ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರಣೆ: ಬಳೆ, ಬಿಂದಿಗೆ ಇಲ್ಲದ ನಿರ್ಬಂಧ ಹಿಜಾಬ್ಗೆ ಏಕೆ?
ಬೆಂಗಳೂರು, ಫೆ.16: ಬಳೆ, ಬಿಂದಿಗೆ ಇಲ್ಲದ ನಿರ್ಬಂಧ ಹಿಜಾಬ್ ಗೆ ಮಾತ್ರ ಏಕೆ? ನಾನಾ ಧರ್ಮದವರು ನಾನಾ ಸಂಕೇತಗಳನ್ನು ಬಳಸುತ್ತಾರೆ, ಆದನ್ನೆಲ್ಲಾ ಬಿಟ್ಟು ಬಡ ಮುಸ್ಲಿಂ ವಿದ್ಯಾರ್ಥಿನಿಯರನ್ನೇ ಏಕೆ ಗುರಿ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಹೈಕೋರ್ಟ್ ನಲ್ಲಿ ಬಲವಾಗಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ ಅವರು ಸಮವಸ್ತ್ರದ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸ್ಥಳೀಯ ಶಾಸಕರಿಗೆ ನೀಡಿರುವುದು ಡೆತ್ ನೋಟ್ ಗೆ ಸಮ, ಮೂಲತಃ ರಾಜಕೀಯ ಪಕ್ಷಗಳಿಗೆ ಸೇರಿದ ವ್ಯಕ್ತಿಗಳಾದ ಶಾಸಕರಿಂದ ಯಾವ ರೀತಿಯ ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡ ಪೂರ್ಣಪೀಠ ನಾಲ್ಕನೇ ದಿನವೂ ವಿಚಾರಣೆ ನಡೆಸಿತು. ಸುಮಾರು 2 ಗಂಟೆ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.

ಶಾಸಕರಿಗೆ ಅಧಿಕಾರ ಮರಣಶಾಸನ:
ಮೊದಲಿಗೆ ವಾದ ಮಂಡಿಸಿದ ಪ್ರೊ. ರವಿವರ್ಮ ಕುಮಾರ್ ಸಿಡಿಸಿಗೆ ಸಮವಸ್ತ್ರ ನಿಗದಿ ಅಧಿಕಾರ ನೀಡಿರುವುದು ಕಾನೂನು ಬಾಹಿರ, ಸರ್ಕಾರಕ್ಕೆ ಆ ರೀತಿ ಅಧಿಕಾರ ನಿಯೋಜನೆ ಹಕ್ಕಿಲ್ಲ. ಸಮವಸ್ತ್ರದ ಬಗ್ಗೆ ಶಿಕ್ಷಣ ಕಾಯಿದೆಯಲ್ಲಿ ಉಲ್ಲೇಖವೇ ಇಲ್ಲ ಎಂದರು.
ಅಲ್ಲದೆ, ವಸತಿ ಯೋಜನೆಯ ಫಲಾನುಭವಿ ಗುರುತಿಸಲು ಶಾಸಕರಿಗೆ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗ ಸರ್ಕಾರದ ಆದೇಶಕ್ಕೆ ತಡೆ ಸಿಕ್ಕಿದೆ. ಶಾಸಕರಾದವರಿಗೆ ಆಡಳಿತಾಧಿಕಾರ ನೀಡಬಾರದು. ನೀಡಿದರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ಯಾರೇ ಶಾಸಕರಾದರೂ ಅವರು ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಪಕ್ಷಕ್ಕೆ ಶಾಲೆಯ ಉಸ್ತುವಾರಿ ನೀಡುವುದು ಸರಿಯಲ್ಲ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಶಾಸಕರು ನೋಡಿಕೊಳ್ಳಬಾರದು ಎಂದರು.
ಧರ್ಮದ ಆಧಾರದಲ್ಲಿ ತಾರತಮ್ಯ ಏಕೆ ?
ಪ್ರೊ.ರವಿಮರ್ವ ಕುಮಾರ್ ಅವರು, ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಈ ಕುರಿತು ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ತೀರ್ಪುಗಳಿವೆ. ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದೆ. ನಮ್ಮ ಅಹವಾಲು ಆಲಿಸಿಲ್ಲ, ನೋಟಿಸ್ ನೀಡದೆ ಶಿಕ್ಷಿಸಲಾಗಿದೆ. ಹಿಜಾಬ್ ಧರಿಸುವ ಕಾರಣಕ್ಕೆ ನಮ್ಮನ್ನು ಶಾಲೆಯಿಂದ ಹೊರಗಿಡಲಾಗಿದೆ. ಅಧಿಕಾರವೇ ಇಲ್ಲದ ಸಮಿತಿಯ ಆದೇಶ ಇದಕ್ಕೆ ಕಾರಣವಾಗಿ ಎಂದು ಆರೋಪಿಸಿದರು.
ಇನ್ನೂ ಮುಂದುವರಿದು, ಬಳೆ ಧರಿಸುವುದು, ಬಿಂದಿ ಇಡುವುದು ಧಾರ್ಮಿಕ ಗುರುತು ಅಲ್ಲವೇ? ಅದಕ್ಕೆ ಇಲ್ಲದ ನಿರ್ಬಂಧ ಹಿಜಾಬ್ ಗೆ ಮಾತ್ರ ಏಕೆ? ಮುಸ್ಲಿಂ ವಿದ್ಯಾರ್ಥಿನಿಯಾದ ಕಾರಣಕ್ಕೇ ನಿರ್ಬಂಧ ವಿಧಿಸಲಾಗಿದೆ. ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ, ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಕ್ರಾಸ್ ತೊಡುತ್ತಾರೆ. ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಸರ್ಕಾರ ಅದ್ಯಾವುದಕ್ಕೂ ನಿರ್ಬಂಧ ವಿಧಿಸಿಲ್ಲ ಎಂದು ಪ್ರಶ್ನಿಸಿದರು.
ಶಿಕ್ಷಣ ಪಡೆಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆ ಮೊದಲೇ ಕಡಿಮೆ ಇದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ತೀವ್ರ ಹಿನ್ನಡೆಯಾಗಲಿದ್ದು, ಅದು ಅವರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ, ಹಾಗಾಗಿ ಸರ್ಕಾರದ ಆದೇಶ ರದ್ದುಪಡಿಸಬೇಕೆಂದು ರವಿವರ್ಮಕುಮಾರ್ ಮನವಿ ಮಾಡಿ ವಾದಮಂಡನೆ ಮುಕ್ತಾಯಗೊಳಿಸಿದರು.
ದಿನದ ಕೊನೆಯಲ್ಲಿ ಮತ್ತೊಬ್ಬ ಅರ್ಜಿದಾರರ ಪರ ವಾದಮಂಡಿಸಿದ ಯೂಸೆಫ್ ಮುಕ್ಕಾಲ, ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕನ್ನು ಯಾರೂ ಕಸಿದುಕೊಳ್ಳಲಾಗದು. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಹಕ್ಕನ್ನು ಸರ್ಕಾರ ಗೌರವಿಸಬೇಕು, ಅದನ್ನು ದಮನಗೊಳಿಸಬಾರದು ಎಂದರು.












Click it and Unblock the Notifications