ಶೋಭಾ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು, ಜೂ. 25 : ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧದ ಹಣ ದುರ್ಬಳಕೆ ಪ್ರಕರಣದ ಕುರಿತು ಅವರನ್ನು ವಿಚಾರಣೆ ನಡೆಸಲು ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಶೋಭಾ ಕರಂದ್ಲಾಜೆ ಅವರು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವ ತನಕ ವಿಚಾರಣೆ ಮಾಡುವಂತಿಲ್ಲ ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಹಣ ದುರ್ಬಳಕೆ ಕಾಯ್ದೆ 2002ರ ಅಡಿ ಆರ್.ಟಿ.ನಗರದ ಫೆಡರಲ್ ಬ್ಯಾಂಕ್ ಖಾತೆಯಲ್ಲಿದ್ದ 70 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ಶೋಭಾ ಕರಂದ್ಲಾಜೆ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹಣ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯದ ಕ್ರಮವನ್ನು ಪ್ರಶ್ನಿಸಿ, ಜಾರಿ ನಿರ್ದೇಶನಾಲಯದ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೂ ಸಹ ಜಾರಿ ನಿರ್ದೇಶನಾಲಯ ತಮ್ಮನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ ಎಂದು ಶೋಭಾ ಕರಂದ್ಲಾಜೆ ಹೈಕೋರ್ಟ್ ಗೆ ಮಾಡಿರುವ ಮನವಿಯಲ್ಲಿ ತಿಳಿಸಿದ್ದರು.
ಮಂಗಳವಾರ ಮತ್ತು ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಜುಲೈ 10ರವರೆಗೆ ಶೋಭಾ ಕರಂದ್ಲಾಜೆ ಅವರನ್ನು ವಿಚಾರಣೆ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಮೇಲ್ಮನವಿ ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ನಿರ್ದೇಶನ ನೀಡಿದೆ.
ಏನಿದು ಪ್ರಕರಣ : 2007ರಲ್ಲಿ ಉದ್ಯಮದ ಪ್ರಾಂಚೈಸಿ ತೆರೆಯಲು ಹಣದ ಅವಶ್ಯಕತೆ ಬಿದ್ದಾಗ ಶೋಭಾ ಕರಂದ್ಲಾಜೆ ಆಗಿನ ಮೂಲಸೌಕರ್ಯ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಪುತ್ರ ಕೆ.ಎಸ್.ಜಗದೀಶ್ ಪಾಲುದಾರರಾಗಿರುವ ಇಂದು ಬಿಲ್ಡರ್ಸ್ ಕಡೆಯಿಂದ 70 ಲಕ್ಷ ರೂ. ಹಣ ಪಡೆದಿದ್ದರು. ನಂತರ ನಾನು ಆ ಹಣವನ್ನು ಪಾವತಿ ಮಾಡಿದ್ದರು.
ಆದರೆ, ಜಾರಿ ನಿರ್ದೇಶನಾಲಯ ಅವರು ಹೇಗೆ ಹಣ ಹಿಂತಿರುಗಿಸಿದರು ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 70 ಲಕ್ಷ ಹಣವನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ನಿರ್ದೇಶನಾಲಯದ ಈ ಕ್ರಮ ಖಂಡಿಸಿ ಶೋಭಾ ಕರಂದ್ಲಾಜೆ ಸಲ್ಲಿಸಿರುವ ಅರ್ಜಿ ನವದೆಹಲಿಯ ಮೇಲ್ಮನವಿ ಪ್ರಾಧಿಕಾರದ ಮುಂದೆ ಬಾಕಿ ಇದೆ.












Click it and Unblock the Notifications