ಸಿಎಂ ಬದಲಾವಣೆ ಚರ್ಚೆ; ಲಿಂಗಾಯತ ನಾಯಕ ಮನೆಗೆ ಭೇಟಿ ನೀಡದ ದಲಿತ ನಾಯಕ
ಬೆಂಗಳೂರು, ಸೆಪ್ಟೆಂಬರ್ 09: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್ ಪಕ್ಷಕ್ಕೆ ಕಳಂಕವನ್ನು ತಂದಿದೆ.. ಅದರಲ್ಲೂ ರಾಜಕೀಯ ಇತಿಹಾಸದಲ್ಲಿ ಒಂದೂ ಭ್ರಷ್ಟಾಚಾರದ ಆರೋಪ ಇಲ್ಲದ ಸಿದ್ದರಾಮಯ್ಯ ಕೊರಳಿಗೆ ಮುಡಾ ಹಗರಣ ಸುತ್ತಿಕೊಂಡಿದ್ದು ಭಾರೀ ಮುಜುಗರ ತಂದಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ಪಾಳಯಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನಲೆ ಸಚಿವ ಎಂ.ಬಿ.ಪಾಟೀಲ್ ಅವರ ಮನೆಗೆ ಗೃಹ ಸಚಿವರಾ ಜಿ ಪರಮೇಶ್ವರ್ ಅವರು ಭೇಟಿ ಮಾಡಿದ್ದು, ಹಲವು ಅನುಮಾನಗಳು ಹುಟ್ಟುಹಾಕುವಂತೆ ಮಾಡಿದೆ.

ಈ ಕುರಿತು ಗೃಹ ಸಚಿವರಾದ ಜಿ ಪರಮೇಶ್ವರ್ ಮಾತನಾಡಿ, ಎತ್ತಿನಹೊಳೆ ಯೋಜನೆ ಕಾರ್ಯಕ್ರಮಕ್ಕೆ ಜೊತೆಯಲ್ಲೇ ಹೋಗುವ ಬಗ್ಗೆ ಮಾತನಾಡಿದ್ದೆವು. ನಮ್ಮ ಮನೆಗೆ ಬನ್ನಿ. ಉಪಹಾರ ಸೇವಿಸಿ ಇಲ್ಲಿಂದಲೇ ಹೋಗೋಣ ಎಂದು ಎಂ.ಬಿ.ಪಾಟೀಲರು ಹೇಳಿದ್ದರು. ಅವರ ಮನೆಯಲ್ಲಿದ್ದಾಗ ಮುಖ್ಯಮಂತ್ರಿಯವರು ಮನೆಯಿಂದ ಸಕಲೇಶಪುರಕ್ಕೆ ಹೋರಡಲು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಬಂತು. ನಾವು ಜೊತೆಯಲ್ಲೆ ಬರುತ್ತೇವೆ ಎಂದು ಸಿಎಂ ಅವರಿಗೆ ತಿಳಿಸಿ ಹೋಗಿದ್ದೇವೆ. ಇದಕ್ಕೆ ಬೇರೆ ಅರ್ಥಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಇವತ್ತಿಗೆ ಸಿಎಂ ಬದಲಾವಣೆಯ ಪ್ರಶ್ನೆ ಹುಟ್ಟಿಕೊಳ್ಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿದ್ದಾರೆ, ಆಡಳಿತ ನಡೆಯುತ್ತಿದೆ. ಕೋರ್ಟ್ನಲ್ಲಿ ಕೇಸ್ ಇದೆ, ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಆ ಬಗ್ಗೆ ಚರ್ಚೆ ಪ್ರಾರಂಭ ಮಾಡುವಂತ ಅಗತ್ಯ ಕಾಣುತ್ತಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೇಕೆ ಬೇಕು. ಅವರ ಪಕ್ಷದಲ್ಲಿರುವ ವ್ಯತ್ಯಾಸ, ಜಗಳನ್ನು ಸರಿಪಡಿಸಿಕೊಳ್ಳಲಿ ಎಂದು ವಿಪಕ್ಷನಾಯಕ ಆರ್.ಅಶೋಕ್ ಅವರಿಗೆ ಗೃಹ ಸಚಿವ ಪರಮೇಶ್ವರ ಅವರು ತಿರುಗೇಟು ನೀಡಿದರು.
