೇಲಿ ನನ್ನ ಮನೆಯ ನಾಯಿಯೂ ಮಲಗೋಲ್ಲ. ನಿಮಗಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಉತ್ತಮವಾದ ಮನೆಯನ್ನು ಕಟ್ಟಿಸಿದ್ದೇನೆ, ಚೆನ್ನಾಗಿರಿ ಎಂದಿದ್ದಾರೆ.

ನಗರಸಭಾಧ್ಯಕ್ಷರನ್ನು ಬೆಂಡೆತ್ತಿದ ಅಂಬಿ
ಮಂಡ್ಯ ನಗರಸಭಾಧ್ಯಕ್ಷ ಬಿ ಸಿದ್ದರಾಜು ಅವರನ್ನು ಅಂಬರೀಷ್ ಏಕವಚನದಲ್ಲಿ ಸಂಭೋದಿಸಿ ಬೈಯ್ದು ಹೊರಕಳುಹಿಸಿದ ಘಟನೆ ಭಾನುವಾರ (ಫೆ 8) ನಡೆದಿದೆ. 'ಮಾತು ಉಳಿಸಿಕೊಳ್ಳದ ನಿನ್ನಿಂದ ಮಂಡ್ಯ ಉದ್ದಾರ ಆಗ್ ಬೇಕಾಗಿಲ್ಲ ಕಲಾ.. ನಂಗೆ ಏನು ಮಾಡಬೇಕೂಂತ ಗೊತ್ತಿದೆ, ನಡೀಲಾ ನೀ ಹೊರಕೆ' ಎಂದು ಗೌರವ ನೀಡದೇ ಹೊರ ಕಳುಹಿಸಿದ್ದಾರೆ.

ಮುಖ್ಯಮಂತ್ರಿಗಳ ವಿರುದ್ದವೇ ಅಂಬರೀಷ್ ಕಿಡಿಕಾರಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯಗಿಂತ ಮೊದಲು ನಾನು ಕಾಂಗ್ರೆಸ್ಸಿಗೆ ಬಂದಿದ್ದೇನೆ. ಅವರು ನನ್ನ ಮಾತಿಗೂ ಬೆಲೆಕೊಡಬೇಕು. ನನ್ನ ಪರವಾಗಿ ಕೆಲಸ ಮಾಡಿದವರಿಗೂ ನಿಗಮ ಮಂಡಳಿ ಸ್ಥಾನಮಾನ ನೀಡಬೇಕು, ಅವರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಸಿಎಂ ವಿರುದ್ದವೂ ಅಂಬಿ ಗರಂ ಆಗಿದ್ದರು. ಸಿದ್ದರಾಮಯ್ಯ ಅವರು ಅಂಬರೀಷ್ ಮಾತಿಗೆ ಸೊಪ್ಪು ಹಾಕಲಿಲ್ಲ ಅನ್ನೋದು ಬೇರೆ ವಿಚಾರ.

ಏನೇ ಹೇಳಿದ್ರು ಉಲ್ಟಾ ಅಪಪ್ರಚಾರ ಮಾಡ್ತೀರಿ
ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ರಾಜಕೀಯದಲ್ಲಿರುವವರ ವಿರುದ್ಧ ನೀವು ವದಂತಿಗಳನ್ನು ಹಬ್ಬಿಸುತ್ತೀರಿ, ರಾಜಕೀಯದಲ್ಲಿರುವ ಕಾರಣಕ್ಕಾಗಿ ನಾವು ಮಗಳು, ಮೊಮ್ಮಗಳನ್ನೂ ಮುದ್ದಾಡುವಂತಿಲ್ಲವೇ, ಮಾಧ್ಯಮಗಳ ಜತೆ ನಾನು ಮಾತನಾಡುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಉಲ್ಟಾ ಮಾಡಿ ಅಪಪ್ರಚಾರ ಮಾಡುತ್ತಿದ್ದೀರಾ ಎಂದು ಮಾಧ್ಯಮಗಳ ಮೇಲೂ ಅಂಬರೀಷ್ ಸಿಟ್ಟಾಗಿದ್ದರು.

ಬಿಲ್ ಕಟ್ಟಲಾಗದಷ್ಟು ದರಿದ್ರ ಇಲ್ಲ
ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಟ ಕಮ್ ರಾಜ್ಯ ವಸತಿ ಸಚಿವ ಅಂಬರೀಷ್ ಅವರ ಖರ್ಚುವೆಚ್ಚವನ್ನು ಸೂಪರ್ ಸ್ಟಾರ್ ರಜನಿಕಾಂತ್ ಪಾವತಿಸಿದ್ದರು, ಅಂಬಿ ಮದ್ಯಪಾನಿಯೆಂದು ವಿಕಿಪಿಡಿಯಾದಲ್ಲಿ ದಾಖಲಾಗಿತ್ತು. ಇದಕ್ಕೆ ' ಆಸ್ಪತ್ರೆಯ ದುಡ್ಡು ಕಟ್ಟಲಾಗದಷ್ಟು ದಾರಿದ್ರ್ಯ ನನಗೆ ಬಂದಿಲ್ಲಾರೀ, ಅದು ಏನೂಂತ ಪ್ರಶ್ನೆ ಕೇಳ್ತೀರಾ' ' ಎಂದು ಖಾರವಾಗಿ ಅಂಬರೀಶ್ ಮಾಧ್ಯಮದವರನ್ನೇ ಪ್ರಶ್ನಿಸಿದ್ದರು.

ಪಿಎಂ ಅವಿದ್ಯಾವಂತ ತೀರ್ಪು
ಕಾವೇರಿ ನದಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕೊಟ್ಟ ತೀರ್ಪು ಒಬ್ಬ ಅವಿದ್ಯಾವಂತನೂ ಕೊಡುವುದಿಲ್ಲ ಎಂದು ನಟ ಮತ್ತು ಕಾಂಗ್ರೆಸ್ ಮುಖಂಡ ರೆಬೆಲ್ ಸ್ಟಾರ್ ಅಂಬರೀಶ್ ಗಂಭೀರ ಹೇಳಿಕೆ ನೀಡಿ, ಕಾಂಗ್ರೆಸ್ಸಿಗರ ಸಿಟ್ಟಾಗಿದ್ದೂ ಉಂಟು.











Click it and Unblock the Notifications