ಮೊದಲ ಪಟ್ಟಿಗಿಂತ ಕಾಂಗ್ರೆಸ್ ಗೆ 2ನೇ ಪಟ್ಟಿ ತಲೆನೋವು; 40 ಕ್ಷೇತ್ರ ಬಾರೀ ಕಗ್ಗಂಟು: ಯಾರಿಗೆ ಒಲಿಯುತ್ತೆ ಅದೃಷ್ಟ?
ಬೆಂಗಳೂರು,ಏಪ್ರಿಲ್1: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಇತ್ತ 2023 ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಚುನಾವಣಾ ಆಯೋಗ ರಾಜ್ಯ ಚುನಾವಣೆಗೆ ದಿನಾಂಕವನ್ನು ನಿಗದಿ ಪಡಿಸಿದ್ದು ಮೇ ಹತ್ತರಂದು ಚುನಾವಣೆ, ಮೇ ಹದಿಮೂರರಂದು ಮತಎಣಿಕೆ ನಡೆಯಲಿದೆ.
ಈ ಬಾರಿ ಗೆಲ್ಲುವ ತವಕದಲ್ಲಿರುವ ರಾಜ್ಯ ಕಾಂಗ್ರೆಸ್ 124 ಜನರ ಮೊದಲ ಪಟ್ಟಿಯನ್ನ ಈಗಾಗಲೇ ಬಿಡುಗಡೆ ಮಾಡಿದ್ದು, ಮೊದಲ ಪಟ್ಟು ಬಿಡುಗಡೆ ನಂತರ ಪಕ್ಷದಲ್ಲಿ ಅಸಮಾಧಾನ ಹೆಚ್ಚಿದ್ದು, ಇತ್ತ ಕುರುಬ ಸಮುದಾಯದವರಿಗೆ ಹೆಚ್ಚಿನ ಸೀಟ್ ನೀಡಿಲ್ಲ ಎಂದು ಕುರುಬ ಸಮುದಾಯದ ಸ್ವಾಮೀಜಿಗಳು ಕಾಂಗ್ರೆಸ್ ಗೆ ಎಚ್ಚರಿಕೆಯನ್ನ ನೀಡಿದ್ದು, ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಿ ಎಂದು ಒತ್ತಾಯ ಹಾಕಿದ್ದಾರೆ.

ಇನ್ನೂ ಎರಡನೇ ಪಟ್ಟಿ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದ್ದು, 100 ಜನರ ಎರಡನೇ ಪಟ್ಟಿಯೇ ಕೈ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಒಂದು ಕಡೆ ಬಿಜೆಪಿ ಹಾಗೂ ಜೆಡಿಎಸ್ ಅಸಮಾಧಾನಿತರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್ ನಾಯಕರು ಅನ್ಯ ಪಕ್ಷದ ನಾಯಕರಿಗಾಗಿಯೇ 25 ರಿಂದ 30 ಸ್ಥಾನಗಳನ್ನ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.
ಈಗಾಗಲೇ ಚುನಾವಣಾ ಸ್ಕ್ರೀನಿಂಗ್ ಕಮಿಟಿಯು ಹರಸಾಹಸ ನಡೆಸಿ ಬಾಕಿ ಉಳಿದಿರುವ 100 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಿಗೆ ಒಂಟಿ ಹೆಸರು ಅಂತಿಮಗೊಳಿಸಿದೆ. ಆದರೆ ಇನ್ನುಳಿದ 40 ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಕಷ್ಟಕರವಾಗಿ ಪರಿಣಮಿಸಿದ್ದು, ಅದಕ್ಕಾಗಿ ಪ್ಯಾನೆಲ್ (ಎರಡು ಅಥವಾ ಎರಡಕ್ಕಿಂತ ಹೆಚ್ಚು ಹೆಸರು) ಸಿದ್ಧಪಡಿಸಿ ಪಟ್ಟಿಯನ್ನ ರೆಡಿ ಮಾಡಿದೆ.

