ವಲಸೆ ಕಾರ್ಮಿಕರ ಬಲಿ: ಕೊನೆಗೂ ಎಚ್ಚೆತ್ತ ಕೇಂದ್ರದಿಂದ ಸುತ್ತೋಲೆ
ಬೆಂಗಳೂರು, ಮೇ 11: ಲಾಕ್ಡೌನ್ನಿಂದಾಗಿ ಕೋಟ್ಯಂತರ ವಲಸೆ ಕಾರ್ಮಿಕರ ಜೀವನ ಬೀದಿಗೆ ಬಂದಿದೆ. ದಾರಿ ಕಾಣದಂತಾಗಿರುವ ವಲಸೆ ಕಾರ್ಮಿಕರು ಕಾಲ್ನಡಿಗೆಯಿಂದಲೇ ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದು ಮತ್ತೊಂದು ರೀತಿಯ ದುರಂತಗಳಿಗೆ ಕಾರಣವಾಗಿದೆ.
ನಡೆದು ನಡೆದು ಕೆಲವರು ಸಾವನ್ನಪ್ಪಿದ್ದರೆ, ರಸ್ತೆ ಅಫಘಾತಗಳಲ್ಲಿ ಜೀವ ಕಳೆದುಕೊಂಡವರು ಮತ್ತಷ್ಟು ಕಾರ್ಮಿಕರು. ಇವೆಲ್ಲ ಸಾಲದು ಎಂಬಂತೆ ಮಾಹಾರಾಷ್ಟ್ರ ರಾಜ್ಯದ ಔರಂಗಾಬಾದ್ನಲ್ಲಿ ಸಂಭವಿಸಿದ ರೈಲು ದುರಂತ ಪ್ರಕರಣ. ಔರಂಗಾಬಾದ್ನಲ್ಲಿ ವಲಸೆ ಕಾರ್ಮಿಕರ ಮೇಲೆ ರೈಲು ಹರಿದು ಸಂಭವಿಸಿದ ದುರ್ಘಟನೆಯ ಬಳಿಕ ಇದೀಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಧೈರ್ಯದಿಂದ ಕೇಂದ್ರದ ಬಳಿ ಆರ್ಥಿಕ ನೆರವು ಕೇಳಿ: ಮಾಜಿ ಸಿಎಂ ಎಚ್ಡಿಕೆ
ತಮ್ಮೂರಿನತ್ತು ತೆರಳುತ್ತಿರುವ ವಲಸೆ ಕಾರ್ಮಿಕರು ಊರು ತಲುಪುವ ಮೊದಲೇ ಮಣ್ಣಾಗುತ್ತಿದ್ದಾರೆ. ಇದನ್ನು ತಡೆಯುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಠಿಣ ಸೂಚನೆ ರವಾನಿಸಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಊರು, ರಾಜ್ಯಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸುತ್ತೋಲೆ ಹೊರಡಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಹೆಚ್ಚಿನ ರೈಲು, ಬಸ್ಗಳನ್ನು ಪ್ರಯಾಣಕ್ಕೆ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸೂಚಿಸಿದ್ದಾರೆ. ವಲಸೆ ಕಾರ್ಮಿಕರು, ರೈಲು ಹಳಿಗಳ ಮೇಲೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆದುಕೊಂಡು ಹೋಗಬಾರದು.
ರಾಜ್ಯ ಸರ್ಕಾರಗಳು ರೈಲು ಹಳಿ, ರಾಷ್ಟ್ರೀಯ ಹೆದ್ದಾರಿ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಬೇಕು. ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದರೆ ಅಂಥವರನ್ನು ತಡೆದು ಅವರಿಗೆ ಸಂಪೂರ್ಣ ಆಶ್ರಯ ಕೊಡಬೇಕು. ವಲಸೆ ಕಾರ್ಮಿಕರಿಗೆ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಆದೇಶ ಮಾಡಿದ್ದಾರೆ.
ಮೊನ್ನೆಯಷ್ಟೇ ಕಾಲ್ನಡಿಗೆಯಲ್ಲಿಯೆ ತಮ್ಮೂರಿನತ್ತ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರು, ನಡೆದು ನಡೆದು ಸುಸ್ತಾಗಿ ರೇಲ್ವೆ ಹಳಿಗಳ ಮೇಲೆಯೆ ಮಲಗಿದ್ದರು. ರೈಲು ಹಳಿ ಮೇಲೆ ಮಲಗಿದ್ದವರ ಮೇಲೆ ಗೂಡ್ಸ್ ರೈಲು ಹರಿದು 16 ವಲಸೆ ಕಾರ್ಮಿಕರು ಮೃತಪಟ್ಟಿದ್ದರು. ಜೊತೆಗೆ ರೈಲು, ಬಸ್ ವ್ಯವಸ್ಥೆ ಇಲ್ಲದೆ ತಮ್ಮ ಊರಿಗೆ ತೆರಳುತ್ತಿರುವ ಹಲವರು ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗಿದ್ದಾರೆ.
ಈ ಎಲ್ಲ ದುರ್ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಇದೀಗ ವಿದೇಶಗಳಲ್ಲಿ ವಿಮಾನ ಕಳಿಸಿ ಜನರನ್ನು ಕರೆಸಿಕೊಳ್ಳುವುದರೊಂದಿಗೆ ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ಸೂಚಿಸಿದೆ.