ನ್ಯಾಯಮೂರ್ತಿ ಇಂದ್ರಕಲಾ ವಿರುದ್ಧ ತನಿಖೆಗೆ ಅಭಿಪ್ರಾಯ ಕೇಳಿದ ಹೈಕೋರ್ಟ್
ಬೆಂಗಳೂರು, ಅಕ್ಟೋಬರ್ 04: ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿಎಸ್ ಇಂದ್ರಕಲಾ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಪೊಲೀಸರ ಅಭಿಪ್ರಾಯವನ್ನು ಕೇಳಿದೆ.
ರಾಜ್ಯಪಾಲರಾಗಿ ನೇಮಕ ಮಾಡಲು ಹಣ ನೀಡಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ವಿರುದ್ಧ ತನಿಖೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ಹಾಗೂ ಪ್ರಕರಣದ ತನಿಖೆ ಕುರಿತಂತೆ ನ್ಯಾಯಮೂರ್ತಿ ಕೃಷ್ಣ ಧೀಕ್ಷಿತ್ ಅವರ ನ್ಯಾಯಪೀಠ ಕರ್ನಾಟಕ ಪೊಲೀಸರ ಅಭಿಪ್ರಾಯ ಕೇಳಿದೆ.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿಎಸ್ ಚಂದ್ರಕಲಾ ಅವರು ರಾಜ್ಯಪಾಲ ಹುದ್ದೆ ಕೊಡಿಸುವಂತೆ ಯುವರಾಜ್ ಸ್ವಾಮಿಗೆ 8.5 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.

ಬಿಜೆಪಿ ನಾಯಕರಿಗೆ ಆಪ್ತನೆಂದು ನಂಬಿಸಿ ಹಲವು ಗಣ್ಯರು ಹಾಗೂ ಉದ್ಯಮಿಗಳಿಂದ ಹಣ ಪಡೆದು ವಂಚಿಸಿರುವ ಆರೋಪದಲ್ಲಿ ಯುವರಾಜ್ ಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ವೇಳೆ ರಾಜ್ಯಪಾಲ ಹುದ್ದೆಗಾಗಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾರಿಂದ ಹಣ ಪಡೆದ ವಿಚಾರವೂ ಕೇಳಿಬಂದಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದವರು ರಾಜ್ಯಪಾಲ ಹುದ್ದೆಗೆ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ ಎನ್ನುವುದು ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದಂತೆ, ಹಾಗೆಯೇ ಅಷ್ಟೊಂದು ಮೊತ್ತ ನಿವೃತ್ತ ನ್ಯಾಯಮೂರ್ತಿ ಬಳಿ ಬಂದಿದ್ದಾದರೂ ಹೇಗೆಂಬ ಪ್ರಶ್ನೆ ಉದ್ಭವವಾಗಿದೆ.
ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾ.ಬಿಎಸ್ ಇಂದ್ರಕಲಾ ವಿರುದ್ಧ ತನಿಖೆ ಕೋರಿ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರಿಗೆ 2021ರ ಜನವರಿ 16 ರಂದು ದೂರು ನೀಡಿದ್ದರೂ ಪರಿಗಣಿಸಿರಲಿಲ್ಲ.
ಈವರೆಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಅರ್ಜಿದಾರರ ಪರ ವಕೀಲ ಅಮೃತೇಶ್ ಆರೋಪ ಮಾಡಿದ್ದಾರೆ.ಭ್ರಷ್ಟಾಚಾರ ನಿಗ್ರಹ ಕಾಯಿದೆ ಪ್ರಕಾರ ಲಂಚ ಪಡೆಯುವುದು ಮಾತ್ರವಲ್ಲ, ಲಂಚ ನೀಡುವುದು ಕೂಡ ಅಪರಾಧವಾಗಿದೆ.
ಈ ಪ್ರಕರಣದಲ್ಲಿ ನ್ಯಾಯಾಂಗದಲ್ಲಿ ಉನ್ನತ ಸ್ಥಾನದಲ್ಲಿದ್ದವರು ಈ ರೀತಿ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಬಗ್ಗೆ ಪೊಲೀಸರು ಅವರನ್ನು ತನಿಖೆಗೆ ಒಳಪಡಿಸಿಲ್ಲ ಮತ್ತು ಆ ಬಗ್ಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಇದು ಗಂಭೀರ ಪ್ರಕರಣ ಆಗಿರುವುದರಿಂದ ಪೊಲೀಸರಿಗೆ ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ತನಿಖೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ತಾನು ಆರೆಸ್ಸೆಸ್ ಸಂಘಟನೆಯಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದು, ಬಿಜೆಪಿಯಲ್ಲಿ ರಾಜ್ಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ವರೆಗಿನ ಸಂಪರ್ಕವಿದೆ ಎಂದು ಹೇಳಿದ್ದ. ಇದಕ್ಕೆ ಪೂರಕವಾಗಿ ರಾಜಕೀಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದ ಪ್ರಭಾವಿ ವ್ಯಕ್ತಿ ಯುವರಾಜ್ ಸ್ವಾಮಿ ರಾಜ್ಯಪಾಲರ ಹುದ್ದೆ ಸೇರಿದಂತೆ ನಾನಾ ಸರಕಾರಿ ಮತ್ತು ಸಾಂವಿಧಾನಿಕ ಹುದ್ದೆಗಳ ಆಮಿಷ ತೋರಿಸಿ ನೂರಾರು ಮಂದಿಯಿಂದ ಕೋಟ್ಯಂತರ ರೂ. ಹಣ ಪಡೆದು ವಂಚನೆ ಎಸಗಿದ್ದಾನೆ.
