ಕರ್ನಾಟಕ ಹಿಜಾಬ್ ವಿವಾದ: ಸಂವಿಧಾನದ ನಿಯಮಗಳು ಸ್ಪಷ್ಟವಾಗಿವೆ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 7: ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ರಾಜ್ಯದಾದ್ಯಂತ ವ್ಯಾಪಿಸಿದೆ. ಕರಾವಳಿ ಮತ್ತು ಮಲೆನಾಡಿನ ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಮಾತ್ರವಲ್ಲ ದೇಶದಾದ್ಯಂತ ಸದ್ದು ಮಾಡುತ್ತಿದೆ.
ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನೇ ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ವಸ್ತ್ರ ಸಂಹಿತೆ ಆದೇಶದ ಹೊರತಾಗಿಯೂ ಕುಂದಾಪುರ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಬಂದಿದ್ದಾರೆ.
Recommended Video
ಕರ್ನಾಟಕದಲ್ಲಿ ಹಿಜಾಬ್ ಬಗ್ಗೆ ವಿವಾದಗಳು ಹೆಚ್ಚಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲೆ ಮತ್ತು ಕಾಲೇಜುಗಳಲ್ಲಿ ಏಕರೂಪತೆಯ ನಿಯಮಗಳನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅವುಗಳ ಪ್ರಕಾರ ಅನುಸರಿಸಲಾಗುವುದು ಎಂದು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡರು.

ಶಾಲಾ-ಕಾಲೇಜುಗಳಲ್ಲಿ ಏಕರೂಪತೆ ಬಗ್ಗೆ ಸಂವಿಧಾನದಲ್ಲಿ ನಿಯಮವಿದ್ದು, ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ನಿಯಮಗಳು ಏನು ಅನುಸರಿಸಬೇಕು ಎಂಬುದಕ್ಕೆ ಸ್ಪಷ್ಟವಾಗಿದೆ. ನಾವು ಆ ಪ್ರಕಾರ ಸಮವಸ್ತ್ರ ನಿಯಮ ಆದೇಶ ಹೊರಡಿಸಿದ್ದೇವೆ ಎಂದು ತಿಳಿಸಿದರು.
ಈ ಮಧ್ಯೆ, ಸೋಮವಾರ ಬೆಳಗ್ಗೆ ಮೂವರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕರ್ನಾಟಕದ ಉಡುಪಿ ಜಿಲ್ಲೆಯ ಕೋಟೇಶ್ವರ ಪಟ್ಟಣದ ಕಾಳಾವರ ವರದರಾಜ್ ಸರ್ಕಾರಿ ಕಾಲೇಜಿಗೆ ಬಂದಿದ್ದಾರೆ. ಇದನ್ನು ನೋಡಿದ ಹಿಂದೂ ವಿದ್ಯಾರ್ಥಿಗಳು ಪ್ರತಿಭಟನೆಯ ಸಂಕೇತವಾಗಿ ಕೇಸರಿ ಶಾಲುಗಳನ್ನು ಧರಿಸಲು ಪ್ರಾರಂಭಿಸಿದರು.
ಭಾನುವಾರದಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಏಕರೂಪದ ಡ್ರೆಸ್ ಕೋಡ್ ಅನ್ನು ಅನುಸರಿಸಲು ಇಷ್ಟಪಡದ ವಿದ್ಯಾರ್ಥಿಗಳು ಇತರ ಆಯ್ಕೆಗಳನ್ನು ಹುಡುಕಿಕೊಳ್ಳಲು ಸ್ವತಂತ್ರರು ಎಂದು ಹೇಳಿದರು.

"ಮಿಲಿಟರಿಯಲ್ಲಿ ನಿಯಮಗಳನ್ನು ಅನುಸರಿಸುವಂತೆಯೇ, ಇಲ್ಲಿಯೂ (ಶಿಕ್ಷಣ ಸಂಸ್ಥೆಗಳಲ್ಲಿ) ಅದೇ ರೀತಿ ಮಾಡಬೇಕು. ಇದನ್ನು ಅನುಸರಿಸಲು ಸಿದ್ಧರಿಲ್ಲದವರಿಗೆ ಆಯ್ಕೆಗಳು ಮುಕ್ತವಾಗಿವೆ. ಅವರು ಅದನ್ನು ಬಳಸಿಕೊಳ್ಳಬಹುದು,'' ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ ಎಂದು ಪಿಟಿಐ ಹೇಳಿದೆ.
ಹಿಜಾಬ್ ವಿವಾದ ಏನು?
ಜನವರಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರಿನ ಮುಸ್ಲಿಂ ಶಾಲಾ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಆರಂಭಿಸಿದಾಗ ಹಿಜಾಬ್ ಕುರಿತು ಗಲಾಟೆ ದಿನದಿಂದ ದಿನಕ್ಕೆ ಆರಂಭವಾಯಿತು.
ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಸ್ಕಾರ್ಫ್ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಿದ್ದರಿಂದ ಈ ಸಮಸ್ಯೆ ರಾಜ್ಯದ ಇತರ ಭಾಗಗಳಿಗೆ ಹರಡಿತು. ಹಲವಾರು ಹಿಂದೂ ವಿದ್ಯಾರ್ಥಿಗಳು ಪ್ರತಿಭಟಿಸಲು ಪ್ರಾರಂಭಿಸಿದರು ಮತ್ತು ತಮ್ಮ ಹೆಗಲಿಗೆ ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಬರಲು ಪ್ರಾರಂಭಿಸಿದರು. ಅಲ್ಲಿಂದ ಈ ವಿವಾದ ಮತ್ತಷ್ಟು ಉಲ್ಬಣಗೊಂಡಿತು.












Click it and Unblock the Notifications