ಹಿಜಾಬ್; ಕರ್ನಾಟಕ ಹೈಕೋರ್ಟ್ನಲ್ಲಿ 10ನೇ ದಿನದ ವಿಚಾರಣೆ
ಬೆಂಗಳೂರು, ಫೆಬ್ರವರಿ 23; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ 10ನೇ ದಿನದ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ಬುಧವಾರ ಆರಂಭವಾಗಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠದಲ್ಲಿ ಒಂದು ವಾರದಿಂದ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಪೀಠದಲ್ಲಿದ್ದಾರೆ.

ಮಂಗಳವಾರ ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡನೆ ಮುಕ್ತಾಯ ಮಾಡಿದ್ದಾರೆ. ಈ ವಾರದಲ್ಲಿಯೇ ಅರ್ಜಿದಾರರು ವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖಿಕ ಸೂಚನೆ ನೀಡಿದ್ದಾರೆ.
ಬುಧವಾರದ ವಿಚಾರಣೆಯ ಮುಖ್ಯಾಂಶಗಳು
* ಅರ್ಜಿಗಳ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದ ಕೋರ್ಟ್
* ವಿದ್ಯಾರ್ಥಿನಿಯರು ಧಾರ್ಮಿಕ ಗುರುತು ಬಿಂಬಿಸುವ ವಸ್ತ್ರ ಧರಿಸಿದರೆ ವಿದ್ಯಾರ್ಥಿಗಳು ಏನು ಮಾಡಬೇಕು?. ಶಾಲೆಯಲ್ಲಿ ಹಿಂದೂ ಚಿಹ್ನೆ ಬಿಂಬಿಸುವ ವಸ್ತ್ರ ಧರಿಸಲು ಬಿಡುವುದಿಲ್ಲ. ಹಾಗಾದರೆ ಹಿಜಾಬ್ ಏಕೆ? ಎಂದು ವಾದ ಮಂಡಿಸಿದರು.
* 5 ರಿಂದ 6 ವಿದ್ಯಾರ್ಥಿಗಳು ಹಿಜಾಬ್ ಧರಿಸಿದರೆ ಉಳಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಲ್ಲ ಎಂದರೆ ಅವರು ಮುಸ್ಲಿಂ ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಆಗುವುದಿಲ್ಲವೇ?. ಪ್ರಾರ್ಥನೆಗೆ ಹೋಗುವಾದ ಧಾರ್ಮಿಕ ಉಡುಪು ಧರಿಸಬಹುದು ಎಂದು ವಾದ ಮಂಡಿಸಿದರು.
* ಟರ್ಕಿ ಮತ್ತು ದಕ್ಷಿಣ ಆಫ್ರಿಕಾದ ಪ್ರಕರಣಗಳನ್ನು ಉಲ್ಲೇಖಿಸಿ ಸಜ್ಜನ್ ಪೂವಯ್ಯ ವಾದ ಮಾಡುತ್ತಿದ್ದಾರೆ. ಐದರಿಂದ 6 ವಿದ್ಯಾರ್ಥಿಗಳಿಗೆ ಹಿಜಾಬ್ಗೆ ಅವಕಾಶ ನೀಡಿದರೆ ಉಳಿದ 95 ವಿದ್ಯಾರ್ಥಿಗಳು ಏನು ಮಾಡಬೇಕು? ಎಂದು ವಾದಿಸಿದರು.
* ಕಾಲೇಜುಗಳಲ್ಲಿ ಶಾಂತಿ & ಸುವ್ಯವಸ್ಥೆ ಕಾಪಾಡಿಕೊಳ್ಳುವುದು ನಮಗೆ ಮುಖ್ಯ. ಕೇವಲ 5 ವಿದ್ಯಾರ್ಥಿಗಳು ಹಿಜಾಬ್ ಪ್ರಶ್ನೆ ಎತ್ತಿದ್ದಾರೆ. ಸಾಮರಸ್ಯ ಕಾಪಾಡಲು ಸಮವಸ್ತ್ರ ಸಂಹಿತೆ ಸಹಾಯಕವಾಗಿದೆ ಎಂದು ಸಜ್ಜನ್ ಪೂವಯ್ಯ ವಾದಿಸಿದರು.
* ಸಜ್ಜನ್ ಪೂವಯ್ಯ ವಾದದ ವೇಳೆ ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರು ಇದು ಬಾಲಕಿಯರ ಕಾಲೇಜೋ?, ಕೋ ಎಜುಕೇಷನ್ ಇದೆಯೋ? ಎಂದು ಪ್ರಶ್ನಿಸಿದರು. ಇದು ಬಾಲಕಿಯರ ಕಾಲೇಜು ಎಂದು ಸಜ್ಜನ್ ಪೂವಯ್ಯ ವಾದ ಮಂಡಿಸಿದರು.
