'ಹಿಂದಿ ಹೇರಿಕೆ'ಯ ಅಡಕತ್ತರಿಯಲ್ಲಿ ದಕ್ಷಿಣ ಭಾರತದ ಬಿಜೆಪಿ ನಾಯಕರು
ಬೆಂಗಳೂರು, ಜುಲೈ 5: 'ಅತ್ತ ಧರೆ ಇತ್ತ ಪುಲಿ' ಎನ್ನುವಂತಾಗಿದೆ ದಕ್ಷಿಣ ಭಾರತದ ಬಿಜೆಪಿ ನಾಯಕರ ಪರಿಸ್ಥಿತಿ. ಕೇಂದ್ರ ಸರಕಾರದ ಹಿಂದಿ ಹೇರಿಕೆ ವಿರೋಧಿಸಿ ದಕ್ಷಿಣ ಭಾರತದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಹೋರಾಟ ಜೋರಾಗಿದೆ.
ಆದರೆ ಬಿಜೆಪಿ ನಾಯಕರಿಗೆ ಇತ್ತ ಜನರ ಅಭಿಪ್ರಾಯವನ್ನು ಬೆಂಬಲಿಸಿ ಹೇಳಿಕೆ ನೀಡುವಂತೆಯೂ ಇಲ್ಲ, ಅತ್ತ ಪಕ್ಷವನ್ನು ಬೆಂಬಲಿಸಿ ಹೇಳಿಕೆ ನೀಡುವಂತೆಯೂ ಇಲ್ಲ. ಒಟ್ಟಾರೆ ಬಿಜೆಪಿ ನಾಯಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಜನರ ಪರ ಧ್ವನಿ ಎತ್ತಿ ಹಿಂದಿ ಹೇರಿಕೆ ವಿರೋಧಿಸಿದರೆ ಪಕ್ಷದ ಶಿಸ್ತು ಮುರಿದಂತಾಗುತ್ತದೆ. ಅತ್ತ ಪಕ್ಷದ ಪರವಾಗಿ ಹೇಳಿಕೆ ನೀಡಿದರೆ ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಮೌನಕ್ಕೆ ಶರಣಾಗಿದ್ದಾರೆ ಹೆಚ್ಚಿನ ದಕ್ಷಿಣ ಭಾರತದ ನಾಯಕರು.
ಕೆಲವೊಮ್ಮೆ ಮಾಧ್ಯಮಗಳು ಮೈಕು ಹಿಡಿದು ಹೇಳಿಕೆಗೆ ಒತ್ತಾಯಿಸಿದಾಗ ಹೇಳಿಕೆ ನೀಡಿ ತೀವ್ರ ವಿರೋಧಕಕ್ಕೂ ಗುರಿಯಾಗಿದ್ದಿದೆ. ಕರ್ನಾಟಕದ ಮಾಜಿ ಸಚಿವ ಸಿಟಿ ರವಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಂಡು ಈಗಾಗಲೇ ಜನರ ವಿರೋಧ ಕಟ್ಟಿಕೊಂಡಿದ್ದಾರೆ. ಹೀಗಾಗಿ ಮತ್ತೆ ಜನರ ವಿರೋಧ ಕಟ್ಟಿಕೊಳ್ಳಲು ಹೊಸದಾಗಿ ನಾಯಕರು ಸಿದ್ಧರಿಲ್ಲ.
"ನಾವು ಅಸಹಾಯಕರು. ನಮ್ಮ ಕೇಂದ್ರ ನಾಯಕರಿಗೆ ಸ್ವಲ್ಪ ಹಿಂದಿ ಒಲವು ಜಾಸ್ತಿ. ಕೆಲವೊಮ್ಮೆ ಪಕ್ಷದ ಸಭೆಗಳಲ್ಲೇ ಹಿಂದಿಯ ಮಾಹಿತಿ ಕೈಪಿಡಿಯನ್ನು ನೀಡುತ್ತಾರೆ. ಒಮ್ಮೆ ಕೇಳಿದಾಗ ಹಿಂದಿಯಲ್ಲಿ ಮಾತ್ರ ಮುದ್ರಣ ಮಾಡಿದ್ದೇವೆ ಎಂದರು. ಕೇಂದ್ರ ನಾಯಕರು ಎಲ್ಲಾ ರೀತಿಯ ಸಂವಹನಕ್ಕೆ ಹಿಂದಿ ಸಾಕು ಎಂದುಕೊಂಡಿದ್ದಾರೆ, " ಎನ್ನುತ್ತಾರೆ ಕರ್ನಾಟಕದ ಬಜೆಪಿ ನಾಯಕರೊಬ್ಬರು.
ಆದರೆ, "ಇದರಲ್ಲಿ ಹಿಂದಿ ಹೇರಿಕೆ ಏನಿಲ್ಲ. ಹೆಚ್ಚುವರಿಯಾಗಿ ಹಿಂದಿ ಭಾಷೆಯನ್ನು ನೀಡಿದ್ದಾರೆ ಅಷ್ಟೆ, ದೂರದ ಊರುಗಳಿಂದ ಇಲ್ಲಿಗೆ ಬಂದವರಿಗೆ ಸಹಾಯಕವಾಗಲಿ ಎಂದು ಹಿಂದಿ ನೀಡಿದ್ದಾರೆ," ಎನ್ನುತ್ತಾರೆ ಬಿಜೆಪಿಯ ಮಾಜಿ ಸಚಿವರೊಬ್ಬರು.
ಹೀಗೆ ಬಿಜೆಪಿ ನಾಯಕರು ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರು ಮತ್ತು ಪಕ್ಷದ ನಡುವೆ ಅವರು ಗೊಂದಲದಲ್ಲಿ ಸಿಲುಕಿರುವುದಂತೂ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.