ಹೆದ್ದಾರಿಗಳಲ್ಲಿ ಗಸ್ತು: ಪೊಲೀಸರಿಗೆ ಬಂತು ಖಡಕ್ ಸುತ್ತೋಲೆ
ಬೆಂಗಳೂರು, ಜುಲೈ 10: ಹೆದ್ದಾರಿಗಳಲ್ಲಿ ಗಸ್ತು ವಾಹನಗಳ ಕಾರ್ಯಾಚರಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಸುತ್ತೋಲೆಯನ್ನು ಹೊರಡಿಸಲಾಗಿದೆ. ರಸ್ತೆ ಅಪಘಾತ ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಲಾಗಿದೆ.
ಈ ಕುರಿತು ಅಲೋಕ್ ಕುಮಾರ್, ಎಡಿಜಿಪಿ, ಸಂಚಾರ ರಸ್ತೆ ಸುರಕ್ಷತೆ, ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪರವಾಗಿ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆ ಹೆದ್ದಾರಿ ಗಸ್ತು ವಾಹನಗಳ ಕಾರ್ಯಾಚರಣೆ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಎಂಬ ವಿಚಾರವನ್ನು ಒಳಗೊಂಡಿದೆ.

ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆದ್ದಾರಿ ಗಸ್ತು ವಾಹನಗಳ ಪಾತ್ರ ಬಹಳ ಮಹತ್ವದ್ದಾಗಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಹಾಗೂ ಗಾಯಾಳುಗಳ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಈ ಹೆದ್ದಾರಿ ಗಸ್ತು ವಾಹನಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ ಎಂದು ಸುತ್ತೋಲೆ ಹೇಳಿದೆ.
ಈಗಾಗಲೇ ಎಲ್ಲಾ ಘಟಕಗಳಿಗೆ ಒಟ್ಟು 250 ಹೆದ್ದಾರಿ ಗಸ್ತು ವಾಹನಗಳನ್ನು ಹಂಚಿಕೆ ಮಾಡಲಾಗಿದ್ದು, ಹೆದ್ದಾರಿಗಳಲ್ಲಿ ಗಸ್ತು ತಿರುಗುತ್ತಿವೆ. ಈ ಹೆದ್ದಾರಿ ಗಸ್ತು ವಾಹನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಎಲ್ಲಾ ಘಟಕಾಧಿಕಾರಿಗಳು ನಿರ್ದೇಶನಗಳನ್ನು ತಪ್ಪದೇ ಪಾಲನೆ ಮಾಡಲು ಸೂಚಿಸಲಾಗಿದೆ.
ನಿರ್ದೇಶನಗಳು
* ಹೆದ್ದಾರಿ ಗಸ್ತು ವಾಹನಗಳ ಕಾರ್ಯತತ್ಪರತೆ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಬಗ್ಗೆ ಪ್ರತಿ 3 ಗಂಟೆಗೊಮ್ಮೆ ಆಯಾ ಜಿಲ್ಲಾ ನಿಯಂತ್ರಣ ಕೊಠಡಿ ಅಥವಾ ನಗರ ನಿಯಂತ್ರಣ ಕೊಠಡಿಯವರು ಮಾಹಿತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವುದು.
* ಹೆದ್ದಾರಿ ಗಸ್ತು ವಾಹನಗಳನ್ನು ಕಡ್ಡಾಯವಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಾತ್ರ ಕರ್ತವ್ಯಕ್ಕೆ ನಿಯೋಜಿಸುವುದು. ಸದರಿ ಕರ್ತವ್ಯಕ್ಕೆ ಹೊರತುಪಡಿಸಿ, ಹೆದ್ದಾರಿ ಗಸ್ತು ವಾಹನಗಳನ್ನು ಯಾವುದೇ ಕಾರಣಕ್ಕೂ ಇಆರ್ಸ್ಎಸ್ ಅಥವಾ ಬೆಂಗಾವಲು ಕರ್ತವ್ಯಕ್ಕೆ ಮತ್ತು ಇನ್ನಿತರ ಕರ್ತವ್ಯಕ್ಕೆ ನಿಯೋಜಿಸಬಾರದು ಮತ್ತು ಸದರಿ ಹೆದ್ದಾರಿ ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುವ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಯಾವುದಾದರೂ ಅಪಘಾತ ಸಂಭವಿಸಿದ ತಕ್ಷಣ, ಸದರಿ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಗೊಳಪಟ್ಟವರನ್ನು ಕೂಡಲೇ ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲು ಕ್ರಮ ತೆಗೆದುಕೊಳ್ಳುವುದು.
* ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅನವಶ್ಯಕವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ತಕ್ಷಣವೇ ತೆರವುಗೊಳಿಸಲು ಎಲ್ಲಾ ಹೆದ್ದಾರಿ ಗಸ್ತು ವಾಹನಗಳ ಸಿಬ್ಬಂದಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವುದು.