ಕೆಲ ತಿಂಗಳ ಹಿಂದೆ ಪೊಲೀಸರು ಆರೋಪಿ ಯುವರಾಜ್ ಸ್ವಾಮಿಯನ್ನು ಬಂಧಿಸಿದ್ದರು. ಕೋಟ್ಯಂತರ ರೂಪಾಯಿ ವಂಚನೆ ಹಿನ್ನೆಲೆ ರಾಜ್ಯಮಟ್ಟದಲ್ಲಿ ಈ ಪ್ರಕರಣ ಸದ್ದು ಮಾಡಿತ್ತು. ಸದ್ಯ ಆರೋಪಿ ಯುವರಾಜ್ ಸ್ವಾಮಿ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ನನಗೆ 2000ರಿಂದ ನಿವೃತ್ತ ಪೊಲೀಸ್ ಅಧಿಕಾರಿ ಪಾಪಯ್ಯ ದಂಪತಿ ಪರಿಚಯಸ್ಥರು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಯುವರಾಜ್ನನ್ನು ಪಾಪಯ್ಯ ಕರೆತಂದಿದ್ದರು. ಆಗ ಆರ್ಎಸ್ಎಸ್ ಮತ್ತು ಬಿಜೆಪಿಯಲ್ಲಿ ಬಹಳ ಪ್ರಭಾವಿ ವ್ಯಕ್ತಿ ಎಂದು ಯುವರಾಜ್ನನ್ನು ನನಗೆ ಪಾಪಯ್ಯ ಪರಿಚಯಿಸಿದ್ದರು.
'ನನಗೆ ಶಾಸ್ತ್ರ ಹೇಳಲು ಬರುತ್ತದೆ. ಅದರ ಪ್ರಕಾರ ನಿಮಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಸಿಗುವ ಸಾಧ್ಯತೆಗಳಿವೆ' ಎಂದನು. ಅಲ್ಲದೆ, ನನಗೆ ಬಿಜೆಪಿಯಲ್ಲಿ ಕೇಂದ್ರದ ಎಲ್ಲ ನಾಯಕರು, ಮಂತ್ರಿಗಳು ತುಂಬಾ ಹತ್ತಿರದ ಒಡನಾಡಿಗಳು ಎಂದು ಫೋಟೋ ತೋರಿಸಿದನು.
ಕೇಂದ್ರದ ನಾಯಕರು ಇಂತಹ ಪ್ರಭಾವಿ ಮಹಿಳೆ, ಧೀಮಂತ ನಾಯಕಿಯನ್ನು ಪ್ರಮುಖ ಸ್ಥಾನಕ್ಕೆ ಹುಡುಕುತ್ತಿದ್ದಾರೆ. ಇದಕ್ಕೆ ನೀವು ಪೂರಕವಾಗಿದ್ದರೆಂದು ನನಗೆ ಗೊತ್ತಾಯಿತು ಎಂದರು. ಈ ಮಾತಿಗೆ ಜೊತೆಯಲ್ಲಿ ಪಾಪಯ್ಯ ಸಹ ದನಿಗೂಡಿಸಿದರು. ಕೊನೆಗೆ ಪಾರ್ಟಿ ಫಂಡ್ಗೆ ಹಣ ಬೇಕಿದೆ ಎಂದು ಬೇಡಿಕೆ ಇಟ್ಟರು. ನನ್ನ ನಿವೇಶನ ಮಾರಾಟದಿಂದ ಬಂದ ಹಾಗೂ ಅಪಾರ್ಟ್ಮೆಂಟ್ ಮೇಲೆ ಪಡೆದ ಸಾಲ ಸೇರಿ .3.77 ಕೋಟಿಯನ್ನು ಆರ್ಟಿಜಿಎಸ್ ಮೂಲಕ ನೀಡಿದೆ.
ನಂತರ ನನ್ನನ್ನು ದೆಹಲಿಗೆ ಕರೆದೊಯ್ದು ಕೇಂದ್ರದ ಕೆಲವು ನಾಯಕರು ಮತ್ತು ಸಚಿವರನ್ನು ಭೇಟಿ ಮಾಡಿಸಿ ಕರೆತಂದಿದ್ದರು. ಮತ್ತೆ ಹಣಕ್ಕೆ ಆತ ಒತ್ತಾಯಿಸಿದ. ಆಗ .4.5 ಕೋಟಿಗಳನ್ನು ಸ್ನೇಹಿತರು ಹಾಗೂ ಹಿತೈಷಿಗಳ ಮೂಲಕ ಸಾಲ ಪಡೆದು ನೀಡಿದ್ದೆ. ಹೀಗೆ ಹಣ ಪಡೆದು ಆತ ನನಗೆ ಮೋಸ ಮಾಡಿದ್ದಾನೆ ಎಂದು ನಿವೃತ್ತ ನ್ಯಾಯಮೂರ್ತಿ ದೂರಿನಲ್ಲಿ ಹೇಳಿದ್ದಾರೆ.












Click it and Unblock the Notifications