ಮಂಡ್ಯ : ಗೃಹಿಣಿ ನಿಗೂಢ ಸಾವು, ಪತಿ ಮನೆಗೆ ಬೆಂಕಿ
ಮಂಡ್ಯ, ಮಾರ್ಚ್ 29 : ಗೃಹಿಣಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಆಕೆಯ ಮನೆಯವರು ಪತಿ ಮತ್ತು ಆತನ ಸಂಬಂಧಿಕರನ್ನು ಸಜೀವವಾಗಿ ದಹನ ಮಾಡಲು ಪ್ರಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಪೊಲೀಸರು ಪ್ರವೇಶದಿಂದಾಗಿ ಭಾರೀ ಅನಾಹುತ ತಪ್ಪಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಡಭೋಗನಹಳ್ಳಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ನಾಡಭೋಗನಹಳ್ಳಿ ನಿವಾಸಿ ಮಂಜು ಅವರ ಪತ್ನಿ ಪ್ರಿಯಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬೆಳಗ್ಗೆ ಪತ್ತೆಯಾಗಿತ್ತು. ಪ್ರಿಯಾ ಸಾವಿಗೆ ಪತಿಯ ಮನೆಯವರು ಕಾರಣ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. [ಮಂಡ್ಯ: ವರದಕ್ಷಿಣೆ ಹಿಂಸೆ, ಹಸೆಮಣೆ ಏರುವ ಮೊದಲೇ ಆತ್ಮಹತ್ಯೆ]

'ವರದಕ್ಷಿಣೆಗಾಗಿ ಪ್ರಿಯಾಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಕಾಲು ಕಟ್ಟಿದ ಸ್ಥಿತಿಯಲ್ಲಿ ಪ್ರಿಯಾ ಶವ ಪತ್ತೆಯಾಗಿದೆ. ಕಾಲು ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ?' ಎಂದು ಪ್ರಿಯಾ ಚಿಕ್ಕಪ್ಪ ಶಿವಕುಮಾರ್ ಪ್ರಶ್ನಿಸಿದ್ದಾರೆ. [ಮಂಡ್ಯ: ಶಿವರಾತ್ರಿಯಂದೇ ಪತ್ನಿ, ಮಗುವನ್ನು ಕೊಚ್ಚಿದ ಪತಿರಾಯ]
ಮನೆಗೆ ಬೆಂಕಿ ಹಚ್ಚಿದರು : ಪ್ರಿಯಾ ಸಾವಿನ ಸುದ್ದಿ ತಿಳಿದು ಪತಿ ಮಂಜು ಮನೆಗೆ ಆಗಮಿಸಿದ ಆಕೆಯ ಸಂಬಂಧಿಕರು ಮಂಜು, ಆತನ ಚಿಕ್ಕಪ್ಪ ಮತ್ತು ಇತರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದರು. ಪ್ರಿಯಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಂಜು ಮತ್ತು ಆತನ ಸಂಬಂಧಿಕರನ್ನು ಮನೆಯೊಳಗೆ ಕೂಡಿಹಾಕಿ ಮನೆಗೆ ಬೆಂಕಿ ಹಚ್ಚಿದರು. ಸಾವಿನ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದರು. ಆದರೆ, ಮನೆಯ ಪಿಠೋಪಕರಣ, ಮನೆ ಮುಂದಿದ್ದ ಬೈಕ್ ಬೆಂಕಿಗೆ ಆಹುತಿಯಾಗಿದೆ.
7 ವರ್ಷದ ಹಿಂದೆ ಮದುವೆ ನಡೆದಿತ್ತು : 'ಮಂಜು ಮತ್ತು ಪ್ರಿಯಾ ಮದುವೆ ಏಳು ವರ್ಷಗಳ ಹಿಂದೆ ನಡೆದಿತ್ತು. ವರದಕ್ಷಿಣೆಗಾಗಿ ಪತಿಯ ಮನೆಯವರು ಹಿಂಸೆ ನೀಡುತ್ತಿದ್ದರು. ಚಿತ್ರಹಿಂಸೆ ನೀಡಿ ಆಕೆಯನ್ನು ಕೊಲೆ ಮಾಡಿದ್ದಾರೆ' ಎಂದು ಪ್ರಿಯಾ ಚಿಕ್ಕಪ್ಪ ಶಿವಕುಮಾರ್ ಆರೋಪಿಸಿದ್ದಾರೆ.

'ಕಳೆದ ಶುಕ್ರವಾರ ರಾಜಿ-ಪಂಚಾಯಿತಿ ಮಾಡಲಾಗಿತ್ತು. ಈ ಸಮಯದಲ್ಲಿ ನನ್ನನ್ನು ಕೊಲ್ಲುತ್ತಾರೆ ಎಂದು ಪ್ರಿಯಾ ಹೇಳಿದ್ದಳು. ನಾವೆಲ್ಲ ಇದ್ದೇವೆ ಎಂದು ಅವಳಿಗೆ ಧೈರ್ಯ ತುಂಬಿದ್ದೆವು. ಮೂರು ದಿನಗಳಿಂದ ಆಕೆಗೆ ಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ' ಎಂದು ಶಿವಕುಮಾರ್ ದೂರಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಮೇಲೆ ಕಲ್ಲು ತೂರಾಟ : ಆರೋಪಿಗಳಾದ ಮೃತ ಪ್ರಿಯಾಳ ಗಂಡ ಮಂಜಪ್ಪ, ಚಿಕ್ಕಮಾವ ನಂಜಪ್ಪ, ಚಿಕ್ಕತ್ತೆ ಮಂಜುಳಾ ಮೇಲೂ ಹಲ್ಲೆ ನಡೆದಿದೆ. ದಾಳಿಯ ಸುಳಿವು ಅರಿತು ಮಾವ ದೊಡ್ಡಣ್ಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲು ಅಡ್ಡಿಪಡಿಸಿದ ಸಂಬಂಧಿಕರ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿ ಉದ್ರಿಕ್ತ ಗುಂಪನ್ನು ಚದುರಿಸಿದರು. ಕಲ್ಲುತೂರಾಟದಿಂದ ಏಳೆಂಟು ಮಂದಿ ಪೊಲೀಸರಿಗೆ ಹಾಗೂ ಇಬ್ಬರು ಪತ್ರಕರ್ತರು ಹಾಗೂ ಕೆಲ ಸಂಬಂಧಿಕರಿಗೂ ಗಾಯಗಳಾಗಿವೆ.
ಕಲ್ಲುತೂರಾಟ ಮತ್ತು ಲಾಠಿ ಪ್ರಹಾರದ ನಡುವೆ ಪ್ರಿಯಾ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ಮುಂದುವರೆದಿದೆ. ಸ್ಥಳಕ್ಕೆ ಮೈಸೂರು ವಲಯ ಐಜಿಪಿ ಬಿಜಯ್ಕುಮಾರ್ಸಿಂಗ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮುಂತಾದವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.












Click it and Unblock the Notifications