ಕೈ ಮುಗಿದು ಮನೆ ಕಟ್ಟಿಕೊಡಿ ಸ್ವಾಮಿ ಎಂದು ಸಚಿವರ ಮುಂದೆ ಕಣ್ಣೀರು ಹಾಕಿದ ಗುಡಿಸಲು ವಾಸಿಗಳು
ಬೆಂಗಳೂರು, ಸೆಪ್ಟೆಂಬರ್ 08: ಸೂರು ಕಲ್ಪಿಸಿ ಕೊಡಿ ಸ್ವಾಮಿ ಎಂದು ಹೆಬ್ಬಾಳದ ಕುಂತಿ ನಗರದಲ್ಲಿ ಗುಡಿಸಲು ನಿವಾಸಿಗಳು ಕಣ್ಣೀರು ಹಾಕಿ ಸಚಿವ ಜಮೀರ್ ಅಹಮದ್ ಖಾನ್ ಮುಂದೆ ಕೈಮುಗಿದು ಗೋಗರೆದಿದ್ದಾರೆ.
ಹೆಬ್ಬಾಳದ ಕುಂತಿ ನಗರದಲ್ಲಿ ಶುಕ್ರವಾರ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧಿಕಾರಿಗಳ ಜತೆ ಭೇಟಿ ನೀಡಿದಾಗ, ನಾವು ಇರುವ ಶೆಡ್ ಗಳಲ್ಲಿ ಇಲಿ -ಹೆಗ್ಗಣ ಕಾಟದ ನಡುವೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಸಚಿವ ಅಹಮದ್ ಖಾನ್ ಅವರ ಮುಂದೆ ತಮ್ಮ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರೂಪಿಸಿರುವ ಪ್ರಧಾನ ಮಂತ್ರಿ ಅವಾಸ್ ವಸತಿ ಯೋಜನೆ ಎರಡು ವರ್ಷ ಆದರೂ ಪೂರ್ಣ ಗೊಂಡಿಲ್ಲ. ಗುಣಮಟ್ಟದ ಮನೆ ಕಟ್ಟಿಕೊಡುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಜೀವನ ನಡೆಸಲು ಊಟ ತಿಂಡಿಗೆ ಕಷ್ಟ ಆಗುತ್ತಿದೆ. ಫಲಾನುಭವಿ ವಂತಿಗೆ ಮೂರೂವರೆಯಿಂದ ನಾಲ್ಕು ಲಕ್ಷ ವರೆಗೆ ಪಾವತಿ ಮಾಡಲು ಆಗುತ್ತಿಲ್ಲ. ನಮಗೆ ದಯವಿಟ್ಟು ಮನೆ ಕಟ್ಟಿಕೊಡಿ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸ್ಥಳೀಯ ವಾಸಿಗಳು ಸಚಿವರ ಮುಂದೆ ಕಣ್ಣೀರು ಹಾಕಿ ನಮ್ಮ ಜೀವನ ರಸ್ತೆಗೆ ಬಂದಿದೆ. ಮಕ್ಕಳಿಗೆ ವಿದ್ಯೆ ಕಲಿಸಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆ ಎಂದರೆ ಚಿಕಿತ್ಸೆ ಗೆ ಹಣ ಇಲ್ಲದಂತಾಗಿದೆ ಎಂದು ಕಣ್ಣೀರು ಹಾಕಿದರು. ಪೇಪರ್ ಹಾಯುವುದು, ಮನೆ ಕೆಲಸ, ರಸ್ತೆ ಬದಿ ಚಪ್ಪಲಿ ಹೊಲೆದು ಜೀವನ ಸಾಗಿಸುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಸಚಿವರ ಮುಂದೆ ಹೇಳಿಕೊಂಡಿದ್ದಾರೆ.
ಕುಂತಿ ನಗರ ಕೊಳೆಗೇರಿಯಲ್ಲಿ 402 ಮನೆ 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರತಿ ಮನೆಗೆ 7 ಲಕ್ಷ ರೂ. ವೆಚ್ಚ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಎಸ್ ಸಿ ಎಸ್ ಟಿ ವರ್ಗಕ್ಕೆ 3.50 ಲಕ್ಷ ರೂ., ಸಾಮಾನ್ಯ ವರ್ಗಕ್ಕೆ 2.70 ಲಕ್ಷ ರೂ. ಸಬ್ಸಿಡಿ ಸಿಗುತ್ತಿದ್ದು ಉಳಿದದ್ದು ಫಲಾನುಭವಿ ಕಟ್ಟಬೇಕು. ಆದರೆ ವಂತಿಗೆ ಪಾವತಿ ಆಗದೆ ಮನೆ ಅರ್ಧ ಕ್ಕೆ ನಿಂತಿವೆ.
ಇನ್ನೂ ಈ ವೇಳೆ ಜಮೀರ್ ಅಹಮದ್ ಸರ್ವಜ್ಞ ಕ್ಷೇತ್ರದ ಚಟ್ಟಪ್ಪ ಗಾರ್ಡನ್, ಬಸವ ನ ಗುಡಿಯ ಚಾಮುಂಡಿ ನಗರ ಕೊಳೆಗೇರಿ ಗೂ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಲದೇ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಸಚಿವರಿಗೆ ಸಾಥ್ ನೀಡಿದರು.












Click it and Unblock the Notifications