ನಮ್ಮದು ಪ್ರೀತಿಸುವ ಹಿಂದುತ್ವ, ಬಿಜೆಪಿಯವರದ್ದು ದ್ವೇಷಿಸುವ ಹಿಂದುತ್ವ: ಬಿಜೆಪಿ ವಿರುದ್ದ ಮುಗಿಬಿದ್ದ ಸಿದ್ದರಾಮಯ್ಯ
ಬೆಂಗಳೂರು, ಡಿ 28: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ದ ಕಿಡಿಕಾರಿದ್ದಾರೆ. "ನಮ್ಮದು ಗಾಂಧೀಜಿ ಬೋಧಿಸಿದ ಹಿಂದುತ್ವ ಮತ್ತು ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದ್ದು ದ್ವೇಷಿಸುವ ಹಿಂದುತ್ವ"ಎಂದು ಟ್ವೀಟ್ ಮಾಡಿದ್ದಾರೆ.
ದೇಶಕ್ಕೆ ಕಾಂಗ್ರೆಸ್ ಕೊಡುಗೆ, ಗೋಹತ್ಯೆ, ಹಿಂದುತ್ವದ ಬಗ್ಗೆ ಸಿದ್ದರಾಮಯ್ಯ ಮಾಡಿರುವ ಸಾಲುಸಾಲು ಟ್ವೀಟ್ ಹೀಗಿದೆ: "ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಸಹೋದರತೆ, ಸೌಹಾರ್ದತೆ ಮುಂತಾದವುಗಳ ಬಗ್ಗೆ ಕಾರ್ಯಕರ್ತರಲ್ಲಿ ಬದ್ಧತೆಯಿದ್ದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ. ನಾನೇಕೆ ಕಾಂಗ್ರೆಸಿಗ? ಎಂದು ಪ್ರತಿಯೊಬ್ಬ ಕಾರ್ಯಕರ್ತ ತನ್ನನ್ನು ತಾನು ಪ್ರಶ್ನೆ ಮಾಡಿಕೊಂಡು, ಈ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕು".
"ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರು, ಹಿಂದುಳಿದವರು ಮತ್ತು ದಲಿತರಿಗೆ ಮೀಸಲಾತಿ ಕಲ್ಪಿಸಿದರೆ ಅದಕ್ಕೆ ವಿರೋಧ ಮಾಡಿ ಕೋರ್ಟ್ ಮೆಟ್ಟಿಲೇರಿದವರು ಬಿಜೆಪಿಯವರು".
"ಹಿಂದೆ ಮೀಸಲಾತಿಗೆ ವಿರೋಧ ಮಾಡಿದ ಬಿಜೆಪಿ ನಾಯಕರೇ ಇಂದು ಮೀಸಲಾತಿ ಪರ ಹೋರಾಟ ಮಾಡುತ್ತಿದ್ದಾರೆ ಎಂದರೆ ಇದರ ಹಿಂದಿನ ದುರುದ್ದೇಶವನ್ನು ಜನ ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಮೀಸಲಾತಿ ಪರವಾದ ಯಾವುದಾದರೂ ಒಂದು ಹೋರಾಟಕ್ಕೆ ಬಿಜೆಪಿ ಬೆಂಬಲಿಸಿತ್ತೇ" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕುತಂತ್ರ ರಾಜಕಾರಣಕ್ಕೆ ಎದುರಾಳಿಗಳು ಇಳಿದಿದ್ದಾರೆ
ಕಾಂಗ್ರೆಸ್ ಪಕ್ಷ ಯಾರ ಪರವಾಗಿ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದಿತ್ತೋ ಆ ಸಮುದಾಯದ ಜನರ ಮತಗಳೆ ಇಂದು ಹಂಚಿಹೋಗಿದೆ. ಸುಳ್ಳು ಆಶ್ವಾಸನೆಗಳು, ಪೊಳ್ಳು ಹೋರಾಟಗಳ ಮೂಲಕ ನಮ್ಮ ಪಕ್ಷದ ಮತಗಳನ್ನು ಒಡೆಯುವ ಕುತಂತ್ರ ರಾಜಕಾರಣಕ್ಕೆ ಎದುರಾಳಿಗಳು ಇಳಿದಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಬೇಕು.
ಕಾಂಗ್ರೆಸ್ ಪಕ್ಷ ರಾಜಕೀಯ ಲಾಭಕ್ಕಾಗಿ ಅಥವಾ ಅಧಿಕಾರ ನಡೆಸಬೇಕೆಂಬ ಇರಾದೆಯಿಂದ ಸ್ಥಾಪನೆಯಾದ ಪಕ್ಷವಲ್ಲ. ದೇಶ ಬ್ರಿಟಿಷರ ಆಳ್ವಿಕೆಯಿಂದ ನಲುಗಿ ಹೋಗಿದ್ದ ಕಾಲದಲ್ಲಿ, ಇಲ್ಲಿನ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಹಕ್ಕುಗಳನ್ನು ಕೊಡಿಸುವ ಹೋರಾಟಕ್ಕೆ ವೇದಿಕೆಯಾಗಲೆಂದೇ ಜನ್ಮತಳೆದದ್ದು ಕಾಂಗ್ರೆಸ್ - ಸಿದ್ದರಾಮಯ್ಯ ಟ್ವೀಟ್.

ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾದ ಆರ್.ಎಸ್.ಎಸ್
ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾದ ಆರ್.ಎಸ್.ಎಸ್, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಒಂದೇ ಒಂದು ಉದಾಹರಣೆಯಿದೆಯೇ? ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಡುವುದನ್ನೇ ದೇಶಪ್ರೇಮ ಅಂದುಕೊಂಡವರು ನಮಗೆ ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ?
ನಾವು ಮಹಾತ್ಮ ಗಾಂಧಿಯವರು ಬೋಧಿಸಿದ ಹಿಂದುತ್ವದ ಹಾದಿಯಲ್ಲಿ ನಡೆಯುವವರು. ಬಿಜೆಪಿಯವರಂತೆ ಧರ್ಮ, ದೇವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರಲ್ಲ. ನಾನು ಹಿಂದೂ, ಗಾಂಧೀಜಿಯವರು ಹಿಂದೂ, ಗೋಪಾಲಕೃಷ್ಣ ಗೋಖಲೆ ಅವರು ಹಿಂದೂ, ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದು ದ್ವೇಷಿಸುವ ಹಿಂದುತ್ವ - ಸಿದ್ದರಾಮಯ್ಯ ಟ್ವೀಟ್.

ನೆಮ್ಮದಿಯಿಂದ ಬದುಕುವ ಅವಕಾಶಗಳು ಸಿಕ್ಕಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಅಂತ ಪ್ರಶ್ನೆ ಮಾಡುವವರು ದೇಶಕ್ಕೇನು ಕೊಡುಗೆ ನೀಡಿದ್ದಾರೆ ಅಂತ ಮೊದಲು ಹೇಳಲಿ. ದೇಶದಲ್ಲಿ ಸಂವಿಧಾನ ಜಾರಿಯಾಗಿದ್ದರೆ, ಪ್ರತಿಯೊಬ್ಬರಿಗೂ ಆಹಾರ, ವಸತಿ, ಉದ್ಯೋಗ ಸೇರಿದಂತೆ ನೆಮ್ಮದಿಯಿಂದ ಬದುಕುವ ಅವಕಾಶಗಳು ಸಿಕ್ಕಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವೇ ಹೊರತು ಬಿಜೆಪಿಯಲ್ಲ.
ವಯಸ್ಸಾದ ಹಸು, ಗಂಡು ಕರುಗಳು ಹೀಗೆ ಅನುಪಯುಕ್ತ ಜಾನುವಾರುಗಳನ್ನು ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರೆ ನನ್ನನ್ನು ಗೋಮಾತೆಯ ವಿರೋಧಿ ಅಂತಾರೆ. ವಯಸ್ಸಾದ ಹಸುವೊಂದನ್ನು ಸಾಕಲು ರೈತನಿಗೆ ನಿತ್ಯ 100 ರೂಪಾಯಿ ಖರ್ಚಾಗುತ್ತೆ, ಅದನ್ನೇನಾದ್ರೂ ಬಿಜೆಪಿಯವರು ಕೊಡ್ತಾರಾ?" - ಸಿದ್ದರಾಮಯ್ಯ ಟ್ವೀಟ್.

ಕಾಂಗ್ರೆಸ್ ಉಳಿಯಬೇಕು, ಬೆಳೆಯಬೇಕು
ಕಾಂಗ್ರೆಸಿಗೆ ಹಿನ್ನಡೆ ಆಗುತ್ತಿದೆ ಎಂದರೆ, ದೇಶದ ಬಡವರು, ಹಿಂದುಳಿದವರು, ಶೋಷಿತ ವರ್ಗದ ಜನರಿಗೆ ಹಿನ್ನಡೆಯಾಗುತ್ತಿದೆ ಎಂದರ್ಥ. ಈ ಕಾರಣಕ್ಕಾಗಿ ಕಾಂಗ್ರೆಸ್ ಉಳಿಯಬೇಕು, ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು. ದೇಶದ ಭವಿಷ್ಯಕ್ಕಾಗಿ ನಾವೆಲ್ಲರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸೋಣ - ಸಿದ್ದರಾಮಯ್ಯ ಟ್ವೀಟ್.












Click it and Unblock the Notifications