* ಎಲ್ಲಾ ಹೆದ್ದಾರಿ ಗಸ್ತು ವಾಹನಗಳಲ್ಲಿ ಕಡ್ಡಾಯವಾಗಿ P.A. System ಅನ್ನು ಅಳವಡಿಸಲು ಘಟಕಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವುದು ಹಾಗೂ ಸದರಿ PA, System ಮೂಲಕ ಟೋಲ್ ಗೇಟ್ ಬಳಿ ಸಾರ್ವಜನಿಕರಿಗೆ ಅತಿವೇಗವಾಗಿ ಚಾಲನೆ ಮಾಡದಿರುವ (Overspeeding), ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವ (Do not Drink and Drive), ಶಿಸ್ತು ಪಥಚಲನೆ (Lane Discipline) ಪಾಲಿಸುವ, ಹೆಲೈಟ್ ಇಲ್ಲದೇ ವಾಹನ ಚಾಲನೆ ಮಾಡದಿರುವ (Riding without Helmet) ಬಗ್ಗೆ ಹಾಗೂ ಸಂಚಾರ & ರಸ್ತೆ ಸುರಕ್ಷತೆಯ ಬಗ್ಗೆ ತಿಳುವಳಿಕೆ ನೀಡುವುದು.
* ಎಲ್ಲಾ ಹೆದ್ದಾರಿ ಗಸ್ತು ವಾಹನಗಳಲ್ಲಿ ಉಪಕರಣಗಳಾದ ಟಾಪ್ ಬಾರ್ ಲೈಟ್ (Top Bar Light), ಜಿ.ಪಿ.ಎಸ್ (GPS), ಸ್ಟಿಕರಿಂಗ್ (Reflective Stickering), PA System ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಆಯಾ ಘಟಕಾಧಿಕಾರಿಗಳು ತಪ್ಪದೇ ಮಾಡುವುದು ಹಾಗೂ ಸಂಬಂಧಿಸಿದ ಠಾಣಾ ವ್ಯಾಪ್ತಿಯ ಪಿ.ಐ ರವರು ಹೆದ್ದಾರಿ ಗಸ್ತು ವಾಹನದ ನಿರ್ವಹಣೆ (maintenance) ಕುರಿತು ವಾರಕ್ಕೊಮ್ಮೆ ಪರಿಶೀಲನೆ ನಡೆಸುವುದು ಹಾಗೂ ಸಂಬಂಧಪಟ್ಟ ಘಟಕಾಧಿಕಾರಿಗಳು ತಿಂಗಳಿಗೊಮ್ಮೆ ಹೆದ್ದಾರಿ ಗಸ್ತು ವಾಹನದ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸುವುದು.
* ಹೆದ್ದಾರಿ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳು ತಾವು ನಿರ್ವಹಿಸಿದ ಕರ್ತವ್ಯದ ಬಗ್ಗೆ ದಿನಚರಿ (diary) ಯನ್ನು ನಿರ್ವಹಣೆ ಮಾಡುವುದು.
* ಹೆದ್ದಾರಿಗಳಲ್ಲಿ ಉಂಟಾಗುವ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳ ಮೇಲೆ ನಿಗಾ ವಹಿಸಿ, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಂಡು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು.
* ಹೆದ್ದಾರಿ ಗಸ್ತು ವಾಹನಗಳ ಸಿಬ್ಬಂದಿಗಳು ಮೋಟಾರ್ ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘನೆ ಮಾಡುವವ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
* ಹೆದ್ದಾರಿ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು ಹಾಗೂ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಬಗ್ಗೆ ಅರಿವು ಇರಬೇಕಾಗಿರುತ್ತದೆ.
* ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಡ್ರ್ಯಾಗ್ ರೇಸಿಂಗ್ ಮತ್ತು ವೀಲ್ಹಿಂಗ್ಗಳನ್ನು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು.
* ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಾಲನೆ (wrongside driving) ಮಾಡುವಂತಹ ವಾಹನಗಳ ನಂಬರ್ ಅನ್ನು ಗುರುತು ಮಾಡಿಕೊಂಡು, ಸಾಧ್ಯವಾದಲ್ಲಿ ಅಂತಹ ವಾಹನಗಳ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿ, ಅಂತಹವರುಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುವುದು.
* ಹೆದ್ದಾರಿ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಹೆದ್ದಾರಿಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳನ್ನು (Parked vehicles) ತೆರವುಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
* ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಾನ್-ಮೋಟಾರೈಸ್ ವಾಹನಗಳಾದ ಸೈಕಲ್, ಟಾಂಗಾ, ಎತ್ತಿನಗಾಡಿಗಳು ಹಾಗೂ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಟ್ರಾಕ್ಟರ್ಗಳಂತಹ ವಾಹನಗಳ ಚಾಲನೆ ನಿಷೇಧಿಸಿರುವುದರಿಂದ, ಹೆದ್ದಾರಿ ಗಸ್ತು ವಾಹನಗಳ ಸಿಬ್ಬಂದಿಗಳು ಸದರಿ ಹೆದ್ದಾರಿಯಲ್ಲಿ ಇಂತಹ ವಾಹನಗಳು ಕಂಡು ಬಂದಲ್ಲಿ, ಸದರಿ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು (Number) ಸಂಬಂಧಪಟ್ಟ ಠಾಣಾಧಿಕಾರಿಗೆ ಮಾಹಿತಿ ನೀಡಿ, ಅಂತಹವರುಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುವುದು.












Click it and Unblock the Notifications