ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ: ಅರಗ ಜ್ಞಾನೇಂದ್ರ ಭವಿಷ್ಯ
ಬೆಂಗಳೂರು, ನ. 02: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಣನೀಯ ಮತಗಳು ಪಡೆದರೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಎರಡೂ ಕ್ಷೇತ್ರದ ಫಲಿತಾಂಶ ನೋಡಿದರೆ ರಾಜ್ಯದಲ್ಲಿ ಯಾವುದೇ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುವುದಿಲ್ಲ ಎಂದು ಸಾರ್ವತ್ರಿಕ ಚುನಾವಣೆಯ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ನಿರೀಕ್ಷೆಯಂತೆ ಅಧಿಕವಾಗಿ ಸಿಂದಗಿಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿಸಿದೆ. ಸಿಂದಗಿ ಕ್ಷೇತ್ರದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ತನ್ನೆಲ್ಲ ಸಂಪನ್ಮೂಲ ಗಳನ್ನು ಬಳಸಿ, ಕೇವಲ ಸಹಾನುಭೂತಿಯ ಬಲದಿಂದ ಚುನಾವಣೆಯನ್ನು ಎದುರಿಸಲು ಯೋಜನೆ ರೂಪಿಸಿತ್ತು. ಅದರೆ ಅದು ಕೈ ಕೊಟ್ಟಿದೆ. ಬಿಜೆಪಿ ಪಕ್ಷ ಮಾತ್ರ ತನ್ನ ಜನಪರ ಸಿದ್ದಾಂತ ಮತ್ತು ಕಾರ್ಯಕ್ರಮಗಳ ಆಧಾರದ ಮೇಲೆ ಚುನಾವಣಾ ಪ್ರಚಾರ ನಡೆಸಿದ್ದು, ಅದಕ್ಕೆ ಜನತೆಯ ಪ್ರಚಂಡ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಪಕ್ಷದ ಅಭ್ಯರ್ಥಿಯ ಯಶಸ್ಸಿಗೆ ಕಾರಣವಾಗಿದೆ. ಹಾನಗಲ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೂ ಗಣನೀಯ ಮತಗಳನ್ನು ಪಡೆದಿದ್ದರೂ, ಹಿನ್ನಡೆ ಆಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಬಂದಿರುವ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಯಾವುದೇ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುವುದಿಲ್ಲ ಎಂದೂ ಸಚಿವರು ತಿಳಿಸಿದರು.
ಅಭಿವೃದ್ಧಿ ಗಮನಿಸಿ ಸಿಂದಗಿಯಲ್ಲಿ ಬಿಜೆಪಿಗೆ ಜನಬೆಂಬಲ
"ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಸಿಂದಗಿಯಲ್ಲಿ ಬಿಜೆಪಿಗೆ ಜನರು ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಾರೆ. ಮುಸ್ಲಿಮರೂ ನಮಗೆ ಹೆಚ್ಚು ಮತ ಕೊಟ್ಟಿದ್ದಾರೆ'' ಎಂದು ವಸತಿ ಮತ್ತು ಮೂಲಸೌಲಭ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಇಂದು ರಾಜ್ಯದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಸಂಬಂಧಿಸಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳನ್ನು ಗೆಲ್ಲುವ ತವಕದಲ್ಲಿದ್ದೆವು. ಸಿಂದಗಿಯ ಶೌಚಾಲಯದ ಸಮಸ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಸ್ಪಂದಿಸಲಿದೆ. ಸಣ್ಣ ಅಂತರದಿಂದ ಹಾನಗಲ್ ಕ್ಷೇತ್ರವನ್ನು ನಾವು ಸೋತಿದ್ದೇವೆ. ಹಾನಗಲ್ ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆ ಅವರ ವೈಯಕ್ತಿಕ ಗೆಲುವು. ಅವರ ವರ್ಚಸ್ಸಿನ ಗೆಲುವು ಇದಾಗಿದೆ. ಅದು ಕಾಂಗ್ರೆಸ್ ಗೆಲುವಲ್ಲ ಎಂದು ನುಡಿದರು.
ಹಾನಗಲ್ ಸೋಲನ್ನು ಸವಾಲಾಗಿ ಸ್ವೀಕರಿಸುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ. ಹಿಂದಿನ ಬಾರಿ ಸಿ.ಎಂ. ಉದಾಸಿ ಅವರು ಪಡೆದಷ್ಟು ಮತಗಳನ್ನು ಬಿಜೆಪಿ ಪಡೆದಿದೆ. ಬಿಜೆಪಿ ಮತಗಳು ಬಿಜೆಪಿಯಲ್ಲೇ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಇದನ್ನು ನಮ್ಮ ತೆಕ್ಕೆಗೆ ಪಡೆಯಲು ಪ್ರಯತ್ನ ಮಾಡುತ್ತೇವೆ. ಉದಾಸಿಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಕ್ಷೇತ್ರದ ಬಗ್ಗೆ ಸ್ವಲ್ಪ ಹಿನ್ನಡೆ ಆಗಿತ್ತು. ಕೋವಿಡ್ ನಿಭಾಯಿಸುವ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಅಲ್ಲಿ ಹಿನ್ನಡೆ ಆಗಿತ್ತು. ಸೋಲಿನ ಪರಾಮರ್ಶೆ ಮಾಡಿಕೊಳ್ಳಲಾಗುವುದು ಎಂದರು.
ಆಭಿವೃದ್ಧಿ ಕೆಲಸಗಳಿಗೆ ಈ ಗೆಲುವು
"ಸಿಂದಗಿಯಲ್ಲಿ ಅಭಿವೃದ್ಧಿ ಆಧಾರದಲ್ಲಿ ಮತ ಕೇಳಲಾಯಿತು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರದ ಸಾಧನೆ, ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಸರಕಾರಗಳ ಸಾಧನೆಯನ್ನು ಜನರಿಗೆ ತಿಳಿಸಲಾಯಿತು. ವಸತಿ, ರಸ್ತೆ ಸಂಪರ್ಕ, ನೀರಾವರಿ ಖಾತೆಗಳ ಪ್ರಭಾವ ಬಳಸಿ ಹಾಗೂ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆಯಲ್ಲಿ ಹೆಚ್ಚು ಕಡಿಮೆ 32 ಸಾವಿರದ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇವೆ'' ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.
ಹಾನಗಲ್ ನಿಯಂತ್ರಣ ತಪ್ಪಿ ದೂರ ಹೋಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಯುವ ಮುಖಂಡ ವಿಜಯೇಂದ್ರ ಅವರು ಎರಡೂ ಕಡೆ ಬಂದು ಹೋಗಿದ್ದಾರೆ. ಹಾನಗಲ್ನಲ್ಲಿ 6 ಸಾವಿರ ಮತಗಳ ಅಂತರಕ್ಕೆ ಅಷ್ಟು ಜಂಬ ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಅವರು 32 ಸಾವಿರಕ್ಕೆ ಸೋತ ಸಿಂದಗಿ ಕ್ಷೇತ್ರದ ಬಗ್ಗೆ ಮಾತನಾಡಿಲ್ಲವೇಕೆ ಎಂದು ಕೇಳಿದರು.
ರಾಜ್ಯ ವಕ್ತಾರರು ಮತ್ತು ಶಾಸಕರಾದ ಪಿ. ರಾಜೀವ್, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
Recommended Video