* ಕಾಲೇಜಿನಲ್ಲಿ 100ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಆದರೆ 5 ವಿದ್ಯಾರ್ಥಿಗಳು ಮಾತ್ರ ಹಿಜಾಬ್ ಪ್ರಶ್ನೆ ಎತ್ತಿದ್ದಾರೆ. ಈ ಕಾಲೇಜು ಹೊರತಾಗಿಯೂ ಉಡುಪಿಯಲ್ಲ 25 ಕಾಲೇಜುಗಳಿವೆ. ಅಷ್ಟು ಅಗತ್ಯವಿದ್ದರೆ ಆ ಕಾಲೇಜುಗಳಿಗೆ ಹೋಗಬಹುದಿತ್ತು. ಡಿಸೆಂಬರ್ ತನಕ ಹಿಜಾಬ್ ಪ್ರಶ್ನೆ ಯಾರೂ ಎತ್ತಿರಲಿಲ್ಲ. ಈಗ ಐವರು ಮಾತ್ರ ಈ ಪ್ರಶ್ನೆ ಎತ್ತಿದ್ದಾರೆ ಎಂದು ಸಜ್ಜನ್ ಪೂವಯ್ಯ ವಾದಿಸಿದರು.
* ಶಿಕ್ಷಣದ ಪ್ರಗತಿಗೆ ಧಕ್ಕೆಯಾದರೆ ಕ್ರಮ ತೆಗೆದುಕೊಳ್ಳಲು ಅಧಿಕಾರವಿದೆ. ಸಿಡಿಸಿ ಈಗಾಗಲೇ ಸಮವಸ್ತ್ರ ಸಂಹಿತೆ ಜಾರಿಗೆ ತಂದಿದೆ. ಇದು ವಿದ್ಯಾರ್ಥಿಗಳ ಸಮಾನತೆ ಬಗ್ಗೆ ಹೇಳುತ್ತದೆ ಎಂದು ವಾದ ಮಂಡಿಸಿದರು.
* ಯಾವುದೇ ಧರ್ಮದ ಆಚರಣೆ ಆರ್ಟಿಕಲ್ 25 (2) ಅಡಿ ನಿಯಂತ್ರಿಸಬಹುದು. ಧಾರ್ಮಿಕ ಉಡುಪು ಧರಿಸುವುದು ಕೇವಲ 25ಕ್ಕೆ ಬದ್ಧವಾಗಿದೆ ಎಂದು ಸಜ್ಜನ್ ಪೂವಯ್ಯ ವಾದಿಸಿದರು.
* ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ರಚನೆ ಮಾಡಲಾಗಿದೆ. ಶಾಸಕ ಎಂಬ ಕಾರಣಕ್ಕೆ ಅಧ್ಯಕ್ಷರನ್ನಾಗಿ ಮಾಡಿಲ್ಲ. ಸ್ಥಳೀಯ ಅವಶ್ಯಕತೆಗಳ ಪೂರೈಕೆಗಾಗಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಸಜ್ಜನ್ ಪೂವಯ್ಯ ವಾದಿಸಿದರು.
* ಸಿಡಿಸಿ ಕಾರ್ಯ ನಿರ್ವಹಣೆಗೆ ತನ್ನದೇ ಆದ ಚೌಕಟ್ಟು ಇದೆ. ಅರ್ಜಿದಾರರ ಎರಡು ಮನವಿಯಲ್ಲಿ ವ್ಯತ್ಯಾಸಗಳಿವೆ ಎಂದು ಸಜ್ಜನ್ ಪೂವಯ್ಯ ವಾದ ಮಂಡಿಸಿದರು.
* ಸರ್ಕಾರದ 2014ರ ಮಾರ್ಗಸೂಚಿಯನ್ನು ಇಲ್ಲಿ ಪ್ರಶ್ನೆ ಮಾಡಿಲ್ಲ. ಎಲ್ಲಾ ಪಕ್ಷದ ಶಾಸಕರು ಸಿಡಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ವಾದಿಸಿದರು.
* ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಪರವಾಗಿ ವಕೀಲ ಸಜ್ಜನ್ ಪೂವಯ್ಯ ವಾದ ಮಂಡನೆ ಆರಂಭಿಸಿದ್ದಾರೆ.
