ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ
ಉಡುಪಿ, ಫೆಬ್ರವರಿ,27: ಉಡುಪಿ ಪ್ರವಾಸ ಇನ್ನು ಬಲು ಸುಲಭ. ಕೆಲವೇ ಕ್ಷಣಗಳಲ್ಲಿ ಕರಾವಳಿಯ ಪ್ರಸಿದ್ಧ ಸ್ಥಳಗಳನ್ನು ಒಂದು ಸುತ್ತು ಹಾಕಿಕೊಂಡು ಬರಬಹುದು. ಹೌದು ಉಡುಪಿಯ ಪ್ರವಾಸೋದ್ಯಮ ಇಲಾಖೆ ಹೊಸದೊಂದು ಮಾರ್ಗ ಹುಡುಕಿದೆ. ಅದುವೇ 'ಹೆಲಿ ಟೂರಿಸಂ'. ಇದು ರಾಜ್ಯದ ಪ್ರಥಮ ಹಾಗೂ ಅದ್ಭುತ ಕಲ್ಪನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಅನುಕೂಲದ ದೃಷ್ಠಿಯಿಂದ ಈ ಯೋಜನೆಯನ್ನು ಆರಂಭಿಸಿದ್ದು, ದೆಹಲಿ ಮೂಲದ ಚಿಪ್ಸನ್ ಏವಿಯೇಶನ್ ಸಂಸ್ಥೆ ಈ 'ಹೆಲಿ ಟೂರಿಸಂ'ನ ಜವಾಬ್ದಾರಿ ವಹಿಸಿಕೊಂಡಿದೆ. ಈ ಯೋಜನೆಯಿಂದ ಗಂಟೆ ಲೆಕ್ಕದಲ್ಲಿ ಬಾಡಿಗೆ ಪಾವತಿಸಿ ಅಂದುಕೊಂಡ ಪ್ರವಾಸಿ ತಾಣಕ್ಕೆ ಹಾರಿಬಿಡಬಹುದು.[ಇ ಟೂರಿಸ್ಟ್ ವೀಸಾ 37 ದೇಶಕ್ಕೆ ವಿಸ್ತರಣೆ]
ಹೆಲಿ ಟೂರಿಸಂ ಉದ್ದೇಶವೇನು?
ಉಡುಪಿ ಜಿಲ್ಲೆಯ ಧಾರ್ಮಿಕ ಪ್ರವಾಸಿ ಕೇಂದ್ರಗಳಾದ ಕೊಲ್ಲೂರು, ಉಡುಪಿ, ಮಂದಾರ್ತಿ, ಕರಾವಳಿಯ ಕಡಲ ತೀರದ ವಿಹಾರಕ್ಕೆ ಸಾವಿರಾರು ಜನ ಆಗಮಿಸುತ್ತಾರೆ. ಆದರೆ ಕೇರಳ, ತಮಿಳುನಾಡಿನಿಂದ ವಿಮಾನದ ಮೂಲಕ ಮಂಗಳೂರಿಗೆ ಬರುವ ಪ್ರವಾಸಿಗರು ಬಾಡಿಗೆ ವಾಹನ ಮಾಡಿಕೊಂಡೇ ಕೊಲ್ಲೂರು, ಮುರ್ಡೇಶ್ವರ, ಉಡುಪಿ ದೇವಸ್ಥಾನಗಳಿಗೆ ಭೇಟಿ ಕೊಡಬೇಕಾಗಿದೆ. ಈ ತೊಂದರೆ ತಪ್ಪಿಸುವ ಸಲುವಾಗಿ ಉಡುಪಿ ಜಿಲ್ಲಾಡಳಿತ 'ಹೆಲಿ ಟೂರಿಸಂ' ಪ್ರಾರಂಭಿಸಿದೆ.
ಸದ್ಯಕ್ಕೆ ಮಂಗಳೂರಿನಿಂದ ಕೊಲ್ಲೂರು, ಮುರುಡೇಶ್ವರಕ್ಕೆ ಮಾತ್ರ
ಸದ್ಯ ಮಂಗಳೂರಿನಿಂದ ಕೊಲ್ಲೂರು ಮತ್ತು ಮುರುಡೇಶ್ವರಕ್ಕೆ ಹೋಗುವ ಪ್ರವಾಸಿಗರಿಗೆ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಲಿ ಟೂರಿಸಂನ್ನು ಯಾವ ರೀತಿ ಬಳಸಬಹುದು ಅನ್ನುವುದರ ಬಗ್ಗೆ ಚಿಂತನೆ ನಡೆಯುತ್ತಿದೆ.[ಪ್ರವಾಸಿಗರೆ, ಗ್ರೀನ್ ಪೊಲೀಸರಿದ್ದಾರೆ ಹೆದರದಿರಿ]
15 ನಿಮಿಷಕ್ಕೆ 3 ಸಾವಿರ ರೂ. !
ಉಡುಪಿಯ ಸುತ್ತಮುತ್ತ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನೋಡಬೇಕಾದರೆ ಒಬ್ಬರು 15 ನಿಮಿಷಕ್ಕೆ 3000 ರೂ. ನೀಡಬೇಕು. ಮಂಗಳೂರಿನಿಂದ ಕೊಲ್ಲೂರಿಗೆ ಹೋಗಿ ಬರಲು ಹೆಲಿ ಯಾನಕ್ಕೆ 97 ಸಾವಿರ ರೂ. ಖರ್ಚು ತಗುಲಲಿದೆ.[ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]
ಈ ಹೆಲಿಕಾಪ್ಟರ್ ನಲ್ಲಿ ಒಂದು ಬಾರಿಗೆ 6 ಮಂದಿ ಪ್ರಯಾಣಿಸಬಹುದು. ಈ ಮೂಲಕ ಪ್ರವಾಸೋದ್ಯಮಕ್ಕೆ ಹೊಸದೊಂದು ಆಯಾಮ ಸೇರ್ಪಡೆಗೊಂಡಿದೆ. ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನು ಈ ಸಂಸ್ಥೆ ನೀಡುತ್ತಿದೆ. ಒಟ್ಟಾರೆ ಮುಂಬರುವ ರಜಾ ದಿನಗಳಲ್ಲಿ ಉಡುಪಿಯ ಸುತ್ತ ಆಗಸದಲ್ಲಿ ಹೆಲಿಕಾಪ್ಟರ್ ಹಾರಾಟ ಜೋರಾಗಲಿದೆ.
ಇದರಲ್ಲಿ ಹಣವಂತರು ಹಾರಾಡಬಹುದು. ಅವರ ಸಮಯ ಉಳಿಯಬಹುದು. ಪ್ರವಾಸೋದ್ಯಮ ಇನ್ನಷ್ಟು ಆಕರ್ಷಣೀಯವಾಗಬಹುದು ನಿಜ. ಆದರೆ ಗಗನ ಪಯಣ ಬಡ, ಮಧ್ಯಮ ವರ್ಗದ ಮಂದಿಗೆ ಮಾತ್ರ ಗಗನ ಕುಸುಮವಾಗಿದೆ. ಹೈಟೆಕ್ ಪ್ರವಾಸೋದ್ಯಮದ ಜೊತೆ ಸಾಮಾನ್ಯ ಪ್ರವಾಸಿಗನಿಗೂ ಉತ್ತಮ ಅನುಕೂಲಗಳು ದೊರೆಯುವಂತಾಗಬೇಕಿದೆ.