ನಾವೇನು ಸಿಎಂ ಬದಲಾವಣೆ ಮಾಡುವುದಿಲ್ಲ. ಆ ಪಕ್ಷದವರೇ ಬದಲಾವಣೆ ಮಾಡುತ್ತಾರೆ. ಎಂದು ವಿಪಕ್ಷನಾಯಕ ಆರ್.ಅಶೋಕ್ ಹೇಳಿಕೆಗೆ, ನಮ್ಮ ಪಕ್ಷವನ್ನು ನಾವು ನೋಡಿಕೊಳ್ಳುತ್ತೇವೆ. ತಮ್ಮಪಕ್ಷದಲ್ಲಿನ ಜಗಳ ಸರಿಪಡಿಸಿಕೊಳ್ಳಲಿ ಎಂದು ಪರಮೇಶ್ವರ್ ಹೇಳಿದರು.
ಆಡಳಿತದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಪ್ರತಿಯೊಬ್ಬ ಸಚಿವರು ಇಲಾಖೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧಿಕಾರಿಗಳಾಗಲಿ, ಸರ್ಕಾರದ ಕಾರ್ಯದರ್ಶಿಗಳು ಯಾರು ಸಹ ಸುಮ್ಮನೆ ಕುಳಿತಿಲ್ಲ. ಕೋರ್ಟ್ನಲ್ಲಿ ಆರ್ಗ್ಯೂಮೆಂಟ್ ಇರುವುದರಿಂದ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಕ್ಕಿಲ್ಲ. ಆದರೆ, ಆಡಳಿತ ಸುಗಮವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯದ ಆಕ್ಷೇಪದ ಕುರಿತು ಪ್ರತಿಕ್ರಿಯಿಸಿ, ಪರಿಸರದ ಪ್ರಶ್ನೆ ಬರುವ ಭಾಗದಲ್ಲಿ ಕೆಲಸ ಮುಗಿದಿದೆ. ಇನ್ನೇನಿದ್ದರು ಬಯಲು ಸೀಮೆಯಲ್ಲಿ ಕೆಲಸಗಳು ನಡೆಯುತ್ತಿವೆ. ಪರಿಸರ ನಾಶ ಆಗುತ್ತಿದೆ ಎಂಬುದು ವನ್ಯಜೀವಿ ಮಂಡಳಿಯ ಪ್ರಶ್ನೆ. ಈವರೆಗೂ ನಾಶವಾಗದಂತೆ ಕೆಲಸ ಮಾಡಿಕೊಂಡು ಬರಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಉತ್ತರ ನೀಡುತ್ತಾರೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಚಿವರ, ಶಾಸಕರ ಮಕ್ಕಳು ಎಂಬ ಪ್ರಶ್ನೆ ಬರುವುದಿಲ್ಲ. ಸಮರ್ಥರಿದ್ದರೆ ಆಯ್ಕೆಯಾಗುತ್ತಾರೆ. ಇಲ್ಲವಾದರೆ ಬೇರೆಯವರನ್ನು ಆಯ್ಕೆ ಮಾಡಲಾಗುತ್ತದೆ. ಸ್ವಭಾವಿಕವಾಗಿ ಸ್ಪರ್ಧಿಸಿರಬಹುದು. ಆದರೆ, ಅವರನ್ನೇ ಆಯ್ಕೆ ಅಮಡುತ್ತಾರೆ ಎಂದು ಹೇಳಲಾಗುವುದಿಲ್ಲ ಎಂದರು.












Click it and Unblock the Notifications