* ಕಾಲೇಜು ಆಡಳಿತ ಮಂಡಳಿ ಪರವಾಗಿ ವಕೀಲ ರಾಘವೇಂದ್ರ ಶ್ರೀವತ್ಸ ವಾದ ಮಂಡನೆ ಮಾಡುತ್ತಿದ್ದಾರೆ. ಅರ್ಜಿದಾರರು ಅಮೆರಿಕ ಕೋರ್ಟ್ ಕೇಸುಗಳನ್ನು ಉಲ್ಲೇಖಿಸಿದ್ದಾರೆ. ಆ ಕೇಸುಗಳನ್ನು ಇಲ್ಲಿ ಉಲ್ಲೇಖಿಸಲು ಆಗುವುದಿಲ್ಲ ಎಂದು ವಾದಿಸಿದರು.
* ಕಾಲೇಜು ಪ್ರಾಂಶುಪಾಲರ ಪರವಾಗಿ ಎಸ್. ಎಸ್. ನಾಗಾನಂದ್ ವಾದ ಮಂಡನೆ ಮುಕ್ತಾಯ ಮಾಡಿದರು.
* ಇರಾನ್ನಿಂದ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಾರೆ. ಅಲ್ಲಿ ಹಿಜಾಬ್ ವಿರುದ್ದ ಸಾರ್ವಜನಿಕ ಅಭಿಪ್ರಾಯವಿದೆ. ಇಂತಹ ವ್ಯವಸ್ಥೆಯಲ್ಲಿ ಬೇರೆ ದೇಶದಲ್ಲಿನ ಪದ್ಧತಿಗಳು ಬೇರೆ ಬೇರೆಯಾಗಿವೆ.
* ಬೇರೆ-ಬೇರೆ ದೇಶಗಳಿಂದ ವೈದ್ಯಕೀಯ, ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಭಾರತಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಮುಸ್ಲಿಂ ರಾಷ್ಟ್ರಗಳ ನಿಯಮ ಮತ್ತು ಭಾರತದ ನಿಯಮಗಳ ಕುರಿತು ವಕೀಲ ನಾಗಾನಂದ್ ಉಲ್ಲೇಖಿಸಿದರು.
* ಅಲಹಾಬಾದ್ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ವಕೀಲ ನಾಗಾನಂದ್ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಾದ ಮಂಡನೆ ಮಾಡುತ್ತಿದ್ದಾರೆ.
* ಶಾಲಾ/ ಕಾಲೇಜುಗಳಲ್ಲಿನ ನಿಯಮಗಳನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಶಿಸ್ತನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ವಕೀಲ ನಾಗಾನಂದ್ ವಾದಿಸಿದರು.
* ವಸ್ತ್ರ ಸಂಹಿತೆ ಬಗ್ಗೆ ನಾಗಾನಂದ್ ವಿವಿಧ ವಿಚಾರಗಳನ್ನು ಉಲ್ಲೇಖಿಸಿ ವಾದ ಮಂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪಂಚೆ ಧರಿಸಿ ಬರುತ್ತೇವೆ ಎಂದು ಪಟ್ಟು ಹಿಡಿದರೆ ಒಪ್ಪಲು ಸಾಧ್ಯವೇ? ಎಂದು ಕೇಳಿದರು.
* ಮನೆಯಲ್ಲಿ ವಿದ್ಯಾರ್ಥಿಗಳು ಇದ್ದಾಗ ಪೋಷಕರು ನಿಯಂತ್ರಿಸುತ್ತಾರೆ. ಶಾಲಾ/ ಕಾಲೇಜುಗಳಲ್ಲಿ ಯಾರು ನಿಯಂತ್ರಣ ಮಾಡಬೇಕು?. ತರಗತಿ, ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ತರಲು ಮುಖ್ಯವಾಗುತ್ತದೆ ಎಂದು ವಾದ ಮಂಡಿಸಿದರು.
* ಎಸ್. ಎಸ್. ನಾಗಾನಂದ್ ವಾದ ಮಂಡಿಸುವಾಗ ಆತ್ಮಸಾಕ್ಷಿ ಹಕ್ಕಿಗೂ ಧಾರ್ಮಿಕ ಹಕ್ಕಿಗೂ ಬಹಳ ವ್ಯತ್ಯಾಸವಿದೆ. ಧರ್ಮದ ವಿಚಾರ ನಿಯಮಗಳಿಂದ ಉಲ್ಲೇಖವಾಗುತ್ತದೆ ಎಂದರು.
