ಗದುಗಿನಲ್ಲಿದೆ 'ಸರಕಾರಿ ಕಾಮ-ರತಿ', ಏನಿದರ ವೈಶಿಷ್ಟ್ಯ?
ಗದಗ, ಮಾರ್ಚ್, 24: ಹೋಳಿ ಹುಣ್ಣಿಮೆ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ನಮ್ಮ ರಾಜ್ಯದಲ್ಲಿಯೇ ಅದೆಷ್ಟೋ ಗೊತ್ತಿಲ್ಲದ ವಿಶಿಷ್ಟ ಆಚರಣೆಗಳು ಜಾರಿಯಲ್ಲಿವೆ. ಊರಿನವರ ಆಭರಣದಿಂದಲೇ ಶೃಂಗಾರಗೊಳ್ಳುವ ಕಾಮ-ರತಿಯ ಆಚರಣೆ ಗದಗ ಜಿಲ್ಲೆಯಲ್ಲಿದ್ದು ಅದರ ಬಗ್ಗೆ ತಿಳಿದುಕೊಳ್ಳಲೇಬೇಕು.
ಹೋಳಿ ಹುಣ್ಣಿಮೆ ದಿನ ತ್ರಿಕೂಟೇಶ್ವರ ದೇವಸ್ಥಾನದ ಉತ್ತರ ಭಾಗದ ಮುಖ್ಯದ್ವಾರದಲ್ಲಿ ಕಳೆದ 151 ವರ್ಷದಿಂದ ಪ್ರತಿಷ್ಠಾಪಿಸುತ್ತಾ ಬಂದಿರುವ 'ಸರಕಾರಿ ಕಾಮ-ರತಿ' ರಾಜ್ಯದ ವಿಶಿಷ್ಟ ಆಚರಣೆಗಳಲ್ಲಿ ಒಂದು.[ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ]
ಇದು ಪ್ರಾಚೀನ ಕಿಲ್ಲಾ ಚಂದ್ರಸಾಲಿ ಸರಕಾರಿ ಕಾಮರತಿಯರು ಎಂದೇ ಪ್ರತೀತವಾಗಿದೆ. ಭಕ್ತರ ಇಷ್ಟಾರ್ಥವನ್ನು ಪೂರೈಸುವ ಹಾಗೂ ಬಂಗಾರದ ಆಭರಣಗಳಿಂದ ಸಿಂಗಾರಗೊಂಡ ಈ ಕಾಮರತಿಯನ್ನು 1865ರಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳದಿಂದ ಆಗಿನ ಹಿರಿಯರು ಹೊರಸಿನ ಮೇಲೆ ಕಾಮರತಿಯನ್ನು ಕೂಡಿಸಿಕೊಂಡು ಹೊತ್ತು ಕಾಲುನಡಿಗೆಯಿಂದ ತಂದಿರುವರೆಂದು ಹಿರಿಯರು ಹೇಳುವ ಮಾತು.[ಉತ್ತರ ಭಾರತದ ಹೋಳಿ ಆಚರಣೆ ಬಗ್ಗೆ ತಿಳಿದುಕೊಳ್ಳಿ]

ಅದೇ ಕಾಮರತಿಯರನ್ನು ಇಂದಿಗೂ ಕೂಡ ಶತ-ಶತಮಾನದಿಂದ ಹುಣ್ಣೆಮೆ ದಿವಸ ಪ್ರತಿಷ್ಠಾಪಿಸಿ, 5ನೇಯ ದಿವಸ ರಂಗ ಪಂಚಮಿ ದಿನ ಬಂಗಾರದ ಆಭರಣದಿಂದ ಆಲಂಕೃತಗೊಂಡ ರತಿ-ಮನ್ಮಥ ಮೆರವಣಿಗೆ ಗದಗ ನಗರದ ಹಳೆ ಮುಖ್ಯ ರಸ್ತೆಗಳಾದ ಕಿಲ್ಲಾ ಓಣಿಯಿಂದ ಶ್ರೀ ಜೋಡ ಮಾರುತಿ ದೇವಸ್ಥಾನ ಹಳೇ ಸರಫ ಬಜಾರ ವೀರನಾರಾಯಣ ದೇವಸ್ಥಾನ ರಸ್ತೆ, ಹನಮನ ಗರಡಿ, ಒಕ್ಕಲಗೇರಿ ಮುಖಾಂತರ ಮರಳಿ ಕಿಲ್ಲಾ ಬರುವದು ಒಂದು ವಿಶೇಷ.
