ಸರ್ಕಾರಿ ಶಾಲೆಗಳಿಗೆ ಆಗಸ್ಟ್ 12ರಂದು ರಜೆ?, ಶಿಕ್ಷಣ ಇಲಾಖೆ ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರು ಆಗಸ್ಟ್ 12ರಂದು 'ಬೆಂಗಳೂರು ಚಲೋ' ಹಮ್ಮಿಕೊಂಡಿದ್ದಾರೆ. ಶಾಲೆಗಳನ್ನು ಬಂದ್ ಮಾಡಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಹೋರಾಟ ಆರಂಭಿಸಿದ್ದು, ಸೋಮವಾರ ಸರ್ಕಾರಿ ಶಾಲೆಗಳಿಗೆ ರಜೆಯೋ?, ಶಾಲೆ ತೆರೆದಿರಲಿದೆಯೋ? ಎಂಬ ಕುರಿತು ಗೊಂದಲವಿದೆ. ಆದ್ದರಿಂದ ಶಿಕ್ಷಣ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.
ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಈ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಬಿ. ಬಿ. ಕಾವೇರಿ, ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಇವರ ಸಹಿ ಇರುವ ಪತ್ರದಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ.

ಈ ಪತ್ರ ರಾಜ್ಯದಾದ್ಯಂತ ದಿನಾಂಕ 12/08/2024 ರಂದು ಪ್ರಾಥಮಿಕ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಇವರ ಮನವಿಯನ್ನು ಉಲ್ಲೇಖಿಸಲಾಗಿದೆ.
ಪತ್ರದಲ್ಲಿನ ಸ್ಪಷ್ಟನೆಗಳು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಇವರು ಶಿಕ್ಷಕರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ದಿನಾಂಕ 12/08/2024 ರಂದು ಬೆಂಗಳೂರು ಚಲೋ ಚಳುವಳಿಯನ್ನು ಹಮ್ಮಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ನಡತೆ) ನಿಯಮಗಳು-2021ರ ಪ್ರಕಾರ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವುದು ನಡತೆ ನಿಯಮಗಳ ಉಲ್ಲಂಘನೆಯಾಗುವುದರಿಂದ ದಿನಾಂಕ 12/08/2024ರಂದು ಶಾಲೆಗಳನ್ನು ಮುಚ್ಚಿ ಮುಷ್ಕರದಲ್ಲಿ ಭಾಗವಹಿಸಲು ಹಾಗೂ ಪಾಠ ಬೋಧನೆಗೆ ಅಡಚಣೆ ಉಂಟುಮಾಡಲು ಅವಕಾಶವಿರುವುದಿಲ್ಲ.
ಪ್ರಯುಕ್ತ ದಿನಾಂಕ 12/08/2024ರಂದು ಎಂದಿನಂತೆ ಶಾಲೆಗಳಲ್ಲಿ ಪಾಠ ಪ್ರವಚನಗಳು ನಡೆಯಲು ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ) ಇವರು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ಈ ಕುರಿತಂತೆ ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಸೂಚಿಸಲು ತಿಳಿಸಿದೆ.
ಅನಗತ್ಯ ಗೊಂದಲ ಸೃಷ್ಟಿಸಿ ಕರ್ತವ್ಯಕ್ಕೆ ಗೈರುಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಂಡು ಶಾಲೆಗಳನ್ನು ಮುಚ್ಚಿಸಿರುವುದು ಕಂಡುಬಂದಲ್ಲಿ ಅಂತಹಾ ಶಾಲೆಗಳ ಮುಖ್ಯಶಿಕ್ಷಕರು/ ಶಿಕ್ಷಕರುಗಳ ನಿಯಮಾನುಸಾರ ಅಗತ್ಯ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರತಿಭಟನೆ ಏಕೆ?; ಸರ್ಕಾರಿ ಶಾಲಾ ಶಿಕ್ಷಕರು ಶಾಲೆಗಳನ್ನು ಬಂದ್ ಮಾಡಿ ಸೋಮವಾರ 'ಬೆಂಗಳೂರು ಚಲೋ' ನಡೆಸಲಿದ್ದಾರೆ ಎಂಬ ಮಾಹಿತಿ ಇದೆ. ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ-2017ಕ್ಕೆ ತಿದ್ದುಪಡಿ ತರಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಹೋರಾಟವನ್ನು ಶಿಕ್ಷಕರು ಕೈಗೊಂಡಿದ್ದಾರೆ.
ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪರಿಗಣಿಸಬೇಕು. ಸೇವಾ ಜೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಶಿಕ್ಷಕರು ಮುಂದಿಟ್ಟಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಕುರಿತು ಮಾತನಾಡಿದ್ದು, "ಶಿಕ್ಷಕರ ಬೇಡಿಕೆಯಲ್ಲಿ ಹಲವು ಕಾನೂನಿನ ಅಂಶಗಳಿವೆ. ವಿವಿಧ ಇಲಾಖೆಗಳಿಂದ ಅಭಿಪ್ರಾಯವನ್ನು ಸಂಗ್ರಹ ಮಾಡಿ, ಸಮಸ್ಯೆ ಬಗೆಹರಿಸಲಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications