ಹಿಜಾಬ್ಗೆ ಅವಕಾಶ, ಮಧ್ಯಂತರ ಆದೇಶ ತೆರವಿಗೆ ಅರ್ಜಿದಾರರ ವಾದ: ವಿಚಾರಣೆ ಮುಂದೂಡಿಕೆ
ಬೆಂಗಳೂರು, ಫೆ.15: ಸಮವಸ್ತ್ರದ ಮೇಲೆ ಹಿಜಾಬ್ ಹಿಜಾಬ್ ಧರಿಸಲು ಅವಕಾಶ ನೀಡಿ, ಮಧ್ಯಂತರ ಆದೇಶದಿಂದ ಅರ್ಜಿದಾರರ ಮೂಲಭೂತ ಹಕ್ಕು ಮೊಟಕಾಗಿರುವ ಹಿನ್ನೆಲೆಯಲ್ಲಿ ಆ ಆದೇಶ ತೆರವುಗೊಳಿಸಬೇಕು ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೈಕೋರ್ಟ್ ತ್ರಿಸದಸ್ಯ ಪೀಠವನ್ನು ಕೋರಿದರು.
ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆ ವಾದ ಮಂಡಿಸಿದ ನಂತರ ಕೊನೆಯಲ್ಲಿ, ಹಿಜಾಬ್, ಸ್ಕಾರ್ಫ್, ಕೇಸರಿ ಶಾಲು ಸೇರಿದಂತೆ ಯಾವುದೇ ಧರ್ಮದ ಸಂಕೇತವನ್ನು ಧರಿಸಿ ವಿದ್ಯಾರ್ಥಿಗಳು ತರಗತಿಗೆ ಬರುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ತೆರವುಗೊಳಿಸಬೇಕು. ಈ ಆದೇಶದಿಂದಾಗಿ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹೋಗದೆ ಇರುವ ಸ್ಥಿತಿ ಎಂದು ನ್ಯಾಯಪೀಠವನ್ನು ಕೋರಿದರು.
ಹಿಜಾಬ್ಗೆ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ರ ಅವರಿದ್ದ ಪೂರ್ಣಪೀಠ ಮಂಗಳವಾರ ವಾದ ಆಲಿಸಿದ ಬಳಿಕ ಬುಧವಾರ ಮಧ್ಯಾಹ್ನಕ್ಕೆ ವಿಚಾರಣೆಯನ್ನು ಮುಂದೂಡಿತು.

ದೇವದತ್ ಕಾಮತ್, ಹಿಜಾಬ್ ಧರಿಸಿದ ಒಂದೇ ಕಾರಣಕ್ಕೆ ತರಗತಿಯೊಳಗೆ ಬಿಡುತ್ತಿಲ್ಲ ಎಂದರು. ಅದಕ್ಕೆ ಸಿಜೆ "ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ನಿಬಂಧನೆಗಳಿಲ್ಲ ಸರಿ, ಆದರೆ ಧಾರ್ಮಿಕ ಸ್ವಾತಂತ್ರ್ಯ 25(1) ಶುರುವಾಗುವುದೇ ನಿಬಂಧನೆಗಳಿಂದ'' ಎಂದರು.
ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ತೆರಳುತ್ತಾರೆ. ಹೆಚ್ಚುವರಿಯಾಗಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಮುಂದುವರಿಸಬಾರದು ಎಂದು ದೇವದತ್ ನ್ಯಾಯಪೀಠವನ್ನು ಕೋರಿದರು.
ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ, ಟರ್ಕಿ, ಕೆನಡಾ ಮೊದಲಾದ ದೇಶಗಳ ಕಾನೂನುಗಳನ್ನು ಉಲ್ಲೇಖಿಸಿ. ನಾವು ಜಾತ್ಯತೀಯ ರಾಷ್ಟ್ರದಲ್ಲಿ ಬದುಕಿದ್ದೇವೆ, ಇಲ್ಲಿ ಧಾರ್ಮಿಕ ಆಚರಣೆ ಪಾಲನೆಗೆ ಅವಕಾಶ ನೀಡಬೇಕೆಂದು ಕೋರಿದರು.