ಸರಕಾರಿ ಕಾಮರತಿ ಎಂಬ ಹೆಸರು ಯಾಕೆ?: ಕಿಲ್ಲಾ (ಚಂದ್ರಸಾಲಿ)ಯಲ್ಲಿ ಪ್ರತಿಸ್ಥಾಪಿಸಲ್ಪಡುವ ಈ ಕಾಮರತಿಯರಿಗೆ ಸರಕಾರಿ ಕಾಮರತಿ ಎಂದು ಹೆಸರು ಇದೆ. ಇದಕ್ಕೆ ತನ್ನದೆ ಆದ ಇತಿಹಾಸ ಕೂಡ ಇದೆ.[ಚಿತ್ರಗಳಲ್ಲಿ ದೇಶದಾದ್ಯಂತ ಹೋಳಿ ಸಂಭ್ರಮ]
ಸ್ವಾತಂತ್ರ್ಯ ಪೂರ್ವ ಈ ಭಾಗದಲ್ಲಿ ಪೋಲೀಸ್ ರಾಣೆ ಮತ್ತು ಸರಕಾರಿ ಕಚೇರಿ ಇದ್ದವು. ಇಲ್ಲಿನ ಜನತೆ ಸಂಭ್ರಮದಿಂದ ಕಾಮರತಿಯನ್ನು ಪ್ರತಿಷ್ಠಾಪಿಸಿ ಬಂಗಾರದ ಆಭರಣದಿಂದ ಅಲಂಕರಿಸಿ ಭಕ್ತಿಯಿಂದ ಪೂಜಿಸಿ, ಕಾಮರತಿ ಉತ್ಸವ ಆಚರಿಸುತ್ತಿದ್ದರು. ಅಂದಿನ ಬ್ರಿಟಿಷ್ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಸರಕಾರವು ಉತ್ಸವಕ್ಕೆ 5 ರೂ.ನಂತೆ ಪ್ರತಿವರ್ಷ ದೇಣಿಗೆ ನೀಡುತ್ತಿತು ಎಂದು ಹಿಂದಿನ ಹಿರಿಯರು ಹೇಳುತ್ತಿದ್ದರು. ಇದೇ ಕಾರಣದಿಂದ ಈ ಹೆಸರು ಬಂದಿರಬಹುದು.

ಭಾವೈಕ್ಯತೆ : ಹಿಂದೂ-ಮುಸ್ಲಿಂ ಮಹಿಳೆಯರು ಅಲಂಕಾರಗೊಂಡ ಈ ಕಾಮರತಿಯ ಮೆರವಣಿಗೆ ಸಂದರ್ಭದಲ್ಲಿ ಪೂಜಿಸುತ್ತಾರೆ.ಯಾವುದೇ ಜಾತಿ ಭೇದ-ಭಾವ ಇಲ್ಲದೆ ಎಲ್ಲರೂ ಕಾಮರತಿ ಉತ್ಸವದಲ್ಲಿ ಪಾಲ್ಗೊಳ್ಳುವರು.
