ಶಿಕ್ಷಕರ ಪ್ರಶಸ್ತಿಗೂ ತಟ್ಟಿದ ಹಿಜಾಬ್ ವಿವಾದದ ಬಿಸಿ: ಘೋಷಿಸಿದ ಪ್ರಶಸ್ತಿ ತಡೆಹಿಡಿದ ಸರ್ಕಾರ
ಬೆಂಗಳೂರು, ಸೆಪ್ಟೆಂಬರ್ 06: ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯದ ವಿವಿಧ ಜಿಲ್ಲೆಯ ಶಿಕ್ಷಕರಿಗೆ ಪ್ರದಾನ ಮಾಡಿ ಗೌರವ ನೀಡಿದೆ. ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೂ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು ಆದರೆ ಕೆಲವು ಕಾರಣಾಂತರಗಳಿಂದ ನಿನ್ನೆ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ಸರ್ಕಾರ ತಡೆಹಿಡಿದಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯಾದಂತ್ಯ ಭಾರೀ ಸಂಚಲನ ಮೂಡಿಸಿದ್ದ ಕಾಲೇಜುಗಳಲ್ಲಿ ಹಿಜಾಬ್ ವಿವಾದದಲ್ಲಿ ರಾಮಕೃಷ್ಣ ಜಿಬಿ ಅವರ ಹೆಸರು ಕೇಳಿ ಬಂದಿತ್ತು. ಹಿಜಾಬ್ ವಿವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿಯರನ್ನು ಗೇಟ್ನಲ್ಲಿಯೇ ತಡೆದಿದ್ದು ಇವರೇ ಎನ್ನುವುದು ಗೊತ್ತಾಗುತ್ತಿದ್ದಂತೆ ರಾಜ್ಯ ಸರ್ಕಾರ ಇವರಿಗೆ ಘೋಷಣೆ ಮಾಡಿದ್ದ ಪ್ರಶಸ್ತಿಯನ್ನು ತಡೆಹಿಡಿದಿದೆ ಎನ್ನುವುದು ಕರಾವಳಿ ಭಾಗದ ನಾಯಕರ ಆರೋಪವಾಗಿದೆ.

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, 'ಈ ಹಿಂದಿನ ಸರ್ಕಾರ ಆದೇಶ ಮಾಡಿದಾಗ ಪ್ರಾಂಶುಪಾಲ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಪ್ರಶಸ್ತಿ ತಡೆಹಿಡಿಯಲಾಗಿದೆ. ಪ್ರಶಸ್ತಿಯನ್ನು ರದ್ದು ಮಾಡಿಲ್ಲ. ವಿದ್ಯಾರ್ಥಿಗಳ ಜೊತೆ ಪ್ರಿನ್ಸಿಪಾಲ್ ರಾಮಕೃಷ್ಣ ವರ್ತನೆ ಸರಿಯಿರಲಿಲ್ಲ. ಈ ಆರೋಪದ ಮೇಲೆ ಪ್ರಶಸ್ತಿ ತಡೆ ಹಿಡಿಯಲಾಗಿದ್ದು, ಈ ಬಗ್ಗೆ ಮತ್ತೆ ಪರಿಶೀಲನೆ ಮಾಡಿ ವರದಿ ನೀಡುತ್ತಾರೆ. ಆ ಭಾಗದಲ್ಲಿ ರಾಜಕಾರಣ ಮಾಡುತ್ತಾರೆ. ಅದು ಮಾಡೋದು ಬೇಡ' ಎಂದಿದ್ದರು.
ಪ್ರಾಂಶುಪಾಲರಾದ ರಾಮಕೃಷ್ಣ ಜಿಬಿ ಅವರಿಗೆ ಸಲ್ಲಬೇಕಾದ ಪ್ರಶಸ್ತಿಯನ್ನು ಸರ್ಕಾರ ತಡೆಹಿಡಿದಿರುವ ಬಗ್ಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು ಸರ್ಕಾರ ಮುಂದಾಗಿದೆ. ಉಡುಪಿ ಜಿಲ್ಲೆಯ ಜನರ ತಾಳ್ಮೆಯನ್ನು ಸಿದ್ದರಾಮಯ್ಯ ಸರ್ಕಾರ ಪರೀಕ್ಷೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿದ್ದು, 'ರಾಮಕೃಷ್ಣ ಅವರು ಆ ಭಾಗದ ವಿದ್ಯಾರ್ಥಿಗಳ ಮನಸ್ಸು ಗೆದ್ದವರು. ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕ ಕರ್ತವ್ಯ ಮಾಡಿದವರು. ಹಿಜಾಬ್ ಸಂದರ್ಭದಲ್ಲಿ ಅವರ ಕರ್ತವ್ಯ ಮಾಡಿದ್ದಾರಷ್ಟೇ. ಸರ್ಕಾರ ಸೂಚಿಸಿದ ನಿಯಮಾವಳಿ ಪಾಲಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಕ್ರಮ ಕೈಗೊಂಡಿದ್ದರು. ಶಾಲೆಯ ಶಿಸ್ತನ್ನು ಕಾಪಾಡಿದ್ದಕ್ಕೆ ಅವಮಾನ ಮಾಡುವುದು ಸರಿಯಲ್ಲ' ಎಂದಿದ್ದಾರೆ.
'ಪ್ರಾಂಶುಪಾಲರ ಸಾಧನೆಗಾಗಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಯಾರ ಮೂಲಕ ಒತ್ತಡ ತಂದು ಪ್ರಶಸ್ತಿ ಪಡೆದಿರಲಿಲ್ಲ. ಮನೆ ಬಾಗಿಲಿಗೆ ಹೋಗಿ ಭಿಕ್ಷೆ ಬೇಡದೇ ಪ್ರಶಸ್ತಿ ಪಡೆದಿದ್ದರು. ಅನುಭವದ ಆಧಾರದಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಸರ್ಕಾರ ಅಗೌರವ ಮೊಂಡುತನ ತೋರಿಸಿದೆ. ಇದು ಶಿಕ್ಷಕ ವೃತ್ತಿಗೆ ಮಾಡಿದ ಅವಮಾನ, ಅನ್ಯಾಯ' ಎಂದು ತೀವ್ರವಾಗಿ ಖಂಡಿಸಿದ್ದಾರೆ.












Click it and Unblock the Notifications