* ವಿದ್ಯಾರ್ಥಿನಿಯರು ದೂರು ನೀಡಿದ ಬಗ್ಗೆ ಮಾಹಿತಿ ಇದೆಯೇ, ಕೋರ್ಟ್ಗೆ ಏಕೆ ಮಾಹಿತಿ ನೀಡಿಲ್ಲ? ಎಂದು ಮುಖ್ಯ ನ್ಯಾಯಮೂರ್ತಿಗಳು ಸರ್ಕಾರವನ್ನು ಪ್ರಶ್ನಿಸಿದರು. ದೂರಿನ ಬಗ್ಗೆ ಮಾಹಿತಿ ಇಲ್ಲ ಎಂದು ಎಜಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
* ಸೆಪ್ಟೆಂಬರ್ ತಿಂಗಳಿನಿಂದ ಸುಮ್ಮನಿದ್ದು, ಈಗ ದೂರು ನೀಡಿದ್ದಾರೆ. ತಡವಾಗಿ ನೀಡಿದ ದೂರನ್ನು ಪರಿಗಣಿಸುವುದು ಹೇಗೆ? ಎಂದು ವಕೀಲ ನಾಗಾನಂದ್ ವಾದಿಸಿದರು.
* ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ತರಗತಿಗೆ ಹಾಜರಾಗದಿದ್ದರೆ ಇಂಟರ್ನಲ್ ಅಂಕಗಳನ್ನು ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಅರ್ಜಿಯಲ್ಲಿ ಒಬ್ಬ ವಿದ್ಯಾರ್ಥಿನಿ ಅಫಿಡೆವಿಟ್ ಸಲ್ಲಿಕೆ ಮಾಡಿದ್ದಾರೆ ದುರುದ್ದೇಶದಿಂದ ದೂರು ನೀಡಿದ್ದಾರೆ ಎಂದು ವಕೀಲ ನಾಗಾನಂದ್ ವಾದ ಮಂಡಿಸಿದರು.
* ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ಉತ್ತರ ನೀಡಿ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಬಗ್ಗೆ ಮಾಹಿತಿ ಇದೆ. ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ ಎಂದರು.
* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಎಂಥಹ ಸಂಘಟನೆ. ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿ ಇರಬೇಕಲ್ಲವೇ? ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
* ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಪ್ರತಿಭಟನೆ ಆರಂಭಿಸಿತು ಎಂದು ವಾದ ಮಂಡಿಸಿದರು.
* ಕಾಲೇಜುಗಳಲ್ಲಿ 2004ರಿಂದಲೇ ಸಮವಸ್ತ್ರ ಜಾರಿಯಲ್ಲಿದೆ. 2018ರಲ್ಲಿಯೇ ಸಮವಸ್ತ್ರ ಮುಂದುವರೆಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಸ್. ಎಸ್. ನಾಗಾನಂದ ವಾದ ಮಂಡಿಸಿದರು.
* 2004ರಿಂದ ಇದೇ ಸಮವಸ್ತ್ರ ಇದೆ. ಆಗಿನಿಂದಲೂ ಯಾವುದೇ ಸಮಸ್ಯೆ ಇಲ್ಲ. ಆಧಾರ್ ಕಾರ್ಡ್ ವಿದ್ಯಾರ್ಥಿನಿಯರ ಆಧಾರ್ ಪ್ರತಿ ಹಾಜರುಪಡಿಸಿದ ವಕೀಲರು ಅವರು ಹಿಜಾಬ್ ಧರಿಸಿಲ್ಲ ಎಂದು ವಾದ ಮಂಡಿಸಿದರು.
* ಕಾಲೇಜು ಪ್ರಿನ್ಸಿಪಾಲರ ಪರವಾಗಿ ವಕೀಲ ಎಸ್. ಎಸ್. ನಿತ್ಯಾನಂದ ವಾದ ಮುಂದುವರೆಸಿದ್ದಾರೆ. ಮಂಗಳವಾರವೂ ಅವರು ವಾದ ಮಂಡಿಸಿದ್ದರು.
* ಕೆಲವು ಕಡೆ ಮಾಧ್ಯಮಗಳು ಈ ವಾರದಲ್ಲೇ ತೀರ್ಪು ಬರಲಿದೆ ಎಂದು ವರದಿ ಮಾಡುತ್ತಿವೆ. ವಾದ ಪೂರ್ಣಗೊಳ್ಳದೇ ತೀರ್ಪು ನೀಡುವುದು ಹೇಗೆ? ಎಂದು ಮುಖ್ಯ ನ್ಯಾಯಮೂರ್ತಿಗಳು ಕೋರ್ಟ್ನಲ್ಲಿ ಹೇಳಿದರು.
* ಕರ್ನಾಟಕ ಹೈಕೋರ್ಟ್ನಲ್ಲಿ ವಾದ ಮಂಡನೆ ಆರಂಭವಾಗಿದೆ.












Click it and Unblock the Notifications