ಬೊಹ್ರಾ ಸಮುದಾಯದ ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ ಪ್ರಸ್ತಾಪಿಸಿದ ಕಾಮತ್, ಸಮುದಾಯದ ಮುಖ್ಯಸ್ಥ, ಬೇರೆ ವ್ಯಕ್ತಿಗಳನ್ನು ಹೊರಗಿಡಲು ಅವಕಾಶವಿತ್ತು. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ 25(1) ಉಲ್ಲಂಘನೆಯಲ್ಲ, ಹೀಗೆಂದು ಕೋರ್ಟ್ ತೀರ್ಪು ನೀಡಿತ್ತು. ಸಾರ್ವಜನಿಕ ಸುವ್ಯವಸ್ಥೆ ಅಡಿ ಕ್ರಮಕ್ಕೆ ಸರ್ಕಾರಕ್ಕೆ ಪರಮಾಧಿಕಾರವಿಲ್ಲ. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ 25(2)(ಎ) ಅಡಿಯೂ ನಿರ್ಬಂಧಿಸುವಂತಿಲ್ಲ ಎಂದು ಅವರು ಸರ್ದಾರ್ ಸಹಿದ್ನಾ ಸೈಫುದ್ದೀನ್ ಪ್ರಕರಣ ಉಲ್ಲೇಖಿಸಿದರು.
ಧಾರ್ಮಿಕ ಆಚರಣೆಗೆ ವಿನಾಯ್ತಿ:
ಮೂಗುಬಟ್ಟು ಶಾಲೆಯ ಪಾಲಿಗೆ ಹೆಚ್ಚಿನ ಹೊರೆಯಾಗುತ್ತದೆಯೇ, ಈ ಅಂಶದ ಬಗ್ಗೆಯೂ ದಕ್ಷಿಣ ಆಫ್ರಿಕಾ ಕೋರ್ಟ್ ಚರ್ಚಿಸಿದೆ. ಶಾಲೆಯಲ್ಲಿ ಶಿಸ್ತು, ನಿಯಮ ಪಾಲನೆಗೆ ಪ್ರಾಮುಖ್ಯತೆ ಇದೆ. ಮೂಗುಬಟ್ಟು ಧರಿಸುವುದರಿಂದ ಅದಕ್ಕೆ ಧಕ್ಕೆಯಾಗುವುದಿಲ್ಲ. ಅಂತೆಯೇ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ವಿನಾಯಿತಿ ನೀಡಿದರೆ ಸಮಸ್ಯೆಯಾಗಲ್ಲ, ಹಿಜಾಬ್ ವಿಚಾರದಲ್ಲೂ ತಲೆಯ ಮೇಲಿನ ವಸ್ತ್ರ ಮಾತ್ರ ಕೇಳುತ್ತಿದ್ದೇವೆ. ಹೆಚ್ಚುವರಿ ವಸ್ತ್ರದಿಂದ ಶಾಲೆಯ ಸಮವಸ್ತ್ರ ನೀತಿಗೆ ಅಡ್ಡಿಯಾಗುವುದಿಲ್ಲ ಎಂದು ದೇವದತ್ ಕಾಮತ್ ವಾದಿಸಿದರು.
ಉರ್ದು ಶಾಲೆಗಳಲ್ಲೂ ಹಿಜಾಬ್ ಗೆ ಅವಕಾಶವಿಲ್ಲ:
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ಮೊಹಮ್ಮದ್ ತಾಹೀರ್, ಉರ್ದು ಶಾಲೆಗಳಿಗೂ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ ಎಂದರು.
ಆಗ ಸಿಜೆ, ನೀವು ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿಲ್ಲ. ಸೂಕ್ತ ಅರ್ಜಿ ಸಲ್ಲಿಸಿ ನೋಡೋಣ ಎಂದರು. ಆಗ ವಕೀಲರು, ನಾನೇ ಪ್ರಕರಣದಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದೇನೆ. ಇಂತಹ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅದನ್ನೇ ತಮ್ಮ ಗಮನಕ್ಕೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಆದರೆ ತಾಹೀರ್ ವಾದಕ್ಕೆ ಅಡ್ವೊಕೆಟ್ ಜನರಲ್ ಪ್ರಭುಲಿಂಗ ನಾವದಗಿ ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ಅರ್ಜಿ ಸಲ್ಲಿಸದೇ ವಾದಮಂಡಿಸುವುದು ಸರಿಯಲ್ಲ. ಅರ್ಜಿ ಸಲ್ಲಿಸಿದರೆ ಅದಕ್ಕೆ ಸರ್ಕಾರ ಆಕ್ಷೇಪ ಸಲ್ಲಿಸುತ್ತದೆ ಎಂದರು.












Click it and Unblock the Notifications