ಬಂಗಾರದ ಆಭರಣಗಳ ಅಲಂಕಾರ : ಕಾಮರತಿಗೆ ಪ್ರತಿಷ್ಠಾಪನೆಯ 4ನೇ ದಿನ ಸಂಜೆ 18 ಕೆ.ಜಿ. ಬಂಗಾರದ ಆಭರಣಗಳನ್ನು ತಂದು ಅಲಂಕಾರ ಮಾಡಲಾಗುವುದು. ಕಿಲ್ಲಾ ಓಣಿಯ ನಿವಾಸಿಗಳು ಹಾಗೂ ಭಕ್ತರು ರತಿದೇವಿಗೆ ಅಲಂಕಾರಕ್ಕೆ ತಮ್ಮ ಮನೆಯಲ್ಲಿರುವ ಬಂಗಾರದ ಆಭರಣ ಟಿಕಿ, ತಾಳಿಸರಾ, ಬಾಜುಬಂದ 5-6 ಸಟ್ಟು, ಚಪ್ಪಲಾರ, ಕಿವಿ ಓಲೆ ವಿವಿಧ ಬಂಗಾರ ಆಭರಣಗಳನ್ನು ತಂದು ರತಿದೇವಿಗೆ ಸಿಂಗರಿಸಲಾಗುತ್ತದೆ. [ದೇಶಕ್ಕೆ ರಂಗು ಚೆಲ್ಲಿದ ಹೋಳಿ ಹಬ್ಬ]
ಭಕ್ತರು ಸಿಂಗಾರಕ್ಕಾಗಿ ನೀಡುವ ಬಂಗಾರದ ಆಭರಣಗಳನ್ನು ಓಣಿಯ ಪ್ರಮುಖರು ಪಡೆದುಕೊಂಡು ಮೆರವಣಿಗೆಯ ನಂತರ ಪರತ ಬಂಗಾರದ ಸಾಮಾನುಗಳನ್ನು ಮನೆಗೆ ಹೋಗಿ ಒಪ್ಪಿಸುವ ಪರಿಪಾಠ ಬಹು ಹಿಂದಿನಿಂದ ನಡೆದುಕೊಂಡು ಬಂದಿದೆ.
ಕಾಮರತಿಯನ್ನು 5 ದಿನದವರೆಗೆ ಮಂಟಪದಲ್ಲಿ ಕೂರಿಸುತ್ತಾರೆ. ಭಕ್ತರು ತಂಡೋಪ ತಂಡವಾಗಿ ಬಂದು ತಮ್ಮ ಇಷ್ಟಾರ್ಥದ ನೆರವೇರಿಕೆಗಾಗಿ ಬೇಡಿಕೊಳ್ಳುವವರು, ಉಡಿ ತುಂಬುವವರು, ಯುವಕರು ಮದುವೆಯಾಗಬೇಕೆಂದು ರತಿ ದೇವಿಗೆ ಕಂಕಣ ಕಟ್ಟುವರು, ಯುವತಿಯರು ಮದುವೆಯಾಗಬೇಕೆಂದು ಕಾಮನಿಗೆ ಕಂಕಣ ಕಟ್ಟುತ್ತಾರೆ.
ಮಕ್ಕಳಾಗದವರು ಬೆಳ್ಳಿ ತೊಟ್ಟಿಲನ್ನು ಕಟ್ಟಿ ಬೇಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಯಾದವರು ದೇಣಿಗೆ ರೂಪದಲ್ಲಿ ಅನೇಕ ವಸ್ತುಗಳನ್ನು ಕೊಡುತ್ತಾರೆ. ಹೊಸತಾಗಿ ಮದುವೆ ಆದವರು ಮಡಿ ಸೀರೆಗಳನ್ನು ರತಿಗೆ ಉಡಿಸಲು ಕೊಡುತ್ತಾರೆ.[ಸಗಣಿಯಲ್ಲಿ ಬಡಿದಾಡಿಕೊಳ್ಳುವ ಗೋರೆಹಬ್ಬ]
ಕಾಮರತಿಯರಿಗೆ ಮನೆಯ ಚಿನ್ನದ ಆಭರಣಗಳನ್ನು ಹಾಕಿದರೆ ತಮ್ಮ ಮನೆಯಲ್ಲಿ ಬಂಗಾರ ಅಭಿವೃದ್ಧಿಯಾಗುತ್ತದೆಂದು ನಂಬಿಕೆ. ಬೇರೆ ಬೇರೆ ಊರಿನಿಂದ ತಮ್ಮ ಗದಗದಲ್ಲಿರುವ ಸಂಬಂಧಿಕರಲ್ಲಿ 8ದಿನ ಮುಂಚಿತವಾಗಿ ಬಂಗಾರದ ಆಭರಣಗಳನ್ನು ತಂದಿಟ್ಟಿರುತ್ತಾರೆ. ಮುಂಬೈ, ಪುಣೆ, ಬೆಂಗಳೂರು, ಹುಬ್ಬಳ್ಳಿ, ಬೆಳಗಾಂವ, ಕೊಲ್ಹಾಪುರ, ದಾವಣಗೆರೆ, ಗೂಡುರ, ಕೊಪ್ಪಳ ಮುಂತಾದ ಊರುಗಳಿಂದ ಆಭರಣ ಕೊಟ್ಟಿರುತ್ತಾರೆ. 18-20 ಕೆ.ಜಿ. ಬಂಗಾರ ಕೂಡಿರುತ್ತದೆ.
ಈ ಆಭರಣ 4ನೇ ದಿವಸ ರಾತ್ರಿ 8-11 ಗಂಟೆಯವರೆಗೆ ಕಾಮ-ರತಿಗೆ ಅಲಂಕಾರ ಮಾಡುತ್ತಾರೆ. ಇದನ್ನು ನೋಡಲು ಬೆಳಗಿನ ಜಾವದವರೆಗೆ ಜನರು ಬರುತ್ತಾರೆ. 5ನೇ ದಿನ ಬೆಳಿಗ್ಗೆ 10 ರಿಂದ ರಾತ್ರಿ 9-00 ಘಂಟೆಯವರೆಗೆ ಕಾಮರತಿಯ ಮೆರವಣಿಗೆ ಮರಳಿ ಬರುವುದು. ಇದುವರೆಗೂ ಯಾವುದೇ ರೀತಿಯ ಚಿಕ್ಕ ಆಭರಣ ಸಹ ಕಳೆದ ಉದಾಹರಣೆಗಳಿಲ್ಲ.
ಉತ್ಸವ ಸಮಿತಿ ಪ್ರಮುಖರಾದ ಪ್ರೇಮನಾಥಸಾ ಖೋಡೆ, ವೆಂಕಟೇಶ ಬಿ. ಖೋಡೆ, ಸುರೇಶ ಬಾಕಳೆ, ಬಾಬಾಸಾ ಖೋಡೆ, ಪರಶುರಾಮ ಆರ್. ಬದಿ, ವಂಸತ ಜಿ. ಖೋಡೆ, ರಮೇಶ ಖೋಡೆ, ಶಂಕರಸಾ ಬಸವಾ, ರಾಜೇಶ ಪಿ. ಖೋಡೆ, ಶಂಕರಸಾ ಬಿ. ಲದ್ವಾ, ವೆಂಕಟೇಶ ಭಾಂಡಗೆ, ಅಂಬಾಸಾ ಜಿ. ಖೋಡೆ, ಶ್ರೀಕಾಂತ ಪವಾರ, ಅಂಜು ಖಟವಟೆ, ಪ್ರಕಾಶ ಕಾಟೀಗರ, ಪರಶುರಾಮ ಮಿಸ್ಕೀನ್, ಮನೋಹರ ದಲಬಂಜನ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಾರೆ.
ನೂರಾರು ವರ್ಷದಿಂದ ಜರಗುತ್ತಿರುವ ಈ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅನುದಾನ ನೀಡಿ ಇಂತಹ ಸಂಪ್ರದಾಯಗಳು ಉಳಿಯುವಂತೆ ಪ್ರೋತ್ಸಾಹಿಸುವದು ಒಳಿತು.












Click it and Unblock the Notifications