ಇನ್ನೂ ಏಪ್ರಿಲ್ 10 ರೊಳಗೆ ಪಟ್ಟಿ ಬಿಡುಗಡೆ ಮಾಡುವ ಚಿಂತನೆ ನಡೆಸಿರುವ ಕಾಂಗ್ರೆಸ್ ಈ ಹಿನ್ನೆಲೆಯಲ್ಲಿ ಏಪ್ರಿಲ್ 3 ಅಥವಾ 4 ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿಯೇ ಕಾಂಗ್ರೆಸ್ ಎರಡನೇ ಪಟ್ಟಿಯ ಅಭ್ಯರ್ಥಿಗಳ ಕುರಿತು ಅಂತಿಮ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ.
ಈಗಾಗಲೇ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸುಲಭವಾಗಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯಲ್ಲಿ ಪ್ರಕಟಿಸಬೇಕಿರುವ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಸುದೀರ್ಘ ಸಭೆ ನಡೆಸಿ ಒಂದೇ ಸಂಭಾವ್ಯ ಅಭ್ಯರ್ಥಿಯ ಹೆಸರನ್ನು 60 ಕ್ಷೇತ್ರಗಳಿಗೆ ಮಾತ್ರ ಅಂತಿಮಗೊಳಿಸಿದೆ. ಪೈಕಿ 34 ಕ್ಷೇತ್ರಗಳಿಗೆ ಎರಡು ಹೆಸರು ಹಾಗೂ ಐದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಹೆಸರಿನ ಪ್ಯಾನೆಲ್ ಸಿದ್ಧಪಡಿಸಿ ಹೈಕಮಾಂಡ್ಗೆ ಶಿಫಾರಸು ಮಾಡಲು ತೀರ್ಮಾನಿಸಿದ್ದಾರೆ.
ಮೂಲಗಳ ಪ್ರಕಾರ ಪುಲಿಕೇಶಿನಗರ ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರ ಕ್ಷೇತ್ರಗಳಿಗೆ ಯಾವುದೇ ಬದಲಾವಣೆ ಮಾಡದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೊಳಲ್ಕೆರೆಗೆ ಹಿರಿಯ ದಲಿತ ನಾಯಕ ಆಂಜನೇಯ ಅವರ ಒಂಟಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಇನ್ನು ತೀವ್ರ ಪೈಪೋಟಿಯಿರುವ ತೀರ್ಥಹಳ್ಳಿ (ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥ ಗೌಡ) ಕ್ಷೇತ್ರಕ್ಕೆ ಉಭಯ ಆಕಾಂಕ್ಷಿಗಳ ನಡುವೆ ಹೊಂದಾಣಿಕೆ ಮೂಡಿಸುವ ಹೊಣೆಗಾರಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ 60 ಕ್ಷೇತ್ರಗಳಿಗೆ ಕೆ ಮಾತ್ರ ಒಂದೇ ಹೆಸರು ಫೈನಲ್ ಮಾಡಿದ್ದು, ಇನ್ನುಳಿದ 40 ಕ್ಷೇತ್ರಗಳು ಕಗ್ಗಂಟಾಗಿದೆ. ಈಗಾಗಲೇ ಸ್ಕ್ರೀನಿಂಗ್ ಕಮಿಟಿ ಸಿದ್ದಪಡಿಸಿದ ಪಟ್ಟಿಯನ್ನ ಹೈಕಮಾಂಡ್ ಗೆ ರವಾನಿಸಲಿದ್ದು, ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸಿ ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಇತ್ತ ಮೊದಲಿನಿಂದಲೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ ಬಣಗಳಿವೆ. ಇವರಲ್ಲಿ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನಗಳನ್ನ ಪಡುತ್ತಿದ್ದು, ಅನ್ಯ ಪಕ್ಷದಿಂದ ಬಂದ ನಾಯಕರಿಗೆ ಟಿಕೆಟ್ ನೀಡಬೇಕಾದ ಅನಿವಾರ್ಯ ಕಾಂಗ್ರೆಸ್ ನಾಯಕರಿಗಿದೆ.
ಒಟ್ನಲಿ ಈ ಬಾರಿಯೂ ಚುನಾವಣಾ ಕಾಂಗ್ರೆಸ್ ಪ್ರತಿಷ್ಠೆಯ ಕಣವಾಗಿದೆ. ಇತ್ತ ಎರಡನೇ ಪಟ್ಟಿಯ ಅಭ್ಯರ್ಥಿಗಳ ಆಯ್ಕೆಯೂ ಅಷ್ಟೇ ಕಷ್ಟಕರವಾಗಿದ್ದು, ಕಗ್ಗಂಟಾಗಿರುವ 40 ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೈಕಮಾಂಡ್ ಯಾವ ನಿರ್ಧಾರವನ್ನ ತೆಗೆದುಕೊಳ್ಳುತ್ತದೆ ಹಾಗೂ ಏಪ್ರಿಲ್ 10 ರೊಳಗೆ ಬಿಡುಗಡೆಯಾಗುವ ಎರಡನೇ ಪಟ್ಟಿಯಿಂದಾಗಿ ಉಂಟಾಗುವ ಅಸಮಾಧಾನವನ್ನ ಯಾವ ರೀತಿಯಲ್ಲಿ ಶಮನಗೊಳಿಸಲಿದ್ದಾರೆ ಎಂಬುದನ್ನ ಕಾದುನೋಬೇಕಾಗಿದೆ.












Click it and Unblock the Notifications